ಬಳ್ಳಾರಿ: ರಕ್ತದಾನ ಶ್ರೇಷ್ಠ ದಾನವಾಗಿದ್ದು, ಪುರುಷ ಹಾಗೂ ಮಹಿಳೆಯರು ಎಂಬ ಬೇಧಭಾವ ವಿಲ್ಲದೆ ಎಲ್ಲರೂ ರಕ್ತದಾನ ಮಾಡಬೇಕು ಎಂದು ಸಂಸದೆ ಜೆ.ಶಾಂತ ಮನವಿ ಮಾಡಿದರು.
ನಗರದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅಪಘಾತದಲ್ಲಿ ಅತೀವ ರಕ್ತಸ್ರಾವದಿಂದ ನರಳುವ ರೋಗಿಗಳನ್ನು ಪ್ರಾಣ ಅಪಾಯದಿಂದ ತಪ್ಪಿಸಲು ರಕ್ತ ಸಂಗ್ರಹಣೆ ಅಗತ್ಯ. ಆದ್ದರಿಂದ ರಕ್ತದಾನ ಕಡ್ಡಾಯವಾಗಿ ಮಾಡಬೇಕು ಎಂದು ಅವರು ತಿಳಿಸಿದರು.
ಅನೇಕ ಅಪಘಾತ, ಶಸ್ತ್ರಚಿಕಿತ್ಸೆ ಹಾಗೂ ತುರ್ತು ಪರಿಸ್ಥಿತಿಯಲ್ಲೂ ರಕ್ತದ ಅವಶ್ಯಕತೆ ಇದ್ದು, ವಿದ್ಯಾರ್ಥಿಗಳಲ್ಲದೆ ಸಮಾಜದ ಪ್ರತಿಯೊಬ್ಬರೂ ರಕ್ತದಾನ ಮಾಡಬೇಕು ಎಂದು ಅವರು ತಿಳಿಸಿದರು.
ಶಾಸಕ ಜಿ.ಸೋಮಶೇಖರ್ ರೆಡ್ಡಿ, ಜಿಲ್ಲಾಧಿಕಾರಿ ಬಿ.ಶಿವಪ್ಪ, ಟಿಇಎಚ್ಆರ್ಡಿ ಟ್ರಸ್ಟಿಯ ಅಧ್ಯಕ್ಷ ಡಾ.ಎಸ್.ಜೆ.ವಿ. ಮಹಿಪಾಲ್, ವಿಮ್ಸ್ ನಿರ್ದೇಶಕ ಡಾ.ದೇವಾನಂದ, ಉಪ ಮೇಯರ್ ತೂರ್ಪು ಯಲ್ಲಪ್ಪ, ವಿಮ್ಸ್ ಅಧೀಕ್ಷಕ ವಿದ್ಯಾಧರ ಕಿನ್ನಾಳ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶ್ರೀಕಾಂತ್ ಬಾಸೂರು, ಎಸ್.ಮಲ್ಲನಗೌಡ, ಪ್ರೊ. ಪೃಥ್ವಿ ರಾಜ, ಪ್ರಾಚಾರ್ಯ ಡಾ.ಯು. ಈರಣ್ಣ, ಡಾ.ನರಸಿಂಹ ಮೂರ್ತಿ, ಕಾಲೇಜು ಚೇರ್ಮನ್ ಡಾ.ಯಶ್ವಂತ ಭೂಪಾಲ್ ಉಪಸ್ಥಿತರಿದ್ದರು.
‘ರೆಡ್ಡಿ ಹಿಂದೂ ಎಂದೇ ನಮೂದಿಸಿ’
ಬಳ್ಳಾರಿ: ಜನಗಣತಿ ಸಂದರ್ಭದಲ್ಲಿ ರೆಡ್ಡಿ ಬಾಂಧವರು ರೆಡ್ಡಿ ಹಿಂದೂ ಎಂಬ ನಮೂದಿಸಬೇಕು ಎಂದು ಮಹಾಯೋಗಿ ವೇಮನ ಪೀಠದ ರೆಡ್ಡಿ ಮಹಾ ಸಂಸ್ಥಾನದ ಅಧ್ಯಕ್ಷ ಮಲ್ಲಿಕಾರ್ಜುನರೆಡ್ಡಿ ಮನವಿ ಮಾಡಿದ್ದಾರೆ.
ದೇಶದ ರೆಡ್ಡಿ ಸಮುದಾಯವು ಹಿಂದೂಗಳೇ ಹೊರತು, ಲಿಂಗಾಯತ, ವೀರಶೈವರಲ್ಲ. ಆದ್ದರಿಂದ ಎಲ್ಲರೂ ರೆಡ್ಡಿ ಹಿಂದೂ ಎಂದು ಕಡ್ಡಾಯವಾಗಿ ಬರೆಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಕೋರಿದರು. ಮಹಾಸಂಸ್ಥಾನದ ಕಾರ್ಯದರ್ಶಿ ಡಾ.ಬಸವರಾಜ ರೆಡ್ಡಿ, ಮಾಧವ ರೆಡ್ಡಿ, ಯಲ್ಲಾರೆಡ್ಡಿ, ದೊಡ್ಡ ಶೇಷಾರೆಡ್ಡಿ, ಜೆ.ಪ್ರಸಾದ್ ರೆಡ್ಡಿ, ಗೋಪಾಲ ರೆಡ್ಡಿ ಮೊದಲಾದವರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.