ನ್ಯೂಯಾರ್ಕ್ (ಪಿಟಿಐ): ರಾಜಸ್ತಾನದ ಜೈಪುರದಲ್ಲಿ ನಡೆಯಲಿರುವ ಸಾಹಿತ್ಯ ಸಮಾರಂಭದಲ್ಲಿ ಭಾಗವಹಿಸುವ ಬಗ್ಗೆ ವಿವಾದಿತ ಲೇಖಕ ಸಲ್ಮಾನ್ ರಶ್ದಿ ಮೌನ ತಾಳಿದ್ದು, ಈ ಕುರಿತು ಟ್ವಿಟ್ಟರ್ನಲ್ಲಿಯೂ ಅವರು ಯಾವುದೇ ಸೂಚನೆ ನೀಡಿಲ್ಲ.
ಹೀಗಾಗಿ ರಶ್ದಿ ಅವರ ಭಾರತ ಭೇಟಿ ಕುರಿತು ವದಂತಿಗಳು ಹಬ್ಬಿವೆ. ಸಾಮಾನ್ಯವಾಗಿ ಟ್ಟಿಟ್ಟರ್ನಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ರಶ್ದಿ, ಈ ವಾರದ ಆರಂಭದಿಂದ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಟ್ವಿಟ್ಟರ್ ಮತ್ತು ಅವರ ಏಜೆನ್ಸಿಗಳ ಮೂಲಕ ಅವರನ್ನು ಸಂಪರ್ಕಿಸುವ ಮಾಧ್ಯಮಗಳ ಪ್ರಯತ್ನ ಯಶಸ್ವಿಯಾಗಿಲ್ಲ. ಇದೇ 20ರಿಂದ ಆರಂಭವಾಗಲಿರುವ ಐದು ದಿನಗಳ ಕಾರ್ಯಕ್ರಮದಲ್ಲಿ ಮೊದಲ ಮೂರು ದಿನದ ಗೋಷ್ಠಿಗಳಲ್ಲಿ ರಶ್ದಿ ಭಾಗವಹಿಸಲಿದ್ದಾರೆ ಎಂದು ಹಿಂದೆ ಘೋಷಿಸಲಾಗಿತ್ತು.
1988ರಲ್ಲಿ ಬರೆದ `ಸಟಾನಿಕ್ ವರ್ಸಸ್~ ವಿವಾದಿತ ಪುಸ್ತಕದಲ್ಲಿನ ಧರ್ಮ ನಿಂದನೆಗಾಗಿ ರಶ್ದಿ ಅವರ ಭಾರತ ಭೇಟಿಗೆ ತೀವ್ರ ವಿರೋಧ ವ್ಯಕ್ತವಾಗಿದೆ. ರಾಜಸ್ತಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ರಶ್ದಿ ಅವರ ಭೇಟಿಯಿಂದ ಭದ್ರತಾ ಸಮಸ್ಯೆ ಉಂಟಾಗಬಹುದು ಎಂದು ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಅವರಿಗೆ ತಿಳಿಸಿದ್ದಾರೆ.
ರಶ್ದಿ ತಮ್ಮ ಬಳಿ `ಭಾರತ ಮೂಲದ ವ್ಯಕ್ತಿ~ (ಪಿಐಒ) ಕಾರ್ಡ್ ಹೊಂದಿರುವುದರಿಂದ ತಮಗೆ ಬೇಕಾದಾಗ ಅವರು ದೇಶಕ್ಕೆ ಬರಬಹುದಾಗಿದೆ.