ಬಳ್ಳಾರಿ: ವೀರಶೈವ ಧರ್ಮಗ್ರಂಥ ಆಗಿರುವ ‘ಸಿದ್ಧಾಂತ ಶಿಖಾಮಣಿ’ಯು ರಷ್ಯನ್ ಭಾಷೆಗೆ ಭಾಷಾಂತರಗೊಳ್ಳಲಿದೆ ಎಂದು ಕಾಶಿ ಪೀಠದ ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ನಗರದ ಶೆಟ್ರ ಗುರುಶಾಂತಪ್ಪ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಶುಕ್ರವಾರ ಸಂಜೆ ಆರಂಭವಾದ ಉಜ್ಜಯಿನಿ ಸದ್ಧರ್ಮ ಪೀಠದ ಸಿದ್ಧಲಿಂಗ ಶಿವಾಚಾರ್ಯರ 75ನೇ ಪುಣ್ಯತಿಥಿಯ, ಲಿಂಗ ಬೆಳಗಿನ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಆರ್ಶೀವಚನ ನೀಡಿದರು.
ಲಿಂಗೈಕ್ಯ ಸಿದ್ಧಲಿಂಗ ಭಗವತ್ಪಾದರು ವಿರಚಿತ ವೀರಶೈವ ಧರ್ಮಗ್ರಂಥ ಸಿದ್ಧಾಂತ ಶಿಖಾಮಣಿಯ ತತ್ವ ಸಿದ್ಧಾಂತ ಕೇವಲ ಭಾರತದಲ್ಲಷ್ಟೇ ಅಲ್ಲ, ರಷ್ಯದಲ್ಲೂ ಮೆಚ್ಚುಗೆ ಪಡೆದಿದೆ ಎಂದು ಅವರು ತಿಳಿಸಿದರು.
ರಷ್ಯದ ಭಕ್ತರ ಅಪೇಕ್ಷೆಯ ಮೇರೆಗೆ ಸಿದ್ಧಾಂತ ಶಿಖಾಮಣಿಯು ಕೆಲವೇ ದಿನಗಳಲ್ಲಿ ರಷ್ಯನ್ ಭಾಷೆಗೆ ಭಾಷಾಂತರಗೊಳ್ಳಲಿದ್ದು, ವೀರಶೈವವು ಮನುಜ ಮತ, ವಿಶ್ವ ಪಥ ಎಂಬ ತತ್ವವನ್ನು ಸಾರಿ ಹೇಳಲಿದೆ ಎಂದು ಅವರು ತಿಳಿಸಿದರು.
ಗಣಿ ಉದ್ಯಮಿ ಕೆ.ಎಂ. ವಿಶ್ವನಾಥ ಕಾರ್ಯಕ್ರಮ ಉದ್ಘಾಟಿಸಿದರು. ಉಜ್ಜಯಿನಿ ಪೀಠದ ಮರುಳ ಸಿದ್ಧರಾಜ ದೇಶಿಕೇಂದ್ರ ಶಿವಾಚಾರ್ಯ, ನೂತನ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತರಾಧ್ಯ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.
ತೆಕ್ಕಲಕೋಟೆ ಕಂಬಾಳಿಮಠದ ವೀರಭದ್ರ ಶಿವಾಚಾರ್ಯರು, ಹಂಪಿ ಸಾವಿರ ದೇವರ ಮಠದ ವಾಮದೇವ ಶಿವಾಚಾರ್ಯ, ಜಮಖಂಡಿ ಶ್ರೀಗಳು, ಪಂಪಾಪತಿ ಶಾಸ್ತ್ರೀ, ಬಾಪೂರ ನಾಗಭೂಷಣ ಗವಾಯಿ, ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಸಂಗನಕಲ್ ಇಂದುಶೇಖರ್, ಕನ್ನಡ ಕ್ರಾಂತಿದಳ ಜಿಲ್ಲಾ ಘಟಕದ ಅಧ್ಯಕ್ಷ ದರೂರು ಶಾಂತನಗೌಡ, ವೈ.ವಿ. ಹಾಲಪ್ಪ, ಗುರುಮೂರ್ತಿ, ಎಚ್. ಹಂಪನಗೌಡ, ಕೆ.ಎಂ. ಉಮಾಶಂಕರ, ಬಿ.ಎಂ. ಶಾಸ್ತ್ರೀ, ಎ.ಜಿ. ಶಿವಕುಮಾರ, ತಿಪ್ಪೇರುದ್ರ, ಎರ್ರಿಸ್ವಾಮಿ, ಕಲ್ಲುಕಂಬ ಮಲ್ಲಿಕಾರ್ಜುನಗೌಡ, ಕೊರ್ಲಗುಂದಿ ತಿಪ್ಪೇರುದ್ರ, ಅಣ್ಣಾ ವಿರೂಪಾಕ್ಷಪ್ಪ, ಎಚ್.ಎಂ. ವೀರಭದ್ರ ಶರ್ಮ, ಮತ್ತಿತರರು ಹಾಜರಿದ್ದರು.