ಶೃಂಗೇರಿ: ಇಲ್ಲಿನ ಟಿಎಪಿಸಿಎಂಎಸ್ ಗೋದಾಮಿಗೆ ರಸಗೊಬ್ಬರ ಸರಬರಾಜಾಗಿದ್ದು, ರೈತರ ಆತಂಕ ದೂರವಾಗಿದೆ.ರಸಗೊಬ್ಬರ ಪೂರೈಕೆಯಿಲ್ಲದೆ 2-3 ತಿಂಗಳುಗಳಿಂದ ಕೃಷಿ ಕಾರ್ಯದಲ್ಲಿ ವ್ಯತ್ಯಯ ಕಂಡುಬಂದಿತ್ತು. ನಾಟಿ ಮಾಡಿದ ಗದ್ದೆಗಳಿಗೆ ಹಾಗೂ ಅಡಿಕೆ ತೋಟಗಳಿಗೆ ರಸಗೊಬ್ಬರ ನೀಡಲಾಗದೆ ರೈತರು ಆತಂಕಕ್ಕೊಳಗಾಗಿದ್ದರು.
ರಸಗೊಬ್ಬರ ಪೂರೈಕೆ ಜವಾಬ್ದಾರಿ ಕೈಗೆತ್ತಿಕೊಂಡಿದ್ದ ಟಿಎಪಿಸಿಎಂಎಸ್ ಇದೀಗ ಮತ್ತೊಂದು ಲೋಡ್ ಪೊಟ್ಯಾಷ್, ಯೂರಿಯಾ ಹಾಗೂ ಸೂಪರ್ ಫಾಸ್ಫೇಟ್ ತರಿಸಿದೆ. ಪೊಟ್ಯಾಷ್ ಮೂಟೆಯಲ್ಲಿ ಎಂಆರ್ಪಿ ದರ ನಮೂದಿಸದಿರುವ ಬಗ್ಗೆ ತಾಲ್ಲೂಕು ರೈತ ಸಂಘ ಗುರುವಾರ ಆರೋಪಿಸಿದ್ದು ಕೂಡಲೇ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ ಕೃಷಿ ಸಹಾಯಕ ನಿರ್ದೇಶಕ ಪ್ರಭಾಕರ್ ಎಂಆರ್ಪಿ ದರವಿರುವ ಬಗ್ಗೆ ಖಚಿತಪಡಿಸಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಭಾಕರ್, ಈಗಾಗಲೇ ತಾಲ್ಲೂಕು ಟಿಎಪಿಸಿಎಂಎಸ್ಗೆ 80 ಟನ್, ಮೆಣಸೆ ಸೊಸೈಟಿಗೆ 50 ಟನ್, ಉಳಿದಂತೆ ತಾಲ್ಲೂಕಿನ ವಿಎಸ್ಎಸ್ಎನ್ಗಳಿಗೆ ತಲಾ 30 ಟನ್ ಸೇರಿದಂತೆ ತಾಲ್ಲೂಕಿಗೆ 250 ಟನ್ ರಸಗೊಬ್ಬರಕ್ಕಾಗಿ ಇಂಡೆಂಟ್ ಸಲ್ಲಿಸಲಾಗಿದೆ. ರೈತರಿಗೆ ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಂಡು ಈ ತಿಂಗಳಿನಲ್ಲಿಯೇ ರಸಗೊಬ್ಬರ ಪೂರೈಸುವ ಭರವಸೆ ನೀಡಿದ್ದಾರೆ.
ತಾಲ್ಲೂಕು ರೈತ ಸಂಘ ಅಧ್ಯಕ್ಷ ಬಂಡ್ಲಾಪುರ ಶ್ರೀಧರ್ರಾವ್, ಕಾರ್ಯದರ್ಶಿ ಚಂದ್ರಶೇಖರ್, ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎಚ್.ಟಿ. ರಮೇಶ್, ಸಂದೇಶ್ಹೆಗ್ಡೆ ಇನ್ನಿತರರು ಇದ್ದರು.