ಶಹಾಪುರ: ತಾಲ್ಲೂಕಿನ ರಸ್ತಾಪುರ ಗ್ರಾಮದ ಶರಬಲಿಂಗೇಶ್ವರ ದೇವಸ್ಥಾನದ ಬಳಿ ಈಚೆಗೆ 11ನೇ ಶತಮಾನಕ್ಕೆ ಸೇರಿದ ಮಾತನಾಡುವ ಕಲ್ಲು, ಲಕುಲೇಶ ಮತ್ತು ಸೂರ್ಯ ಶಿಲ್ಪಗಳನ್ನು ಉತ್ಖನದ ಮೂಲಕ ಡಾ.ಎಂ.ಎಸ್.ಸಿರವಾಳ ಪತ್ತೆಹಚ್ಚಿದ್ದಾರೆ.
ಲಕುಲೇಶ, ಸೂರ್ಯ ಮತ್ತು ನಾಗ ಶಿಲ್ಪಗಳನ್ನು ಎದರು ಬದುರಾಗಿರುವ ಮೂರು ಕೆಂಪು ಗ್ರಾನೈಟ್ ಕಲ್ಲುಗಳಲ್ಲಿ ಕೊರೆಯಲಾಗಿದೆ. ಒಂದೂವರೆ ಅಡಿ ಅಗಲ ಮತ್ತು ಎರಡೂವರೆ ಅಡಿ ಎತ್ತರದಲ್ಲಿ ಕಲ್ಲಿನಲ್ಲಿ ಶಿಲ್ಪಗಳನ್ನು ಕೆತ್ತನೆ ಮಾಡಲಾಗಿದೆ ಎಂದು ಸಿರವಾಳ ತಿಳಿಸಿದ್ದಾರೆ.
ಪತ್ತೆಯಾಗಿರುವ ಶಿಲ್ಪಗಳು ನೋಡಲು ಗಾತ್ರದಲ್ಲಿ ಚಿಕ್ಕವಾಗಿದ್ದು, ಅವುಗಳ ಮೇಲಿನ ಕೆತ್ತನೆಯ ಅಂಶಗಳನ್ನು ಗಮನಿಸಿದಾಗ ಇದರಲ್ಲಿ ಸಾಂಸ್ಕೃತಿಕ ಚರಿತ್ರೆ ಅಡಗಿದೆ. ರಸ್ತಾಪೂರ ಗ್ರಾಮದ ಸುತ್ತಮುತ್ತಲಿನ ಪ್ರದೇಶ ಲಾಕುಳಶೈವ ಶಾಖೆ ಹಾಗೂ ಸುರ್ಯೋಪಾಸಕರ ಪ್ರಮುಖ ಧಾರ್ಮಿಕ ಶೈಕ್ಷಣಿಕ ಕೇಂದ್ರವಾಗಿತೆಂದು ತಿಳಿದು ಬರುತ್ತದೆ ಎಂದು ಅವರು ವಿವರಿಸಿದರು.
ಇಂತಹ ಮಹತ್ವದ ಇತಿಹಾಸ ಸಾರುವ ಶಿಲ್ಪಗಳ ಶೋಧನೆ ಹಾಗೂ ಸಂರಕ್ಷಣೆ ಅಗತ್ಯವಾಗಿದೆ ಎಂದು ಸಗರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಸುರೇಶ ತುತಾರೆ, ನೀರಜ ಪಾಟೀಲ್, ರಾಮಕೃಷ್ಣ, ಶರಣಪ್ಪ ಹೆರುಂಡಿ, ನಾಗಣ್ಣ ನಾಯ್ಕೋಡಿ ಮತ್ತಿತರರು ತಿಳಿಸಿದ್ದಾರೆ.