ಬೆಂಗಳೂರು: `ರಂಗಭೂಮಿಯ ಪರಿಚಾರಕರು ಕೇವಲ ವೃತ್ತಿಯಿಂದ ನಿವೃತ್ತರಾಗಬಹುದೇ ವಿನಃ ಪ್ರವೃತ್ತಿಯಿಂದಲ್ಲ. ಬಹುಮುಖ ಪ್ರತಿಭೆಯುಳ್ಳ ಕಲಾವಿದರು ಎಂದಿಗೂ ಜೀವನೋತ್ಸಾಹದಿಂದ ವಿಮುಖರಾಗುವುದಿಲ್ಲ~ ಎಂದು ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ ಅಭಿಪ್ರಾಯಪಟ್ಟರು.
ರಂಗ ನಿರಂತರ ಸಂಸ್ಥೆಯು ಕನ್ನಡ ಭವನದಲ್ಲಿ ರಂಗ ಚಿಂತಕ ತೊಟ್ಟವಾಡಿ ನಂಜುಂಡಸ್ವಾಮಿ ಅವರಿಗೆ 60 ವರ್ಷ ತುಂಬಿದ ಹಿನ್ನಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
`ರಂಗಭೂಮಿಯ ಕಲೆ ಮತ್ತು ಸಂಸ್ಕೃತಿಯನ್ನು ಕಟ್ಟಿ ಬೆಳಸುವಲ್ಲಿ ಶ್ರಮ ವಹಿಸಿರುವ ನಂಜುಡಸ್ವಾಮಿ ಅವರು ಬಡವರ ಬಗ್ಗೆ ಕಾಳಜಿ ಹೊಂದಿದ್ದಾರೆ~ ಎಂದರು. ಪತ್ರಕರ್ತ ಗುಡಿಹಳ್ಳಿ ನಾಗರಾಜ್ ಮಾತನಾಡಿ, `ನಂಜುಂಡಸ್ವಾಮಿ ಅವರು ಒಬ್ಬ ಕಲಾವಿದನಲ್ಲಿರುವ ಹಿಂಜರಿಕೆಯನ್ನು ಅಳಿಸಿ, ಆತನಲ್ಲಿ ಅಡಗಿರುವ ಸುಪ್ತ ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಸದಾ ಹಾತೊರೆಯುತ್ತಾರೆ~ ಎಂದರು.
ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ,`ರಂಗಭೂಮಿಯ ನಂಟು ಗಳಿಸಿದವರೆಲ್ಲರೂ ಮಾನವೀಯತೆ ಮತ್ತು ಅಂತಃಕರಣ ಹೊಂದಿ ರುತ್ತಾರೆ~ ಎಂದು ಹೇಳಿದರು. ಕಥೆಗಾರ ಕೇಶವರೆಡ್ಡಿ ಹಂದ್ರಾಳ, ಸಾಹಿತಿ ಡಾ.ಡಿ.ಕೆ.ಚೌಟ ಇತರರು ಉಪಸ್ಥಿತರಿದ್ದರು. ರಾಜಗುರು, ರಾಮಚಂದ್ರ ಹಡಪದ್, ಸಿ.ಎನ್. ನರಸಿಂಹಮೂರ್ತಿ ಅವರು ರಂಗ ಗೀತೆ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.