ಹೊಸಕೋಟೆ: ಇಲ್ಲಿಗೆ ಸಮೀಪದ ವೋಲ್ವೊ ಕಾರ್ಖಾನೆಯ ನೌಕರರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ನಡೆಸುತ್ತಿರುವ ಪ್ರತಿಭಟನೆ 50ನೇ ದಿನಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಆಡಳಿತ ವರ್ಗದ ಗಮನ ಸೆಳೆಯಲು ಸೋಮವಾರ ರಕ್ತದಾನ ಮಾಡುವುದರ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟಿಸಿದರು.
`ಕಾರ್ಖಾನೆಯ ನೌಕರರು ತುಟ್ಟಿಭತ್ಯೆ ಜಾರಿ ಹಾಗೂ ಗುತ್ತಿಗೆ ಆಧಾರಿತ ನೌಕರರನ್ನು ಕಾಯಂಗೊಳಿಸುವಂತೆ ಒತ್ತಾಯಿಸಿ ಆಡಳಿತ ಮಂಡಳಿಯೊಡನೆ ಚರ್ಚಿಸಿ ವಿಫಲವಾದ ನಂತರ ಅನಿರ್ದಿಷ್ಟ ಮುಷ್ಕರ ಆರಂಭಿಸಿದ್ದರು. ಇಷ್ಟಾದರೂ ಆಡಳಿತ ಮಂಡಳಿ ಬೇಡಿಕೆಗಳಿಗೆ ಸ್ಪಂದಿಸಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಆರಂಭಿಸಲಾಗಿತ್ತು. ಇದೀಗ ಕಾರ್ಮಿಕರು ಶಾಂತಿಯುತ ಹೋರಾಟದ ಸಂದೇಶವನ್ನು ರವಾನಿಸಲು ರಕ್ತದಾನ ಮಾಡಿದರು' ಎಂದು ಹೋರಾಟ ಸಮಿತಿಯ ಅಧ್ಯಕ್ಷ ವೈ.ಎಂ.ನಾರಾಯಣಸ್ವಾಮಿ ತಿಳಿಸಿದರು.
ವಿವಿಧ ಸಂಘಟನೆಗಳ ನೆರವಿನಿಂದ ಪ್ರತಿಭಟನೆಯನ್ನು ಮುಂದುವರಿಸಲಾಗುವುದು' ಎಂದು ಸಂಘದ ಕಾರ್ಯದರ್ಶಿ ಎಸ್.ವಿ.ರಾಜ ತಿಳಿಸಿದರು. ತಾಲ್ಲೂಕು ಸಿಐಟಿಯು ಅಧ್ಯಕ್ಷ ಹರೀಂದ್ರ, ಡಿವೈಎಫ್ಐ ಅಧ್ಯಕ್ಷ ಎನ್.ವಿ.ಶ್ರೀನಿವಾಸ ಆಚಾರ್ ಮತ್ತಿತರರು ಇದೇ ಸಂದರ್ಭದಲ್ಲಿ ಮಾತನಾಡಿದರು.