ತುಮಕೂರು: ನಗರದ ರವೀಂದ್ರ ಕಲಾ ನಿಕೇತನದಲ್ಲಿ `ಬದುಕು~ ಅನಾವರಣಗೊಂಡಿದೆ. ಬದುಕಿನ ಸಂತೃಪ್ತಿ, ಹಳ್ಳಿ ಜೀವನ, ಬದುಕಿನ ಲಾಲಿತ್ಯ, ಕಷ್ಟದಲ್ಲೂ ನಗುವ ಮುಖಗಳು...
ಹೀಗೆ ವೈವಿಧ್ಯಮಯ ಬದುಕು ಕಲಾ ನಿಕೇತನದಲ್ಲಿ ಗುರುವಾರದಿಂದ ಆರಂಭಗೊಂಡ ಎನ್.ಎನ್. ರಾಮಚಂದ್ರನ್ ಅವರ ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನದ ಕಲಾಕೃತಿಗಳಲ್ಲಿ ಕಾಣಸಿಗುತ್ತದೆ.
ವರ್ಣ ತೀರಗಳತ್ತ ಚಲಿಸುವ ಸ್ವಪ್ನನಾವಿಕ ಎಂದೆ ಖ್ಯಾತರಾಗಿದ್ದು, ರಾಷ್ಟ್ರದ ಅಗ್ರಪಂಕ್ತಿಯ ಕಲಾವಿದರು. ಜಲವರ್ಣ ಚಿತ್ರ, ನಿಸರ್ಗ ಚಿತ್ರ, ದುಡಿಮೆಯ ಜೀವಗಳು ಇವರ ಚಿತ್ರಕಲಾಕೃತಿಯಲ್ಲಿ ಎದ್ದು ಕಾಣುತ್ತವೆ.
ತಮಿಳುನಾಡಿನವರಾದ ರಾಮಚಂದ್ರನ್ ಅವರ ಚಿತ್ರಕಲೆಗಳ ಪ್ರದರ್ಶನ ಮತ್ತು ಮಾರಾಟದ ಅವಕಾಶವನ್ನು ರವೀಂದ್ರ ಕಲಾನಿಕೇತನ ಚಿತ್ರ ಮಹಾವಿದ್ಯಾಲಯ ಮಾಡಿಕೊಟ್ಟಿದೆ.
ಕಲಾ ಪ್ರದರ್ಶನದಲ್ಲಿ ಒಟ್ಟು 30 ಕಲಾಕೃತಿಗಳನ್ನು ಪ್ರದರ್ಶಿಸಲಾಗಿದ್ದು, ಅಕ್ಟೋಬರ್ 4ರ ವರೆಗೂ ಪ್ರದರ್ಶನ ಮತ್ತು ಮಾರಾಟ ಇರುತ್ತದೆ. ಸಾರ್ವಜನಿಕರು, ವಿದ್ಯಾರ್ಥಿಗಳು ಬೆಳಿಗ್ಗೆ 10ರಿಂದ ಸಂಜೆ 4ರ ವರೆಗೆ ವೀಕ್ಷಿಸಬಹುದಾಗಿದೆ.
ಅಮೂರ್ತ, ನೈಜ್ಯ ಹಾಗೂ ಪ್ರಭಾವಿ ಪ್ರಕಾರಗಳಲ್ಲಿ ಈ ಎಲ್ಲ ಕಲಾಕೃತಿಗಳನ್ನು ತೈಲವರ್ಣದಲ್ಲಿ ರಚಿಸಲಾಗಿದೆ. `ಕನಸು ಬೆಂಬತ್ತಿದ ಸಾಹಸಿ~ ಎಂದೇ ಕರೆಯಿಸಿಕೊಳ್ಳುವ ರಾಮಚಂದ್ರನ್ ಅವರ ಕಲಾಕೃತಿಗಳನ್ನು ನೋಡುವುದೇ ಚೆನ್ನ. ಕಲೆಯ ಬಗ್ಗೆ ಏನೇನು ಗೊತ್ತಿಲ್ಲದವರು ಕೂಡ ಚಿತ್ರಗಳನ್ನು ನೋಡುತ್ತಲೇ ಅವುಗಳ ಒಳಮರ್ಮ ಅರ್ಥ ಮಾಡಿಕೊಳ್ಳಬಹುದು ಎಂದು ಗುರುವಾರ ಕಲಾ ಪ್ರದರ್ಶನ ಕುರಿತು ಮಾಹಿತಿ ನೀಡಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ರಾಮಚಂದ್ರನ್ ನುಡಿದರು.
ಬ್ಯಾನರ್ ಪೇಂಟರ್ನಲ್ಲಿ ಕೂಡ ರಾಮಚಂದ್ರನ್ ಅವರದು ಡೊಡ್ದ ಹೆಸರು ಎಂದು ಕಾಲೇಜು ಪ್ರಾಂಶುಪಾಲ ಬಾಬುರಾವ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಲಲಿತಾ ಕಲಾ ಅಕಾಡೆಮಿ ಸದಸ್ಯ ಕಿಶೋರ್ ಕುಮಾರ್, ಉಪನ್ಯಾಸಕ ಪ್ರಸನ್ನ ಇದ್ದರು.