ಮುದ್ರಾಡಿ (ಹೆಬ್ರಿ) : ಹೆಬ್ರಿ ಸಮೀಪದ ಮುದ್ರಾಡಿ ನಮ ತುಳುವೆರ್ ಕಲಾ ಸಂಘಟನೆಯ ರಜತ ಸಂಭ್ರಮದ ಅಂಗವಾಗಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಿರ್ಮಿಸಿರುವ ಬಿ.ವಿ ಕಾರಂತ ರಂಗವೇದಿಕೆಯಲ್ಲಿ ರಾಷ್ಟ್ರೀಯ ನಾಟಕೋತ್ಸವ ನವರಂಗೋತ್ಸವದ 2ನೇ ದಿನದ ಸಭಾ ಕಾರ್ಯಕ್ರಮ ಶನಿವಾರ ನಡೆಯಿತು.
ಹೆಗ್ಗೋಡಿನ ಚರಕ ಕಲಾವಿದರು ತಂಡದ ಎಂ.ಎನ್. ಕುಲಕರ್ಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ ತುಳುವೆರ್ ಕಲಾ ಸಂಘಟನೆಯ ಅನೇಕ ವರ್ಷಗಳ ನಿರಂತರ ರಂಗ ಚಟುವಟಿಕೆಗಳಿಂದ ಇಡೀ ದೇಶವೇ ಈ ಪುಟ್ಟ ಮುದ್ರಾಡಿ ಗ್ರಾಮವನ್ನು ಗುರುತಿಸುವಂತಾಗಿದೆ. ಇವರ ರಂಗ ಚಟುವಟಿಕೆಗಳಿಂದ ಮುದ್ರಾಡಿಯು ಹೆಗ್ಗೋಡಿಗೆ ಸಮವಾಗಿದೆ, ಈ ತಂಡಕ್ಕೆ ರಾಷ್ಟ್ರಮಟ್ಟದಲ್ಲಿ ಇನ್ನೂ ಹೆಚ್ಚಿನ ಉಜ್ವಲ ಭವಿಷ್ಯ ಸಿಗಲಿ ಎಂದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುಧನ್ವ ಮುದ್ರಾಡಿ, ನಾಟ್ಕ ಸಂಚಾಲಕ ಆದಿಶಕ್ತಿ ದೇವಸ್ಥಾನದ ಧರ್ಮದರ್ಶಿ ಧರ್ಮಯೋಗಿ ಮೋಹನ್, ಖ್ಯಾತ ರಂಗಕರ್ಮಿಗಳಾದ ಉದ್ಯಾವರ ನಾಗೇಶ್, ರಾಜು ಮಣಿಪಾಲ, ಕಾತ್ಯಾಯಿನಿ ಕುಂಜಿಬೆಟ್ಟು, ಬೆಂಗಳೂರಿನ ಖ್ಯಾತ ರಂಗಕರ್ಮಿ ಜಗದೀಶ್ ಜಾಲ, ಸಂಘಟನೆ ಅಧ್ಯಕ್ಷ ಸುಕುಮಾರ್ ಮೋಹನ್ ಇದ್ದರು. ಕೊನೆಯಲ್ಲಿ ಚರಕ ಕಲಾವಿದರು ಹೆಗ್ಗೋಡು ತಂಡದಿಂದ ಆಚಾರ್ಯ ಪ್ರಹಸನ ನಾಟಕ ಪ್ರದರ್ಶನಗೊಂಡಿತು.