ಬೆಂಗಳೂರು: ರಮಣ ಮಹರ್ಷಿಗಳ ಜೀವನ ತತ್ವ, ಸಂದೇಶಗಳ ಪ್ರಸಾರದ ಉದ್ದೇಶದಿಂದ ರಮಣ ಮಹರ್ಷಿ ಕಲಿಕಾ ಕೇಂದ್ರ ಹಾಗೂ ಭಗವಾನ್ ರಮಣ ಮಹರ್ಷಿ ಸಂಶೋಧನಾ ಕೇಂದ್ರಗಳ ಸಂಯುಕ್ತಾಶ್ರಯದಲ್ಲಿ ಜ.5 ಮತ್ತು 6ರಂದು 2 ದಿನದ ವಿಚಾರ ಸಂಕಿರಣ ಮತ್ತು ಸಾಂಸ್ಕೃತಿಕ ಉತ್ಸವವನ್ನು ಸಂಜಯನಗರದ ರಮಣ ಮಹರ್ಷಿ ಪರಂಪರಾ ಕೇಂದ್ರದ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಜ. 5ರಂದು ಮಧ್ಯಾಹ್ನ 2ಕ್ಕೆ ಆರಂಭವಾಗಲಿರುವ ವಿಚಾರ ಸಂಕಿರಣದಲ್ಲಿ `ರಮಣ ಮಹರ್ಷಿಗಳ ಜೀವನ ಮತ್ತು ಅವರ ಬೋಧನೆಗಳು' ಕುರಿತು ಕೈಲಾಸ ಆಶ್ರಮದ ಜಯೇಂದ್ರ ಪುರಿ ಮಾತನಾಡಲಿದ್ದಾರೆ.
ಜೊತೆಗೆ `ಶ್ರೀ ರಮಣ ಲೀಲಾ' ನೃತ್ಯ ರೂಪಕ ಕಾರ್ಯಕ್ರಮ ನಡೆಯಲಿದೆ. 2ನೇ ದಿನದಂದು `ಹಂಸ- ಭಾರತೀಯ ಪರಂಪರೆಯ ಸಾರಸಂಗ್ರಹ' ಕುರಿತು ಉಪನ್ಯಾಸವಿರುತ್ತದೆ. ಸಂಶೋಧನಾ ಕೇಂದ್ರದ ನೃತ್ಯಗಾರ್ತಿ ಡಾ.ಅಂಬಿಕಾ ಕಾಮೇಶ್ವರ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸಮಾರಂಭದಲ್ಲಿ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಭಾಗವಹಿಸುವರು. ಮಹರ್ಷಿಗಳ ಜೀವನಗಾಥೆ, ಬೋಧನೆಗೆ ಸಂಬಂಧಪಟ್ಟ ಪುಸ್ತಕಗಳು ಹಾಗೂ ಸಿ.ಡಿ ಲಭ್ಯ ಇರಲಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ ಂದು ಪ್ರಕಟಣೆ ತಿಳಿಸಿದೆ.