ಗಜೇಂದ್ರಗಡ: ‘ಭಾರತೀಯ ಗ್ರಾಮೀಣ ಸಂಸ್ಕೃತಿ, ಪರಂಪರೆಯನ್ನು ಅನಾವರಣಗೊಳಿಸಿದ ಕೀರ್ತಿ ರಂಗಭೂಮಿಗೆ ಸಲ್ಲುತ್ತದೆ’ ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ಹೇಳಿದರು.
ಮಾರುತೇಶ್ವರ ಹಾಗೂ ಅಳಿಯ ಬಸವೇಶ್ವರ ಕಾರ್ತಿಕೋತ್ಸವದ ಪ್ರಯುಕ್ತ ಇಲ್ಲಿಗೆ ಸಮೀಪದ ಹಿರೇಅಳಗುಂಡಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ‘ಧರ್ಮ ತುಂಬಿದ ಮನೆ’ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಚಿತ್ರರಂಗದ ಭರಾಟೆಯ ಮುಂದೆ ರಂಗಭೂಮಿ ನಶಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ರಂಗಭೂಮಿ ಮತ್ತು ಅದರಲ್ಲಿ ದುಡಿಯುತ್ತಿರುವ ಹಿರಿಯ ಕಲಾವಿದರ ಬದುಕಿಗೆ ನೆರವಾಗಬೇಕಾದ ಯೋಜನೆಗಳನ್ನು ಸರ್ಕಾರ ಜಾರಿಗೆ ತರಬೇಕು ಎಂದು ಅವರು ಸಲಹೆ ನೀಡಿದರು.
ಆರ್ಥಿಕ ದೃಷ್ಟಿಯಿಂದ ರಂಗಭೂಮಿ ಲಾಭದಾಯಕ ಕ್ಷೇತ್ರವಲ್ಲ ಆದ್ದರಿಂದ ಯುವ ಜನತೆ ಈ ಕ್ಷೇತ್ರಕ್ಕೆ ಬರಲು ಹಿಂಜರಿಯುತ್ತಿದ್ದಾರೆ. ಈ ಸ್ಥಿತಿ ಹೋಗಲಾಡಿಸಲು ಸರ್ಕಾರ ದಿಟ್ಟ ಹೆಜ್ಜೆ ಇಡಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ಗ್ರಾಮದ ಯೋಧ ಲಕ್ಷ್ಮಣ್ಣ ಕೋಣ್ಣನವರ ಅವರನ್ನು ಸನ್ಮಾನಿಸಲಾಯಿತು.
ಮುಶಿಗೇರಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಗೀತಾಬಾಯಿ ಕುಲಕರ್ಣಿ, ಸಂಗನಗೌಡ ಮಾಲಿಪಾಟೀಲ, ಅಂದಾನಗೌಡ ಪಾಟೀಲ ಮತ್ತಿತರರು ಇದ್ದರು.