ಗುಂಡ್ಲುಪೇಟೆ: ಯಾವ ಖಾಸಗಿ ಶಾಲೆಗೂ ಕಮ್ಮಿ ಇಲ್ಲದಂತೆ ಸುವ್ಯವಸ್ಥೆಯಿಂದ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರು ಹಾಗೂ ಎಸ್ಡಿಎಂಸಿ ಪದಾಧಿಕಾರಿಗಳು ಶ್ರಮಿಸುತ್ತಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್. ರಾಜು ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲ್ಲೂಕಿನ ರಂಗೂಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು. ಈ ಶಾಲೆ ತಾಲ್ಲೂಕಿಗೆ ಮಾದರಿ ಶಾಲೆಯಾಗಿದೆ. ಶಾಲಾಭಿವೃದ್ದಿ ಸಮಿತಿ ಸದಸ್ಯರು ತಮ್ಮ ಸ್ವಂತ ಹಣದಿಂದ ಸುವ್ಯವಸ್ಥಿತ ಅಡುಗೆ ಮನೆ ಕಟ್ಟಿದ್ದು, ಇದು ಬೇರೆ ಶಾಲೆಗಳಿಗೆ ಮಾದರಿಯಾಗಿದೆ ಎಂದರು.
ಪ್ರಾಯೋಗಿಕವಾಗಿ ಎಲ್ಲಾ ತರಗತಿಗಳಲ್ಲೂ ಮಕ್ಕಳನ್ನು ಪರೀಕ್ಷೆ ಮಾಡುವುದರ ಮೂಲಕ ಈ ಶಾಲೆಯ ಶೈಕ್ಷಣಿಕ ಮಟ್ಟವನ್ನು ಪರೀಕ್ಷಿಸಿದ್ದೇನೆ. ವಿದ್ಯಾರ್ಥಿಗಳ ಉತ್ತರ ನನಗೆ ತೃಪ್ತಿ ತಂದಿದೆ ಇಲ್ಲಿನ ಶಿಕ್ಷಕರಿಗೆ ಹಾಗೂ ಗ್ರಾಮಸ್ಥರಿಗೆ ಅಭಿನಂದನೆ ಎಂದರು.
ಎಸ್ಡಿಎಂಸಿ ಅಧ್ಯಕ್ಷ ಆರ್.ಎಂ. ಸಿದ್ದರಾಜು, ಸದಸ್ಯರಾದ ಆರ್.ಜಿ. ಮಹೇಶ್, ಆರ್.ಕೆ. ಸಿದ್ದರಾಜು, ಚಿನ್ನಪ್ಪ, ಮಹದೇವಪ್ಪ, ಮಂಜುಳಾ, ಭಾಗ್ಯಾ, ಗೀತಾ, ಸಹಶಿಕ್ಷಕರಾದ ಸಿದ್ದರಾಜು, ಅತಿಥಿ ಶಿಕ್ಷಕರಾದ ಗೀತಾ, ಜಗದೀಶ್, ಗೌರವ ಶಿಕ್ಷಕರಾದ ಆಶಾ, ಅನಿತಾ, ಅಂಗನವಾಡಿ ಕಾರ್ಯಕರ್ತೆ ಸುನಿತಾ ಹಾಗೂ ಗ್ರಾಮಸ್ಥರು ಇದ್ದರು. ಮುಖ್ಯಶಿಕ್ಷಕ ಡಿ.ಪಿ. ಲೋಕೇಶ್ ಸ್ವಾಗತಿಸಿದರು. ಶಾಲಾ ಮಕ್ಕಳು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.