ಬೆಂಗಳೂರು: ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಭರತ್ ಚಿಪ್ಲಿ, ಸ್ಪಿನ್ನರ್ ಕೆ.ಪಿ. ಅಪ್ಪಣ್ಣ ಸೇರಿದಂತೆ ಒಟ್ಟು 16 ಆಟಗಾರರನ್ನು ಒಳಗೊಂಡ ಕರ್ನಾಟಕ ರಣಜಿ ತಂಡವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಶುಕ್ರವಾರ ಪ್ರಕಟಿಸಿದೆ. ವೇಗಿ ಆರ್. ವಿನಯ್ ಕುಮಾರ್ ಅವರಿಗೆ ನಾಯಕ ಸ್ಥಾನದ ಜವಾಬ್ದಾರಿ ಲಭಿಸಿದೆ.
ಈ ತಂಡ ಉದಯಪುರದಲ್ಲಿ ನಡೆಯಲಿರುವ ರಾಜಸ್ತಾನ (ನವೆಂಬರ್ 3) ಹಾಗೂ ರೈಲ್ವೈಸ್ (ನ. 10ರಂದು ದೆಹಲಿ) ವಿರುದ್ಧದ ಪಂದ್ಯದಲ್ಲಿ ಆಡಲಿದೆ. ಗಣೇಶ್ ಸತೀಶ್ ಉಪ ನಾಯಕರಾಗಿದ್ದಾರೆ. ಮೂವರು ಹೊಸ ಆಟಗಾರರು ರಾಜ್ಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಎಸ್. ಕೆ. ಮೊಯಿನುದ್ದೀನ್, ಕೆ. ಗೌತಮ್ ಹಾಗೂ ಎಸ್.ಎಲ್. ಅಕ್ಷಯ್ ಸ್ಥಾನ ಪಡೆದ ಹೊಸ ಆಟಗಾರರು.
2008ರಲ್ಲಿ ತಮಿಳುನಾಡು ವಿರುದ್ಧದ ಪಂದ್ಯದಲ್ಲಿ ಭರತ್ ಕೊನೆಯ ಪಂದ್ಯವನ್ನಾಡಿದ್ದರು. ಅಪ್ಪಣ್ಣ ಸಹ 2009ರಲ್ಲಿ ರಾಜಕೋಟ್ದಲ್ಲಿ ಸೌರಾಷ್ಟ್ರ ವಿರುದ್ಧದ ಆಡಿದ ಪಂದ್ಯವೇ ಕೊನೆಯದ್ದು. ಎರಡು ವರ್ಷಗಳ ನಂತರ ಅಪ್ಪಣ್ಣ ಮತ್ತೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ತಂಡ ಇಂತಿದೆ: ಆರ್. ವಿನಯ ಕುಮಾರ್ (ನಾಯಕ), ರಾಬಿನ್ ಉತ್ತಪ್ಪ, ಕೆ.ಬಿ. ಪವನ್, ಮನೀಷ್ ಪಾಂಡೆ, ಗಣೇಶ್ ಸತೀಶ್ (ಉಪ ನಾಯಕ), ಅಮಿತ್ ವರ್ಮಾ, ಸ್ಟುವರ್ಟ್ ಬಿನ್ನಿ, ಸಿ.ಎಂ. ಗೌತಮ್ (ವಿಕೆಟ್ ಕೀಪರ್), ಕೆ.ಪಿ. ಅಪ್ಪಣ್ಣ, ಅಭಿಮನ್ಯು ಮಿಥುನ್, ಎಸ್. ಅರವಿಂದ್, ಭರತ್ ಚಿಪ್ಲಿ, ಎಸ್. ಕೆ. ಮೊಯಿನುದ್ದೀನ್, ಸುನಿಲ್ ರಾಜು, ಎಸ್. ಎಲ್. ಅಕ್ಷಯ್, ಕೆ. ಗೌತಮ್. ಕೆ. ಜಸ್ವಂತ್ (ಕೋಚ್), ಸೋಮಶೇಖರ್ ಶಿರಗುಪ್ಪಿ (ಸಹಾಯಕ ಕೋಚ್), ಆರ್. ಸುಧಾಕರ್ ರಾವ್ (ಮ್ಯಾನೇಜರ್), ವಿನೋದ್ ಜೈನ್ (ಫಿಸಿಯೊ), ಶ್ರವಣ್ (ತರಬೇತುದಾರ), ಸಂತೋಷ್ (ವಿಡಿಯೋ ಅನೆಲಿಸ್ಟ್).