ಹುಬ್ಬಳ್ಳಿ: `ಭ್ರಷ್ಟಾಚಾರದಿಂದಾಗಿ ಕರ್ನಾಟಕದಲ್ಲಿ ಸರ್ಕಾರ ನಡೆಸುವ ನೈತಿಕ ಅಧಿಕಾರವನ್ನು ಬಿಜೆಪಿ ಕಳೆದುಕೊಂಡಿರುವ ಈ ಸಂದರ್ಭದಲ್ಲಿ ಎಲ್.ಕೆ.ಅಡ್ವಾಣಿ ಅವರಿಂದ ಭ್ರಷ್ಟಾಚಾರ ವಿರೋಧಿ ರಥಯಾತ್ರೆ ನಡೆಯುತ್ತಿದೆ~ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ ಭಾನುವಾರ ಇಲ್ಲಿ ವ್ಯಂಗ್ಯವಾಡಿದರು. ~ಈ ರಥಯಾತ್ರೆಯೇ ಒಂದು ದೊಡ್ಡ ಪ್ರಮಾದ~ ಎಂದು ಅವರು ಕಟುವಾಗಿ ಟೀಕಿಸಿದರು.
ಧಾರವಾಡಕ್ಕೆ ತೆರಳುವ ಮುನ್ನ ಅವರು ಇಲ್ಲಿನ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಕೆಲಕಾಲ ಮಾತನಾಡಿದರು. ~ಕೊನೆ ಗಳಿಗೆಯಲ್ಲಿ ಬೆಂಗಳೂರಿನ ಸಭೆಯನ್ನು ಅಡ್ವಾಣಿ ರದ್ದುಗೊಳಿಸಿದ್ದಾರೆ. ಆದರೆ ಕರಾವಳಿಯಲ್ಲಿ ರಥಯಾತ್ರೆ ನಡೆಯಲಿದೆ.
ಇದು ನೈತಿಕತೆಯೇ? ಬಿಜೆಪಿ ಹೈಕಮಾಂಡ್ಗೆ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಕಾಳಜಿ ನೈಜವಾಗಿದ್ದರೆ ಕರ್ನಾಟಕಕ್ಕೆ ಅಡ್ವಾಣಿ ಭೇಟಿಯನ್ನೇ ರದ್ದುಗೊಳಿಸಬೇಕಿತ್ತು~ ಎಂದು ಅವರು ನುಡಿದರು. ~ರಾಜ್ಯ ಸರ್ಕಾರ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎನ್ನುವುದಕ್ಕೆ ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ನಾಯಕನೂರು ಗ್ರಾಮದಲ್ಲಿ ಈಗಲೂ ಮುಂದುವರಿದಿರುವ ದಲಿತರ ಬಹಿಷ್ಕಾರವೇ ಸಾಕ್ಷಿ~ ಎಂದರು.