ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಭೂಮಿ ಎಲ್ಲ ಮಾಧ್ಯಮದ ತಾಯಿ

Last Updated 14 ಮೇ 2012, 6:40 IST
ಅಕ್ಷರ ಗಾತ್ರ

ದಾವಣಗೆರೆ: ರಂಗಭೂಮಿ ಎಲ್ಲ ಮಾಧ್ಯಮದ ತಾಯಿ ಎಂದು ನಗರಪಾಲಿಕೆ ಸಾರ್ವಜನಿಕ ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ, ಮಾಜಿ ಮೇಯರ್ ಬಿ. ಲೋಕೇಶ್ ಬಣ್ಣಿಸಿದರು.

ಆಶಾಪುರದ ಸಂಗಮೇಶ್ವರ ನಾಟ್ಯ ಸಂಘದ ವತಿಯಿಂದ ನಗರದ  ಕೆ.ಬಿ.ಆರ್. ಡ್ರಾಮಾ ಥಿಯೇಟರ್‌ನಲ್ಲಿ ಭಾನುವಾರ ಏರ್ಪಡಿಸಿದ್ದ `ಎಂಥಾ ಮೋಜಿನ ಕುದುರೆ~ ನಾಟಕದ 51ನೇ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ಮನರಂಜನಾ ಮಾಧ್ಯಮಗಳು ಬಂದರೂ ರಂಗಭೂಮಿಗೆ ಸಾವಿಲ್ಲ. ಚಲನಚಿತ್ರಗಳಲ್ಲಿ, ಕಲಾವಿದರು ನಿರ್ದೇಶಕರು ಮತ್ತಿತರ ಮಾರ್ಗದರ್ಶನದಲ್ಲಿ ಹಲವು ಬಾರಿ ಅಭಿನಯಿಸುತ್ತಾರೆ. ಉತ್ತಮವಾದುದನ್ನು ಆಯ್ಕೆ ಮಾಡಿ ನಂತರ ಬೆಳ್ಳಿಪರದೆ ಮೇಲೆ ಪ್ರದರ್ಶಿಸಲಾಗುತ್ತದೆ. ಆದರೆ, ನಾಟಕದಲ್ಲಿ ಹಾಗಾಗುವುದಿಲ್ಲ. ಕಲಾವಿದರು ನವರಸಗಳನ್ನು ಪ್ರೇಕ್ಷಕರ ಮುಂದೆ ಅಭಿನಯಿಸಿ ತೋರಿಸಬೇಕು. ಹೀಗಾಗಿ, ರಂಗಭೂಮಿ ಸಂಸ್ಕೃತಿ ಉಳಿಸುವ ಮಾಧ್ಯಮವಾಗಿದೆ. ಎಂದಿಗೂ ಅದಕ್ಕೆ  ಸಾವಿಲ್ಲ ಎಂದರು.

ನಗರಪಾಲಿಕೆ ವಿರೋಧಪಕ್ಷದ ನಾಯಕ ಡಿ.ಎನ್. ಜಗದೀಶ್ ಮಾತನಾಡಿ, ದಾನ, ಧರ್ಮ ಹಾಗೂ ಕಲೆಗಳಿಗೆ ದಾವಣಗೆರೆ ಹಿಂದಿನಿಂದಲೂ ಪ್ರೋತ್ಸಾಹ ನೀಡುತ್ತಾ ಬಂದಿದೆ. ಇಂತಹ ಕಲೆಗಳನ್ನು ಉಳಿಸುವ ಕೆಲಸ ಎಲ್ಲರದಾಗಿದೆ ಎಂದು ಹೇಳಿದರು.

