ಕನಕಪುರ: `ಕೇಂದ್ರದ ಸರ್ಕಾರದ ತಾರತಮ್ಯ ನೀತಿಯಿಂದಾಗಿ ರಾಜ್ಯಕ್ಕೆ ಆಮದಾಗಬೇಕಿದ್ದ ಯೂರಿಯ ರಸಗೊಬ್ಬರ ಆಂಧ್ರದ ಪಾಲಾಗಿ ರಾಜ್ಯದ ರೈತರು ಗೊಬ್ಬರಕ್ಕಾಗಿ ಪರದಾಡುವಂತಾಗಿದೆ~ ಎಂದು ಜಯಕರ್ನಾಟಕ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಕುಮಾರಸ್ವಾಮಿ ಆರೋಪಿಸಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಶುಕ್ರವಾರ ಮಾತನಾಡಿದ ಅವರು, ಮುಂಗಾರು ಆರಂಭದಿಂದಲೇ ರಾಜ್ಯದೆಲ್ಲೆಡೆ ಭತ್ತ ನಾಟಿ ಶುರುವಾಗಿದೆ. ಮುಂಗಾರಿಗೂ ಮುನ್ನ ಅವಶ್ಯಕತೆಗೆ ಅನುಗುಣವಾಗಿ ರಸಗೊಬ್ಬರವನ್ನು ದಾಸ್ತಾನು ಮಾಡಿಲ್ಲದ ಕಾರಣ ಅಭಾವ ಸೃಷ್ಟಿಯಾಗಿದೆ. ಗೊಬ್ಬರದ ಕೊರತೆ ಮನಗಂಡ ಕೆಲವು ಮಾರಾಟಗಾರರು ದುಪ್ಪಟ್ಟು ಬೆಲೆಗೆ ಮಾರಾಟ ಮಾಡಿ ರೈತರನ್ನು ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯದ ಸಂಸದರೂ ಕೂಡ ಗೊಬ್ಬರದ ವಿಷಯಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವಲ್ಲಿ ವಿಫಲರಾಗಿದ್ದಾರೆ. ಗೊಬ್ಬರ ಅಭಾವಕ್ಕೆ ಸಂಸದರು ಪರೋಕ್ಷ ಕಾರಣ. ದೇಶದಲ್ಲಿ ಕಾಂಗ್ರೆಸ್ ಸರ್ಕಾರವಿರುವ ಕಡೆ ರಸಗೊಬ್ಬರ ವಿತರಣೆ ಸಮರ್ಪಕವಾಗಿದೆ. ರಾಜ್ಯದಲ್ಲಿ ಬಿ.ಜೆ.ಪಿ. ಸರ್ಕಾರವಿರುವುದರಿಂದ ಈ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಇದು ಖಂಡನೀಯ ಎಂದು ದೂರಿದರು.
ಎರಡು ವರ್ಷದ ಹಿಂದೆ ಹಾವೇರಿಯಲ್ಲಿ ರಸಗೊಬ್ಬರ ವಿತರಿಸುವ ಸಂದರ್ಭದಲ್ಲಿ ಗೋಲಿಬಾರ್ ನಡೆದಿತ್ತು. ಪ್ರಸ್ತುತ ರಸಗೊಬ್ಬರ ಕೊರತೆ ಮುಂದುವರಿದರೆ ಅದೇ ಘಟನೆ ಮತ್ತೆ ಮರುಕಳಿಸಿ ಅಮಾಯಕ ರೈತ ಜೀವಗಳು ಬಲಿಯಾಗುತ್ತವೆ. ಇದಕ್ಕೆ ಕೇಂದ್ರ ಸರ್ಕಾರವೇ ನೇರ ಹೊಣೆಯಾಗುತ್ತದೆ ಎಂದು ಎಚ್ಚರಿಸಿದ್ದಾರೆ. ತಾಲ್ಲೂಕು ಅಧ್ಯಕ್ಷ ರಾಮಚಂದ್ರ, ಸಂಘಟನೆಯ ಜಿಲ್ಲಾ ಎಸ್ಸಿ/ಎಸ್ಟಿ ಘಟಕದ ಅಧ್ಯಕ್ಷ ಎಂ.ಕೃಷ್ಣಪ್ಪ, ಜಿಲ್ಲಾ ಕಾರ್ಯದರ್ಶಿ ಎಂ. ನಿಂಗರಾಜು ಹಾಜರಿದ್ದರು.