ಸಾಲಿಗ್ರಾಮ: ರಂಗಭೂಮಿ ಕಲಾವಿದರಿಗೆ ನಾಟಕ ನೋಡಲು ಬರುವ ಪ್ರೇಕ್ಷಕರೇ ಸ್ಫೂರ್ತಿ, ಜತೆಗೆ ಕಲಾವಿದರ ಅಭಿನಯಕ್ಕೆ ಸಂತಸ ಗೊಂಡು ಅವರು ಹಾಕುವ ಚಪ್ಪಾಳೆಯೇ ಕಲಾವಿದನಿಗೆ ಶ್ರೀರಕ್ಷೆ ಎಂದು ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಮೈ.ಮಾ. ನಾಗರಾಜು ಅಭಿಪ್ರಾಯ ಪಟ್ಟರು.
ಪಟ್ಟಣದ ಮಹಾಗಣಪತಿ ಸೇವಾ ಸಮಿತಿಯ ಆಶ್ರಯದಲ್ಲಿ ಪೂರ್ಣಚಂದ್ರಗೌಡ ಅವರು ಆಯೋಜಿಸಿದ್ದ `ರಾಜ್ಯಮಟ್ಟದ ನಾಟಕ ಸ್ಪರ್ಧೆ~ಗೆ ಈಚೆಗೆ ಚಾಲನೆ ನೀಡಿ ಅವರು ಮಾತನಾಡಿರು.
`ಈಚಿನ ದಿನಗಳಲ್ಲಿ ಸಿನಿಮಾ ಮತ್ತು ಟಿವಿ ಹಾವಳಿ ಹೆಚ್ಚಾದಂತೆ ರಂಗಭೂಮಿಯ ಕಲಾವಿದರ ಕುಟುಂಬ ಜೀವನ ನಿರ್ವಹಣೆ ಕಷ್ಟವಾಗಿದೆ. ಆದರೂ, ಮೈಸೂರು ಜಿಲ್ಲೆಯಲ್ಲಿ ರಂಗಭೂಮಿ ಕಲಾವಿದರು ಮತ್ತು ರಂಗಭೂಮಿ ಜೀವಂತವಾಗಿರುವುದು ಜಿಲ್ಲೆಯಲ್ಲಿರುವ ಕಲಾಪೋಷಕರಿಂದ ಮಾತ್ರ~ ಎಂದು ಹೇಳಿದರು.
`ಈ ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ನಾಟಕ ಎಂದರೆ ಕಲಾವಿದನ ಕುಟುಂಬದ ಸಂಬಂಧಿಗಳು ಒಂದು ದಿನ ಮುಂಚೆ ಬಂದು ಪ್ರೋತ್ಸಾಹ ನೀಡುತ್ತಿದ್ದರು. ಇದು ಈ ದಿನಗಳಲ್ಲಿ ಮಾಯವಾಗಿದ್ದು, ನಾಟಕ ಎಂದರೆ ಗ್ರಾಮೀಣ ಪ್ರದೇಶದ ಜನರು ಮುಖ ತಿರುಗಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಾಲಿಗ್ರಾಮದ ಪೂರ್ಣಚಂದ್ರಗೌಡ ಅವರು ರಾಜ್ಯಮಟ್ಟದ ನಾಟಕ ಸ್ಪರ್ಧೆಯನ್ನು ಆಯೋಜಿಸಿರುವುದು ಶ್ಲಾಘನೀಯ~ ಎಂದರು.
ಗ್ರಾ.ಪಂ. ಅಧ್ಯಕ್ಷ ಎಸ್.ಎಸ್. ಶಿವಣ್ಣ, ಹಿರಿಯ ಕಲಾವಿದ ಮತ್ತು ಸಹಕಾರಿ ಧುರೀಣ ಎಸ್.ಎಸ್. ರಾಮಕೃಷ್ಣೇಗೌಡ, ಜಿಲ್ಲಾ ಕಲಾವಿದರ ಸಂಘದ ಗೌರವಾಧ್ಯಕ್ಷ ಬಸವೇಗೌಡ, ಚನ್ನೇಗೌಡ, ಮೈಸೂರಿನ ಆಟೋ ಮೋಟಿವ್ ಆಕ್ಸೆಲ್ನ ಸಾಂಸ್ಕೃತಿಕ ಕಲಾ ತಂಡದ ಅಧ್ಯಕ್ಷ ಶಿವಕುಮಾರ್, ಮಹಾಗಣಪತಿ ಸೇವಾ ಸಮಿತಿ ಅಧ್ಯಕ್ಷ ಹಾಗೂ ಪ್ರಯೋಜಕ ಪೂರ್ಣಚಂದ್ರಗೌಡ, ಕಲಾವಿದ ನೇಮಿಚಂದ್ರ ಇದ್ದರು.