ಕನ್ನಡಪರ ಹೋರಾಟಗಾರ ಬಸವರಾಜ್ ಐರಣಿ ಮಾತನಾಡಿ, ಸಂಗಮೇಶ್ವರ ನಾಟ್ಯ ಸಂಘ 32 ವರ್ಷಗಳಿಂದ ದಾಖಲೆ ಪ್ರದರ್ಶನಗಳನ್ನು ನೀಡುತ್ತಾ ರಂಗಭೂಮಿಗೆ ಸೇವೆ ಸಲ್ಲಿಸುತ್ತಿದೆ. ಈ ಮೂಲಕ ಇತಿಹಾಸ ನಿರ್ಮಿಸಿದೆ. ನಗರದಲ್ಲಿ 70-80ರ ದಶಕದಲ್ಲಿ ಮೂರು ನಾಟಕ ಕಂಪೆನಿಗಳಿದ್ದವು. ನಾಟಕಗಳು ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದ್ದವು. ಹೀಗಾಗಿ, ವೃತ್ತಿ ರಂಗಭೂಮಿಗೆ ಜೀವಂತಿಕೆ ಕೊಟ್ಟ ಕೀರ್ತಿ ದಾವಣಗೆರೆಯದು ಎಂದರು.

ಚಲನಚಿತ್ರ, ದೃಶ್ಯ ಮಾಧ್ಯಮಗಳ ಹಾವಳಿಯಿಂದ ರಂಗಭೂಮಿ ಕ್ಷೀಣಿಸುತ್ತಿದೆ ಎಂಬುದು ಸುಳ್ಳು. ರಂಗಭೂಮಿಗೆ ಎಂದೂ ಸಾವಿಲ್ಲ. ಕಂಪೆನಿಗಳ ಆಂತರಿಕ ಸಮಸ್ಯೆ ಮತ್ತಿತರ ಕಾರಣದಿಂದ ರಂಗಭೂಮಿ ಹಾಳಾಗಬಹುದೇ ಹೊರತು, ಪ್ರೇಕ್ಷಕರ ಕೊರತೆಯಿಂದಲ್ಲ. ಇದಕ್ಕೆ ಇಂತಹ ಹೌಸ್‌ಫುಲ್ ಪ್ರದರ್ಶನಗಳೇ ಸಾಕ್ಷಿ ಎಂದು ಹೇಳಿದರು.

ಪಾಲಿಕೆ ಸದಸ್ಯ ಶಿವನಹಳ್ಳಿ ರಮೇಶ್ ಮಾತನಾಡಿ, ರಂಗಭೂಮಿಯ ಕಲಾವಿದರು ಹಲವು ನೋವುಗಳನ್ನು ಅನುಭವಿಸುತ್ತಿದ್ದಾರೆ. ಅವರ ಸಂಕಷ್ಟಗಳನ್ನು ಅರಿತು ಸರ್ಕಾರ ನೆರವು ನೀಡಬೇಕು. ನಾಟಕ ಕಂಪೆನಿಗಳನ್ನು ಪ್ರೋತ್ಸಾಹಿಸಬೇಕು ಎಂದರು.

ಸಂಘದ ಮಾಲೀಕರು ಹಾಗೂ ರಾಜ್ಯಪ್ರಶಸ್ತಿ ಪುರಸ್ಕೃತ ರಂಗಭೂಮಿ ಕಲಾವಿದೆ ಪ್ರೇಮಾ ಗುಳೇದಗುಡ್ಡ ಅವರು `ಕಿತ್ತೂರು ರಾಣಿ ಚನ್ನಮ್ಮ~ ನಾಟಕದ ದೃಶ್ಯವೊಂದನ್ನು ಅಭಿನಯಿಸಿ ಪ್ರೇಕ್ಷಕರ ಮನಸೂರೆಗೊಂಡರು.
ರಾಜ್ಯ ವೃತ್ತಿ ರಂಗಭೂಮಿ ಕಲಾವಿದರ ಸಂಘದ ಗೌರವಾಧ್ಯಕ್ಷ ತಿಪ್ಪೇಶ್‌ರಾವ್ ಚವಾಣ್, ಸಂಘದ ಎ. ಭದ್ರಪ್ಪ, ಪತ್ರಕರ್ತ ಇ.ಎಂ. ಮಂಜುನಾಥ್ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT