ಶನಿವಾರಸಂತೆ: ಪಂಚಾಯಿತಿ ರಾಜ್ಯ ಅಧಿನಿಯಮದ ಅನ್ವಯ ಸರ್ಕಾರ ಪ್ರತಿಗ್ರಾಮ ಪಂಚಾಯಿತಿಯಲ್ಲಿ ಒಂದು ವರ್ಷದ ವಹಿವಾಟು, ಕಾಮಗಾರಿ ಪ್ರಗತಿ, ಪಂಚಾಯಿತಿಯಲ್ಲಿ ಆಗಿರುವ ವರ್ಷದ ಕಾರ್ಯಗಳು, ಯೋಜನೆಗಳು ಅದರ ಕಾರ್ಯವೈಖರಿ ಇತ್ಯಾದಿ ವಿಚಾರಗಳನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡುವುದು ಮತ್ತು ಗಮನಕ್ಕೆ ತರುವುದೇ ಜಮಾಬಂಧಿ ಕಾರ್ಯಕ್ರಮದ ಉದ್ದೇಶ ಎಂದು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಪಿ. ಪುಟ್ಟಸ್ವಾಮಿ ಹೇಳಿದರು.
ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ 2012–13ನೇ ಸಾಲಿನ ಜಮಾಬಂಧಿ ಕಾರ್ಯಕ್ರಮದಲ್ಲಿ ನೋಡೆಲ್ ಅಧಿಕಾರಿಯಾಗಿ ಪಾಲ್ಗೊಂಡು ಪಂಚಾಯಿತಿಯ ಒಂದು ವರ್ಷದ ಕಾರ್ಯಕ್ರಮದ ಪಟ್ಟಿಯನ್ನು ಪರಿಶೀಲಿ ಮಾತನಾಡಿದರು.
ಪಂಚಾಯಿತಿಯಲ್ಲಿ 12 ವ್ಯಾಪಾರಿ ಮಳಿಗೆಗಳಿದ್ದು ವರ್ಷಕ್ಕೆ ರೂ. 1,85,500 ಆದಾಯ ಬರುತ್ತಿದೆ. ಕಂದಾಯ ವಸೂಲಾತಿ ಕಡಿಮೆ ಪ್ರಮಾಣ ಇದ್ದು, ಪಿ.ಡಿ.ಒ. ಹಾಗೂ ಬಿಲ್ಕಲೆಕ್ಟರ್ ಮನೆಮನೆಗೆ ತೆರಳಿ ಕಡ್ಡಾಯವಾಗಿ ವಸೂಲು ಮಾಡಬೇಕು. ಬಡವರು ಕಂದಾಯ ಕಟ್ಟುತ್ತಾರೆ. ಆದರೆ, ಶ್ರೀಮಂತರು ಕಂದಾಯ ಕಟ್ಟಲು ಮೀನ–ಮೇಷ ಎಣಿಸುತ್ತಾರೆ. ಪಂಚಾಯಿತಿಗೆ ಒಳ್ಳೆಯ ಅನುದಾನ ಸಿಗುತ್ತಿದೆ. ಇನ್ನೂ ಹೆಚ್ಚಿನ ಪ್ರಗತಿಯತ್ತ ಕೊಂಡೊಯ್ಯಿರಿ ಎಂದು ಹೇಳಿದರು.
ಪಂಚಾಯಿತಿ ಮಾಜಿ ಅಧ್ಯಕ್ಷ ಶರತ್ಶೇಖರ್, ಮೊಹ್ಮದ್ಪಾಷ, ಅಮೀರ್, ಸಿ.ಎಂ. ಪುಟ್ಟಸ್ವಾಮಿ, ಎನ್.ಕೆ. ಅಪ್ಪಸ್ವಾಮಿ ಹಾಗೂ ಅಂಗನವಾಡಿ ಶಿಕ್ಷಕಿಯರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಚಂದ್ರಿಕಾ ಅವರು ಪಂಚಾಯಿತಿ ಸಭೆಗಳಿಗೆ ಹಾಜರಾಗದಿರುವ ಬಗ್ಗೆ ಶರತ್ಶೇಖರ್ ಅಸಮಾಧಾನ ವ್ಯಕ್ತಪಡಿಸಿದರು.
ಪಂಚಾಯಿತಿ ಅಧ್ಯಕ್ಷೆ ಭುವನೇಶ್ವರಿ ಜಮಾಬಂಧಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಸವಿತಾ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಧನಲಕ್ಷ್ಮಿ, ಸದಸ್ಯರಾದ ಎಸ್.ಎನ್. ರಘು, ಮೊಹ್ಮದ್ಗೌಸ್, ಆರ್.ವಿ. ಕುಮಾರ್, ಡಿ.ಎನ್. ರಾಜಶೇಖರ್, ಚಂದ್ರಕಲಾ, ಜ್ಯೋತಿ, ಅಭಿವೃದ್ಧಿ ಅಧಿಕಾರಿ ಬಿ.ಈ. ಶಿವಣ್ಣ ಹಾಗೂ ಜಿಲ್ಲಾ ಪಂಚಾಯಿತಿ ಎಂಜಿನಿಯರ್ ಸಲೀಂ ಇದ್ದರು.