ಬೆಂಗಳೂರು: ‘ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿರುವ 30 ವರ್ಷ ತುಂಬಿದವರಿಗೆ ಕಡ್ಡಾಯವಾಗಿ ರಕ್ತದೊತ್ತಡ ಮತ್ತು ಮಧುಮೇಹ ಪರೀಕ್ಷೆಯನ್ನು ನಡೆಸಲಾಗುವುದು’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದರು.
ಪೂರ್ಣಸುಧಾ ಕ್ಯಾನ್ಸರ್ ಫೌಂಡೇಶನ್ ಮತ್ತು ರೋಟರಿ ಬೆಂಗಳೂರು ಪಶ್ಚಿಮದ ಸಹಯೋಗದಲ್ಲಿ ರಾಜಭವನದಲ್ಲಿ ಸೋಮವಾರ ಆಯೋಜಿಸಿದ್ದ ಸ್ತನ ಕ್ಯಾನ್ಸರ್ ಪತ್ತೆಯ ಸಂಚಾರಿ ಬಸ್ ಸೇವೆಯ (ಎಂಒಎಂ ಎಕ್ಸ್ಪ್ರೆಸ್) ಚಾಲನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಗ್ರಾಮೀಣ ಪ್ರದೇಶಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿ ಈ ತಪಾಸಣೆ ನಡೆಸಲಿದ್ದಾರೆ. 30 ವರ್ಷ ತುಂಬಿದ ಎಲ್ಲರಿಗೆ ಮಧುಮೇಹ ಹಾಗೂ ರಕ್ತದೊತ್ತಡ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡುವಂತೆ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ’ ಎಂದು ತಿಳಿಸಿದರು.
‘ಸ್ವಯಂ ಸೇವಾ ಸಂಸ್ಥೆಗಳ ಜತೆಗೆ ಸೇರಿ ಪ್ರತಿ ವಿಭಾಗದಲ್ಲಿಯೂ ನಾಲ್ಕು ಇದೇ ತರಹದ ಸ್ತನ ಕ್ಯಾನ್ಸರ್ ಪತ್ತೆ ಸಂಚಾರಿ ಬಸ್ಗಳನ್ನು ಸ್ಥಾಪಿಸಲು ಸರ್ಕಾರ ಚಿಂತನೆ ನಡೆಸಿದೆ’ ಎಂದರು.
‘ಆಸ್ಪತ್ರೆಗಳನ್ನು ಕಟ್ಟುವುದು ನಮ್ಮ ಸರ್ಕಾರದ ಉದ್ದೇಶವಲ್ಲ. ಬದಲಿಗೆ, ರೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುವುದು ಮತ್ತು ಎಲ್ಲರಿಗೂ ಒಳ್ಳೆಯ ಆರೋಗ್ಯವನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದೆ’ ಎಂದು ವಿವರಿಸಿದರು.
‘ಜನರಿಗೆ ಅವರ ಆರೋಗ್ಯದ ಕುರಿತು ಯಾವುದೇ ರೀತಿಯ ಕಾಳಜಿಯಿಲ್ಲ. ವರ್ಷಕ್ಕೆ ಒಂದು ಬಾರಿಯಾದರೂ ಅವರ ದೇಹದ ಸ್ಥಿತಿಯ ಕುರಿತು ಪರೀಕ್ಷೆ ಮಾಡಿಸಿಕೊಳ್ಳುವುದಿಲ್ಲ. ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಿದೆ’ ಎಂದು ಹೇಳಿದರು.
ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಮಾತನಾಡಿ, ‘ಈ ದೇಶದಲ್ಲಿ ಶಿಕ್ಷಣ ಮತ್ತು ಆರೋಗ್ಯ ಬಡವರಿಗೆ ಎಟುಕಲಾರದಷ್ಟು ದುಬಾರಿಯಾಗಿದೆ. ಮಾನವೀಯತೆಯನ್ನು ಮರೆತು ಬರೀ ಹಣದಲ್ಲಿ ಎಲ್ಲವನ್ನೂ ಅಳೆಯಲಾಗುತ್ತಿದೆ’ ಎಂದು ವಿಷಾದಿಸಿದರು.
ಎಂಒಎಂ ಎಕ್ಸ್ ಪ್ರೆಸ್
ಕಡಿಮೆ ವೆಚ್ಚದ ಸ್ತನ ಕ್ಯಾನ್ಸರ್ ತಪಾಸಣೆ ಸೇವೆಯಾಗಿದೆ. ತರಬೇತಿ ಪಡೆದ ಮಹಿಳಾ ತಂತ್ರಜ್ಞರು ಮ್ಯಾಮೊಗ್ರಾಮ್ ನಡೆಸುತ್ತಾರೆ. ರೇಡಿಯೊ ತಂತ್ರಜ್ಞರು ಎಕ್ಸ್ರೇ ವಿಶ್ಲೇಷಣೆ ಮಾಡುವ ವ್ಯವಸ್ಥೆಯನ್ನು ರೂಪಿಸಲಾಗಿದೆ. ಸ್ತನ ಕ್ಯಾನ್ಸರ್ನ ಆರಂಭಿಕ ಲಕ್ಷಣಗಳನ್ನು ಮುಂಚಿತವಾಗಿಯೇ ಪತ್ತೆ ಹಚ್ಚಲು ಮ್ಯಾಮೊಗ್ರಾಫಿ ನೆರವಾಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.