ಯಲಹಂಕ: `ರಕ್ತದಾನ ಮಾಡಬೇಕೆಂಬ ಸಂಕಲ್ಪ ಹೃದಯದಿಂದ ಬರಬೇಕು. ಇದರಿಂದ ಬೇರೆಯವರ ಪ್ರಾಣವನ್ನು ಕಾಪಾಡಿದ ಆತ್ಮತೃಪ್ತಿ ದೊರೆಯುತ್ತದೆ~ ಎಂದು ವೈದ್ಯ ಡಾ.ಎಸ್.ಚಿಕ್ಕಮೊಗ ಹೇಳಿದರು.
ಕೃಷಿ ವಿಶ್ವವಿದ್ಯಾನಿಲಯದ (ಜಿಕೆವಿಕೆ) ಎನ್ಎಸ್ಎಸ್ ಘಟಕ, ಕರ್ನಾಟಕ ವಿದ್ಯಾರ್ಥಿ ಕೂಟ (ಕೆವಿಕೆ) ಮತ್ತು ಡಾ.ರಾಜ್ಕುಮಾರ್ (ಅಪ್ಪಾಜಿ) ಹೆಲ್ತ್ ಕೇರ್ ಅಸೋಸಿಯೇಶನ್ ಹಾಗೂ ರಕ್ತನಿಧಿ-ಗಳ ಸಂಯುಕ್ತ ಆಶ್ರಯದಲ್ಲಿ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿದ್ದ ರಕ್ತದಾನ ಅಭಿನಂದನಾ ಹಾಗೂ ವಿಶ್ವ ರಕ್ತದಾನ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕೇವಲ ರಕ್ತದಾನ ಮಾಡುವುದು ಅಥವಾ ರಕ್ತವನ್ನು ಪಡೆದುಕೊಳ್ಳುವುದು ಮುಖ್ಯವಲ್ಲ. ಸರಿಯಾದ ರೀತಿಯಲ್ಲಿ ರಕ್ತದ ಮಾದರಿಯನ್ನು ಹೊಂದಾಣಿಕೆ ಮಾಡಿದ ನಂತರವಷ್ಟೆ ಅದನ್ನು ರೋಗಿಗೆ ನೀಡುವುದು ಅತಿಮುಖ್ಯ. ಇಲ್ಲದಿದ್ದರೆ ರೋಗಿಯ ಪ್ರಾಣಕ್ಕೆ ಅಪಾಯವಾಗುವ ಸಂಭವಗಳು ಹೆಚ್ಚಾಗಿರುತ್ತವೆ ಎಂದು ಎಚ್ಚರಿಸಿದ ಅವರು, ರಕ್ತದಾನದಿಂದ ಆಗುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು.
ಕೃಷಿ ವಿವಿಯ ಕುಲಪತಿ ಡಾ.ಕೆ.ನಾರಾಯಣಗೌಡ ಮಾತನಾಡಿ, ಆಪತ್ಕಾಲದಲ್ಲಿ ಮನುಷ್ಯನ ಪ್ರಾಣವನ್ನು ಉಳಿಸುವ ಕಾರ್ಯದಲ್ಲಿ ರಕ್ತ ಎಂತಹ ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ಮೊದಲು ಅರಿಯಬೇಕು. ಹಲವು ಬಾರಿ ರಕ್ತದಾನ ಮಾಡಿರುವ ಸಾಧಕರನ್ನು ಗುರುತಿಸಿ ಇಂದು ಸನ್ಮಾನಿ ಸಿರುವುದು ಶ್ಲಾಘನೀಯ ಕಾರ್ಯವಾಗಿದ್ದು, ಇದು ಇತರರಿಗೆ ಸ್ಪೂರ್ತಿಯಾ ಗಲಿದೆ ಎಂದರು.
ಒಟ್ಟು 128 ಬಾರಿ ರಕ್ತದಾನ ಮಾಡಿರುವ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ `ಬ್ಲಡ್~ ಕುಮಾರ್, 108 ಬಾರಿ ರಕ್ತದಾನ ಮಾಡಿರುವ ದಾವಣಗೆರೆಯ ಫುಟ್ಬಾಲ್ ಆಟಗಾರ ಆದಿಕೇಶವ ಪ್ರಕಾಶಶಾಸ್ತ್ರಿ ಸೇರಿದಂತೆ ಒಟ್ಟು 25 ಜನ ಸಾಧಕರನ್ನು ಸನ್ಮಾನಿಸಲಾಯಿತು.
ವಿ.ವಿ. ಡೀನ್ ಡಾ.ಕೆ.ಸುಧೀರ್, ಹಿಮೋಫೀಲಿಯಾ ಸೊಸೈಟಿ (ದಾವಣಗೆರೆ) ಅಧ್ಯಕ್ಷ ಡಾ.ಸುರೇಶ ಅನಗವಾಡಿ, ಸಮಾಜ ಸೇವಕ ಜಯರಾಂ, ಉಪ ಔಷಧಿ ನಿಯಂತ್ರಕರಾದ ಅಬ್ದುಲ್ ಮೊಹ್ಸಿನ್, ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಪ್ರೊ.ಡಾ.ಚಾಮೇಗೌಡ, ಕೆವಿಕೆ ಕಾರ್ಯದರ್ಶಿ ಹರ್ಷ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.