ಗಂಗಾವತಿ: `ಛೋಟಾಬಾಂಬೆ~ ಖ್ಯಾತಿ ನಗರದ ಆರಾಧ್ಯದೈವ, ಕಾರಣಿಕ ಪುರುಷ ಚನ್ನಬಸವ ತಾತನ ಪುಣ್ಯ ಸ್ಮರಣೆಯ ಅಂಗವಾಗಿ ಶನಿವಾರ ನಡೆದ ಮಹಾರಥೋತ್ಸವಕ್ಕೆ ಭಕ್ತರು ಸಾಗರದಂತೆ ಹರಿದು ಬಂದರು.
ನೆರೆಯ ಬಳ್ಳಾರಿ-ರಾಯಚೂರು ಜಿಲ್ಲೆಗಳು ಸೇರಿ, ತಾಲ್ಲೂಕಿನ ಬಹುತೇಕ ಹಳ್ಳಿಗಳಿಂದ ಸಹಸ್ರಾರು ಭಕ್ತರು ಬಂದಿದ್ದರು. ತಾತನ ಕೃಪೆಗೆ ಪಾತ್ರರಾಗಲು ಬಂದ ಅಪಾರ ಜನರಿಂದಾಗಿ ಸಂಚಾರಕ್ಕೆ ತೊಂದರೆಯಾಗಿತ್ತು. ಸಂಚಾರ ಸುಗಮಗೊಳಿಸಲು ಪೊಲೀಸರು ಹೆಣಗಾಡಬೇಕಾಯಿತು.
ಶ್ರೀಮಠದಲ್ಲಿ ಮಡಿಸ್ನಾನ ಮಾಡಿ ಬೆಳಗಿನ ಎರಡು ಗಂಟೆಯಿಂದ ಸಾವಿರಾರು ಮಹಿಳೆಯರು, ಮಕ್ಕಳು ದೀಡ್ ನಮಸ್ಕಾರ ಹಾಕಿದರು. ಬಳಿಕ ವಿಶೇಷ ಪೂಜೆ ಮಡಿತೇರು, ಅಲಂಕಾರ ರುದ್ರಾಭಿಷೇಕ ನಡೆದವು.
ಮಾಜಿ ಸಂಸದ ಎಚ್.ಜಿ. ರಾಮುಲು, ಸಂಸದ ಎಸ್. ಶಿವರಾಮಗೌಡ, ಶಾಸಕ ಪರಣ್ಣ ಮುನವಳ್ಳಿ, ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಲಲಿತಾರಾಣಿ, ಮಾಜಿ ಶಾಸಕರಾದ ಎಚ್.ಆರ್. ಶ್ರೀನಾಥ್, ಜಿ. ವೀರಪ್ಪ, ಮಹಾದೇವಪ್ಪ, ಮರಿಯಪ್ಪ ದರ್ಶನ ಪಡೆದರು.
ಜಿಲ್ಲಾ, ತಾಲ್ಲೂಕು ಮತ್ತು ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಸದಸ್ಯರು, ವಿವಿಧ ಪಕ್ಷಗಳ ಮುಖಂಡರು, ವಿವಿಧ ಸಮಾಜದ ಧುರೀಣರು, ಉದ್ಯಮಿಗಳು ಮಠಕ್ಕೆ ಭೇಟಿ ನೀಡಿ ಯೋಗಿಯ ದರ್ಶನ ಪಡೆದು ಪುನೀತರಾದರು.
ಸುಮಾರು 50 ಸಾವಿರ ಭಕ್ತರಿಗೆ ಸಿಬಿಎಸ್ ಕಲ್ಯಾಣ ಮಂಟಪದಲ್ಲಿ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.