ಆನಂದ್ (ಪಿಟಿಐ): ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಆಧ್ಯಾತ್ಮಿಕ ಗುರು ರವಿಶಂಕರ್ ಸ್ವಾಮೀಜಿ ಅವರನ್ನು ಶನಿವಾರ ಇಲ್ಲಿನ ಅಂಕ್ಲಾವ್ಡಿ ಗ್ರಾಮದ ಆಶ್ರಮದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.
ಸುಮಾರು 40 ನಿಮಿಷಗಳ ಕಾಲ ನಡೆದ ಈ ಗೋಪ್ಯ ಮಾತುಕತೆಯಲ್ಲಿ ಸ್ವಾಮಿ ವಿವೇಕಾನಂದ ಅವರ 150 ಜನ್ಮದಿನಾಚರಣೆಗೆ ಸಂಬಂಧಿಸಿದಂತೆ ಇಬ್ಬರೂ ಚರ್ಚಿಸಿದರು ಎಂದು ಮುಖ್ಯಮಂತ್ರಿ ಕಚೇರಿಯ ಮೂಲಗಳು ತಿಳಿಸಿವೆ.
ಆಶ್ರಮದ ವಕ್ತಾರರಾದ ಮೆಹುಲ್ ಶರ್ಮಾ ಅವರು ಸುದ್ದಿಗಾರರೊಂದಿಗೆ ಮಾತನಾಡಿ, `ಮುಖ್ಯಮಂತ್ರಿಗಳು ಇಲ್ಲಿಗೆ ಸೌಜನ್ಯದ ಭೇಟಿ ನೀಡಿದ್ದರು. ಗುರೂಜಿ ಆಶ್ರಮಕ್ಕೆ ಬಂದಾಗಲೆಲ್ಲಾ ಅವರು ಇಲ್ಲಿಗೆ ಬರುವುದು ವಾಡಿಕೆ.
ಬೆಳಿಗ್ಗೆ ಅವರು ಗುರೂಜಿಯವರು ನಡೆಸಿಕೊಟ್ಟ ಧ್ಯಾನದಲ್ಲಿ ಪಾಲ್ಗೊಂಡಿದ್ದರು. ಇದಕ್ಕೆ ರಾಜಕೀಯ ಬಣ್ಣ ಕಲ್ಪಿಸುವುದು ಬೇಡ ~ ಎಂದು ತಿಳಿಸಿದರು.