ಹೆಬ್ಬಳ್ಳಿ (ತಾ.ಧಾರವಾಡ): ಕಳೆದ ಡಿ 10ರಂದು ಜಮ್ಮು ಮತ್ತು ಕಾಶ್ಮೀರದ ಲೇಹ್ನಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದ ಗ್ರಾಮದ ಯೋಧ ಉಮೇಶ ಸವದತ್ತಿ ಅವರ ಸಾವಿಗೆ ಗುರುವಾರ ಇಡೀ ಗ್ರಾಮ ಕಂಬನಿ ಮಿಡಿಯಿತು.
ಬುಧವಾರವೇ ಲೇಹ್ನಿಂದ ಗೋವಾ ವಿಮಾನ ನಿಲ್ದಾಣಕ್ಕೆ ಬಂದಿದ್ದ ಉಮೇಶ ಅವರ ಶವ, ಗುರುವಾರ ಬೆಳಿಗ್ಗೆ 4.30ಕ್ಕೆ ಅಂಬುಲೆನ್ಸ್ನಲ್ಲಿ ಹೆಬ್ಬಳ್ಳಿಗೆ ಕರೆತರಲಾಯಿತು. 9.30ರ ಸುಮಾರಿಗೆ ಶವವನ್ನು ಗ್ರಾಮ ಪಂಚಾಯಿತಿ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಮನೆಗೆ ಕರೆದೊಯ್ದು ಪೂಜೆ ಸಲ್ಲಿಸಿದ ನಂತರ ಊರಲ್ಲಿ ಮೆರವಣಿಗೆ ನಡೆಸ ಲಾಯಿತು. ಮೆರವಣಿಗೆಯುದ್ದಕ್ಕೂ `ಉಮೇಶ ಸವದತ್ತಿ ಅಮರ್ ರಹೇ' ಘೋಷಣೆಗಳನ್ನು
ಮುಗಿಲು ಮುಟ್ಟಿತ್ತು ಮನೆಗೆ ಕರೆದೊಯ್ದಾಗ ಉಮೇಶ ಅವರ ತಂದೆ, ತಾಯಿ, ಪತ್ನಿ, ಸಹೋದರ, ಸಹೋದರಿಯ ಆಕ್ರಂದನ ಮುಗಿಲು ಮುಟ್ಟಿತ್ತು. `ಭಾರತ ಮಾತೆಯೇ ನನ್ನ ತಾಯಿ ಎಂದು ಯಾವಾಗಲೂ ಹೇಳುತ್ತಿದ್ದಿ, ಈಗ ಇಬ್ಬರನ್ನೂ (ಸ್ವಂತ ತಾಯಿ, ಭಾರತ ಮಾತೆ) ಬಿಟ್ಟು ಹೋದೆಯಲ್ಲೋ' ಎಂದು ತಂದೆ ದ್ಯಾಮಣ್ಣ ಬಿಕ್ಕಿಸಿ ಅತ್ತರು.
`ಕೋಟಿ ಕೋಟಿ ಜನರ ಕಾವಲುಗಾರ ನಾನು, ಅವರ ರಕ್ಷಣೆ ಮಾಡುತ್ತೀನಿ ಎಂದು ಹೋಗಿದ್ದೆಯಲ್ಲೋ' ಎಂದು ತಾಯಿ ಗಂಗಮ್ಮ ಅಳುತ್ತಿದ್ದರು. ಪತ್ನಿ ಸವಿತಾ ಆಕ್ರಂದನವೂ ಮುಗಿಲು ಮುಟ್ಟಿತ್ತು. ಸರ್ಕಾರದ ಪರವಾಗಿ ತಹಶೀಲ್ದಾರ್ ಶಿವಾನಂದ ಭಜಂತ್ರಿ ಅಗಲಿದ ಯೋಧನಿಗೆ ಅಂತಿಮ ಗೌರವ ಸಲ್ಲಿಸಿದರು.
ಊರ ಗ್ರಾಮಸ್ಥರು, ಶಾಲಾ ಮಕ್ಕಳೂ ತಮ್ಮೂರಿನ ಹುತಾತ್ಮನನ್ನು ನೋಡಲು ಬಂದಿದ್ದರು. ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಮರಾಠಾ ದಳದ ಸೈನಿಕರು ಯೋಧನ ಗೌರವಾರ್ಥ ಮೂರು ಸುತ್ತು ಗುಂಡುಗಳನ್ನು ಹಾರಿಸಿದರು. ಮಧ್ಯಾಹ್ನ ಯೋಧನ ಅಂತ್ಯ ಸಂಸ್ಕಾರ ನೆರವೇರಿತು.