ಸಂತೇಬೆನ್ನೂರು: ಇಲ್ಲಿನ ವಿನಾಯಕ ಬಡಾವಣೆಯ ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಆಕಸ್ಮಿಕವಾಗಿ ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿ ಸಾವನಪ್ಪಿದ ಯೋಧ ಆಂಜಿನಪ್ಪ ಅವರ ಶವ ಸಂಸ್ಕಾರವನ್ನು ಸರ್ಕಾರಿ ಗೌರವದೊಂದಿಗೆ ಶನಿವಾರ ರಾತ್ರಿ ನೆರವೇರಿಸಲಾಯಿತು.
ಮೃತನ ಮನೆಯಿಂದ ಆರಂಭವಾದ ಶವಯಾತ್ರೆ ಚನ್ನಗಿರಿ ರಸ್ತೆಯಲ್ಲಿ ಹೊಸಪೇಟೆಯ ಮೂಲಕ ಮುಖ್ಯ ವೃತ್ತ ತಲುಪಿತು.
ಸಹಸ್ರಾರು ಜನ ರಸ್ತೆ ಬದಿಯಲ್ಲಿ ಶವಯಾತ್ರೆ ವೀಕ್ಷಿಸಿದರು. `ಭಾರತ್ ಮಾತಾ ಕಿ ಜೈ~, `ಅಂಜಿನಿ ಅಮರ್ ರಹೇ~ ಎಂಬ ಘೋಷಣೆ ಕೂಗಿದರು.
ಮುಖ್ಯವೃತ್ತದಲ್ಲಿ ಮೃತನ ಶವ ಇರಿಸಿದ ಟ್ರ್ಯಾಕ್ಟರ್ ನಿಲ್ಲಿಸಿ, ಎರಡು ನಿಮಿಷ ಮೌನ ಆಚರಿಸಲಾಯಿತು. ನಂತರ ಮಿಲಿಟರಿ ಸಿಬ್ಬಂದಿ ಮೃತ ಯೋಧನಿಗೆ ಸರ್ಕಾರಿ ಗೌರವಾರ್ಪಣೆ ಸಲ್ಲಿಸಿದರು.
ರಜೆಗಾಗಿ ಸ್ವಂತ ಗ್ರಾಮಕ್ಕೆ ಬಂದಿದ್ದ ಅಂಜಿನಪ್ಪ, ಕಾಶ್ಮೀರದ ಕಾರ್ಗಿಲ್ನಂತಹ ಕಡಿದಾದ ಕಣಿವೆ ಮತ್ತು ಎತ್ತರದ ಪ್ರದೇಶಗಳಲ್ಲಿ ಆರು ವರ್ಷಗಳಿಂದ ಕರ್ತವ್ಯ ನಿರ್ವಹಿಸಿದ್ದರು.
ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಸದಸ್ಯರು ಹಾಗೂ ಸಾರ್ವಜನಿಕರು ಮೃತ ಯೋಧನ ಮನೆಗೆ ತೆರಳಿ ಅಂತಿಮ ನಮನ ಸಲ್ಲಿಸಿದರು.