ಕೆರೂರ: ಪಟ್ಟಣದ ಹೊರವಲಯ ಬಟಕುರ್ಕಿ ಕ್ರಾಸ್ನಲ್ಲಿ ಏರ್ಪಡಿಸಲಾಗಿದ್ದ ‘ಜೋಡೆತ್ತಿನ ಬಂಡಿ’ ಓಟದ ಸ್ಪರ್ಧೆ ತುರುಸಿನ ಪೈಪೋಟಿ ನಡೆಯಿತು.
ಪಟ್ಟಣದ ಹೊರಗಿನ ರಾಷ್ಟ್ರೀಯ ಹೆದ್ದಾರಿ (218) ರ ಬಟಕುರ್ಕಿ ವರ್ತುಲದಿಂದ ಚಿಂಚಲಕಟ್ಟಿ (ಹಾಲಿಗೇರಿ ಕ್ರಾಸ್) ವರೆಗಿನ ಲೋಕಾಪುರ ರಸ್ತೆಯಲ್ಲಿ ಸ್ಥಳೀಯ ರಾಚೋಟೇಶ್ವರ ಸದ್ಭಕ್ತ ಮಂಡಳಿ ಆಯೋಜಿಸಿದ್ದ ಜೋಡೆತ್ತಿನ ಬಂಡಿ ಓಟದ ರೋಚಕ ದೃಶ್ಯ ವೀಕ್ಷಿಸಲು ವರ್ತುಲದಿಂದ ಚಿಂಚಲಕಟ್ಟಿ ರಸ್ತೆಯ ಇಕ್ಕೆಲಗಳಲ್ಲಿ ಕ್ರೀಡಾಭಿಮಾನಿಗಳು ಕಿಕ್ಕಿರಿದು ಸೇರಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪಂದ್ಯಾವಳಿ ಸಂದರ್ಭದಲ್ಲಿ ಸ್ಥಳೀಯ ಪೊಲೀಸರು ಸೂಕ್ತ ಬಂದೋಬಸ್ತ್ ಮಾಡಿದ್ದರು.
ಬಹುಮಾನ ವಿಜೇತರು: ಸಾಕಷ್ಟು ಜಿದ್ದಾ ಜಿದ್ದಿ ಏರ್ಪಟ್ಟ ಈ ಸ್ಪರ್ಧೆಯಲ್ಲಿ ಹಾಲಿಗೇರಿಯ ದುಂಡಪ್ಪ ಬಿದರಿ–1 ರೂ. 10,000 ಗಳಿಸಿದರೆ, ಕೆರೂರಿನ ಭೀಮಪ್ಪ ಈಟಿ–2 ರೂ. 7001 ಪಡೆದರು. ಲೋಕಾಪುರದ ರಮೇಶ ಗಸ್ತಿ–3 ಅವರ ಜೋಡೆತ್ತುಗಳು ರೂ.5001 ಗಳಿಸಿದವು.
ಸೈದು ಚೂರಿ, ಸತೀಶ ಕ್ಷತ್ರಿ, ವಿಜಯಕುಮಾರ ಐಹೊಳ್ಳಿ, ದಾನಯ್ಯ ಮಠಪತಿ ಮುಂತಾದವರು ಬಹುಮಾನ ವಿತರಣೆಯಲ್ಲಿ ಪಾಲ್ಗೊಂಡರು.