ಬೆಂಗಳೂರು: ಮುಂಬೈ ಎದುರಿನ ರಣಜಿ ಕ್ರಿಕೆಟ್ ಪಂದ್ಯಕ್ಕೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದ್ದು, ಗಾಯಗೊಂಡಿರುವ ಅಬ್ರಾರ್ ಖಾಜಿ ಬದಲು ಆಲ್ರೌಂಡರ್ ಅಮಿತ್ ವರ್ಮಾಗೆ ಸ್ಥಾನ ನೀಡಲಾಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡಿ. 22ರಿಂದ 25ರ ವರೆಗೆ ಹಾಲಿ ಚಾಂಪಿಯನ್ನರ ಎದುರು ಪಂದ್ಯ ನಡೆಯಲಿದೆ. ಈ ಸಲದ ರಣಜಿ ಋತುವಿಗೆ ತಂಡವನ್ನು ಆಯ್ಕೆ ಮಾಡಿದ್ದಾಗ ಎಡಗೈ ಬ್ಯಾಟ್ಸ್ಮನ್ ಅಮಿತ್ಗೆ ಸ್ಥಾನ ನೀಡಿರಲಿಲ್ಲ.
ಆರು ಪಂದ್ಯಗಳನ್ನು ಆಡಿರುವ ಆತಿಥೇಯರು ಮೂರು ಪಂದ್ಯಗಳಲ್ಲಿ ಡ್ರಾ ಮತ್ತು ಮೂರು ಗೆಲುವು ಸಾಧಿಸಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ಪಂಜಾಬ್ ಎದುರಿನ ಪಂದ್ಯದಲ್ಲಿ ಹತ್ತು ವಿಕೆಟ್ಗಳ ಜಯ ಸಾಧಿಸಿತ್ತು. ಒಂದೂ ಸೋಲು ಕಾಣದೆ ಮುನ್ನುಗ್ಗುತ್ತಿರುವ ಕರ್ನಾಟಕ 26 ಪಾಯಿಂಟ್ಗಳನ್ನು ಹೊಂದಿದ್ದು ‘ಎ’ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ.
ತಂಡ ಇಂತಿದೆ: ಆರ್. ವಿನಯ್ ಕುಮಾರ್ (ನಾಯಕ), ಸಿ.ಎಂ. ಗೌತಮ್ (ಉಪನಾಯಕ/ವಿಕೆಟ್ ಕೀಪರ್), ಕೆ.ಎಲ್. ರಾಹುಲ್, ಮಯಂಕ್ ಅಗರವಾಲ್, ಮನೀಷ್ ಪಾಂಡೆ, ಸ್ಟುವರ್ಟ್ ಬಿನ್ನಿ, ರೋನಿತ್ ಮೋರೆ, ಗಣೇಶ್ ಸತೀಶ್, ಅಭಿಮನ್ಯು ಮಿಥುನ್, ಎಚ್.ಎಸ್. ಶರತ್, ಕೆ,ಪಿ. ಅಪ್ಪಣ್ಣ, ಕರುಣ್ ನಾಯರ್, ಆರ್. ಸಮರ್ಥ, ಅಮಿತ್ ವರ್ಮಾ ಮತ್ತು ಶ್ರೇಯಸ್ ಗೋಪಾಲ್.
ಜೆ. ಅರುಣ್ ಕುಮಾರ್ (ಬ್ಯಾಟಿಂಗ್ ಕೋಚ್), ಮನ್ಸೂರ್ ಅಲಿ ಖಾನ್ (ಬೌಲಿಂಗ್ ಕೋಚ್), ಬಿ. ಸಿದ್ದರಾಮು (ಮ್ಯಾನೇಜರ್), ಎಂ. ವಸಂತ್ (ಫಿಸಿಯೊ), ಶ್ರವಣ್ (ಟ್ರೈನರ್), ಸಂತೋಷ್ (ವಿಡಿಯೊ ಅನೆಲಿಸ್ಟ್) ಮತ್ತು ಎ. ರಮೇಶ್ ರಾವ್ (ಪ್ರವಾಸ ನಿರ್ವಹಣೆ ಮ್ಯಾನೇಜರ್).