ಮುನಿರಾಬಾದ್: ರಂಜಾನ್ ಹಬ್ಬದಲ್ಲಿ ಮುಸ್ಲಿಮರು ಹಬ್ಬದ ಸಡಗರದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸ್ಥಳೀಯ ಖಿದ್ಮತ್ ಮುಸ್ಲಿಂ ಯೂತ್ ಅಸೋಸಿಯೇಶನ್ ಸಂಘಟನೆಯು ಸಮಾಜದ ಬಡವರಿಗೆ ಅವಶ್ಯಕ ಅಡುಗೆ ದಿನಸಿಯನ್ನು ಉಚಿತವಾಗಿ ಮನೆ ಮನೆಗೆ ಹಂಚುತ್ತಿದೆ.
`ಸರಳ ಜೀವನ, ಉನ್ನತ ವಿಚಾರ~ ಎಂಬ ತತ್ವದಂತೆ ತಾನೊಬ್ಬನೇ ಹಬ್ಬದ ಸಡಗರ ಅನುಭವಿಸಿದರೆ ಸಾಲದು ತಮ್ಮಂತೆ ಸಮಾಜದ ಎಲ್ಲರೂ ಪವಿತ್ರ ಹಬ್ಬವಾದ ರಂಜಾನ್ನ್ನು ಸಮಾನತೆ, ಸಡಗರದಿಂದ ಆಚರಿಸಬೇಕು ಎಂಬ ಉನ್ನತ ವಿಚಾರ ಹೊಂದಿದ ಸಂಘಟನೆ ಈ ಕಾರ್ಯಕ್ಕೆ ಮುಂದಾಗಿದೆ. ರಂಜಾನ್ ಮಾಸದಲ್ಲಿ ಉಪವಾಸ (ರೋಜಾ), ಪ್ರಾರ್ಥನೆ ಸೇರಿದಂತೆ ಪವಿತ್ರ ಗ್ರಂಥ ಕುರಾನ್ನ ಸಂಪೂರ್ಣ ಪಠಣ ನಡೆಯುತ್ತದೆ. ತಮ್ಮ ಗಳಿಕೆಯಲ್ಲಿನ ಒಂದು ಭಾಗವನ್ನು ಈ ಾಸದಲ್ಲಿ ಬಡವರಿಗೆ ದಾನವಾಗಿ ನೀಡಬೇಕು. ಬಡವನಾದರೂ ಈ ಒಂದು ಮಾಸದಲ್ಲಿ ಹಬ್ಬದ ಆಚರಣೆಯಿಂದ ದೂರ ಉಳಿಯಬಾರದು ಎಂಬುದು ದಾನದ ಮೂಲ ಉದ್ದೇಶ ಎಂದು ಅಧ್ಯಕ್ಷ ಶೇರ್ಖಾನ್ ತಿಳಿಸಿದರು.
ಅವಶ್ಯಕ ದಿನಸಿ ಒಳಗೊಂಡ ಪೊಟ್ಟಣ ಸಿದ್ಧಪಡಿಸಲಾಗಿದೆ. ಅವನ್ನು ಮುನಿರಾಬಾದ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುನಿರಾಬಾದ್, ಹೊಳೆ ಮುದ್ಲಾಪುರ, ಮಟ್ಟಿ ಮುದ್ಲಾಪುರ ಗ್ರಾಮದಲ್ಲಿನ ಸಮಾಜದ ಬಡಜನರಿಗೆ ಹಂಚಲಾಗುವುದು ಎಂದು ಸಂಘಟನೆ ಅಧ್ಯಕ್ಷ ಶೇರ್ಖಾನ್ ಉಪಾಧ್ಯಕ್ಷ ಎನ್.ಸೈಯದ್ ಅನ್ವರ್ ಮಾಹಿತಿ ನೀಡಿದರು. ಮುಖಂಡರಾದ ಚಂದುಸಾಬ್, ಗೌಸ್ಖಾನ್, ಮಹ್ಮದ್ಗೌಸ್ ಮತ್ತು ಸಂಘಟನೆ ಪದಾಧಿಕಾರಿಗಳು ಉಪಸ್ಥಿತರಿದ್ದರು.