ಮಂಗಳೂರು: ಭೂಗತ ಪಾತಕಿ ರವಿ ಪೂಜಾರಿಯ ಇಬ್ಬರು ಸಹಚರರನ್ನು ಮಂಗಳೂರು ನಗರ ಪೊಲೀಸರ ತಂಡ ಮಂಗಳವಾರ ಬಂಧಿಸಿದೆ.
ಕುಖ್ಯಾತ ರೌಡಿ, ಆದಿ ಉಡುಪಿಯ ಪ್ರದೀಪ್ ಮೆಂಡನ್ (39) ಹಾಗೂ ಕೊಡಗಿನ ಸೋಮವಾರಪೇಟೆಯ ಎ.ಎಸ್.ರವಿ (27) ಬಂಧಿತರು. ಆರೋಪಿಗಳಿಂದ ಒಂದು ರಿವಾಲ್ವರ್, 10 ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರದೀಪ್ ಮೆಂಡನ್ ವಿರುದ್ಧ ಎರಡು ಕೊಲೆ ಪ್ರಕರಣ, 4 ಕೊಲೆ ಯತ್ನ ಪ್ರಕರಣ, ಎರಡು ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಇತರೆ ಎರಡು ಪ್ರಕರಣಗಳು ದಾಖಲಾಗಿವೆ.
ನಗರದಲ್ಲಿ ಇತ್ತೀಚೆಗೆ ನಡೆದ ಶೂಟೌಟ್ ಪ್ರಕರಣ ಹಿನ್ನೆಲೆಯಲ್ಲಿ ರೌಡಿ ಹಿನ್ನೆಲೆಯುಳ್ಳ ಎಲ್ಲಾ ವ್ಯಕ್ತಿಗಳನ್ನು ಕರೆಸಿ ವಿಚಾರಣೆ ನಡೆಸಲಾಗಿತ್ತು. ಅವರ ಚಲನವಲನದ ಬಗ್ಗೆ ವಿಶೇಷ ನಿಗಾ ಇರಿಸಲಾಗಿತ್ತು. ಪ್ರದೀಪ್ ಮೆಂಡನ್ ಹಾಗೂ ರವಿಯನ್ನು ಕೂಲಂಕಶ ವಿಚಾರಣೆಗೊಳಪಡಿಸಿದಾಗ ಒಂದು ರಿವಾಲ್ವರ್ ಹಾಗೂ 10 ಗುಂಡುಗಳು ಪತ್ತೆಯಾದವು ಎಂದು ಮಂಗಳೂರು ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.