ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಶಂಕರದಲ್ಲಿ ಸದಾರಮೆ ಕಲರವ

Last Updated 28 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಮಿಸ್. ಸದಾರಮೆ ನಾಟಕ ಗುಬ್ಬಿ ಕಂಪೆನಿಯಲ್ಲಿ ಸಾವಿರಾರು ಪ್ರಯೋಗಗಳನ್ನು ಕಂಡಿದೆ. ನಂತರ ಹಿರಣ್ಣಯ್ಯ ಅವರು ಈ ನಾಟಕವನ್ನು ಹಲವಾರು ಬಾರಿ ಪ್ರದರ್ಶಿಸಿ ಪ್ರಸಿದ್ಧಗೊಳಿಸಿದರು.

ಇವರ ನಂತರ ಕೂಡ ಕೆ.ವಿ.ಸುಬ್ಬಣ್ಣ ಈ ನಾಟಕವನ್ನು ಪ್ರಸ್ತುತ ಸನ್ನಿವೇಶಕ್ಕೆ ಒಗ್ಗಿಸಿ ಮಿಸ್. ಸದಾರಮೆ ಎಂದು ಹೆಸರಿಸಿ, ಬಿ.ವಿ.ಕಾರಂತರ ನಿರ್ದೇಶನದೊಂದಿಗೆ ನೀನಾಸಂ ತಿರುಗಾಟದಲ್ಲಿ ನೂರಾರು ಪ್ರದರ್ಶನಗಳನ್ನು ಮಾಡಿಸಿದರು. ಈ ನಾಟಕವು ಕನ್ನಡದಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತದ ಇತರ ಕೆಲವು ಭಾಷೆಗಳಲ್ಲೂ ಪ್ರಯೋಗವಾದ ದಾಖಲೆಗಳಿವೆ. ಈ ನಾಟಕ ಬುಧವಾರ (ಫೆ.29)ರಂದು ರಂಗಶಂಕರದಲ್ಲಿ ಸಂಜೆ 7.30ಕ್ಕೆ ಪ್ರದರ್ಶನಗೊಳ್ಳಲಿದೆ. 

ವರ್ತಕ ಬಂಗಾರ ಸೆಟ್ಟಿಯ ಮಗಳಾದ ಸದಾರಮೆಯಿಂದ ಆಕರ್ಷಿತನಾದ ರಾಜಕುಮಾರ, ರಾಜ್ಯ- ಕೋಶಾದಿಗಳನ್ನು ಬಿಟ್ಟು ಮದುವೆಯಾಗಿ ಅವಳೊಂದಿಗೆ ದೇಶಾಂತರ ಹೊರಟು ಹೋಗುತ್ತಾನೆ. ವಿಧಿ ವೈಪರೀತ್ಯದಿಂದ ಗಂಡ-ಹೆಂಡತಿಯರು ಒಬ್ಬರನ್ನೊಬ್ಬರು ಅಗಲುತ್ತಾರೆ. ಮುಗ್ಧೆಯಾದ ಸದಾರಮೆ ಹಲವಾರು ಕಷ್ಟ-ಕಾರ್ಪಣ್ಯಗಳಿಗೆ ಸಿಲುಕಿಕೊಳ್ಳುತ್ತಾಳೆ. ಇವನ್ನೆಲ್ಲಾ ಯಶಸ್ವಿಯಾಗಿ ಎದುರಿಸಿ ಕೊನೆಗೆ ಅವರು ಮತ್ತೆ ಒಂದಾಗುತ್ತಾರೆ.

ಇಡೀ ನಾಟಕವು ಹಾಸ್ಯ ಸನ್ನಿವೇಶಗಳಿಂದ ಕೂಡಿದ್ದು, ಕಂಪನಿ ನಾಟಕ ಶೈಲಿಯ ಹಾಡುಗಳಿಂದ ವೈಭವೀಕರಿಸಲಾಗಿದೆ. ನಿರ್ದೇಶಕರು ನಾಟಕದ ಮೂಲ ಕತೆಗೆ ಹೊಸ ವ್ಯಾಖ್ಯಾನ ನೀಡುವ ಪ್ರಯತ್ನ ಮಾಡಿದ್ದಾರೆ.

ಸದಾರಮೆ ನಾಟಕವನ್ನು ಮಂಜುನಾಥ್ ಎಲ್.ಬಡಿಗೇರ ನಿರ್ದೇಶಿಸಿದ್ದಾರೆ. ಇವರು ನೀನಾಸಂ ರಂಗಶಿಕ್ಷಣ ಕೇಂದ್ರದ ಪದವೀಧರ. ತಿರುಗಾಟದಲ್ಲಿ ನಟರಾಗಿ ದುಡಿದ ಅನುಭವಿ. ಪ್ರಸ್ತುತ ಬೆಂಗಳೂರಿನ ಸಮಷ್ಟಿ ತಂಡದಲ್ಲಿ ನಟ-ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇದುವರೆಗೆ ಇವರು  ಬೊಮ್ಮನಹಳ್ಳಿಯ ಕಿಂದರಿ ಜೋಗಿ, ಕಥನ, ಸಾಫಲ್ಯ, ಪರಿತ್ಯಕ್ತ, ಖೈದಿ, ಪ್ರಮೀಳಾರ್ಜುನೀಯಂ, ಚಿತ್ರಪಟ ರಾಮಾಯಣ, ಸಂಗ್ಯಾಬಾಳ್ಯಾ ಮುಂತಾದ ನಾಟಕಗಳನ್ನು ನಿರ್ದೇಶಿಸಿದ್ದಾರೆ. ನಟನಾಗಿ ಅಭಿನಯಿಸಿದ ನಾಟಕಗಳು- `ಆಷಾಢದ ಒಂದು ದಿನ~, `ಸಾಂಬಶಿವ ಪ್ರಹಸನ~, `ನವಿಲು ನಿಂತಾವ~, `ಕಾರ್ಮುಗಿಲ ಮಿಂಚು~, `ಜಾತಕರಿಂಗಣ~, `ಊರುಭಂಗ~, `ಮಿಸ್. ಸದಾರಮೆ~, `ಅವಸ್ಥೆ~, `ಮೊದಲಗಿತ್ತಿ~, `ಅಮನಿ~, `ಹರಿಣಾಭಿಸರಣ~, `ಸಾಫಲ್ಯ~, `ಶಾಂಡಿಲ್ಯ ಪ್ರಹಸನ~ ಮುಂತಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT