ಬೆಂಗಳೂರು: ರಾಮಕೃಷ್ಣ ಹೆಗಡೆ ನಗರದಲ್ಲಿರುವ ಬಾಲಾಜಿ ಕೃಪಾ ಬಡಾವಣೆಯಲ್ಲಿ ರಸ್ತೆ ಅಭಿವೃದ್ಧಿ ಮತ್ತು ಚರಂಡಿ ಕಾಮಗಾರಿಗಳಿಗೆ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಶಾಸಕ ಕೃಷ್ಣ ಬೈರೇಗೌಡ ಅವರು ಭೂಮಿ ಪೂಜೆ ನೆರವೇರಿಸುವ ಮೂಲಕ ಮಂಗಳವಾರ ಚಾಲನೆ ನೀಡಿದರು.
ಬಾಲಾಜಿ ಕೃಪಾ ಬಡಾವಣೆಯ ಅಭಿವೃದ್ಧಿ ಕಾಮಗಾರಿಗಳಿಗಾಗಿ ಬ್ಯಾಟರಾಯನಪುರ ಉಪವಿಭಾಗ ವ್ಯಾಪ್ತಿಯ 2011-12ನೇ ಸಾಲಿನ `ಶಾಸಕರ ಅನುದಾನ'ದ ಅಡಿಯಲ್ಲಿ ರೂ 10 ಲಕ್ಷ ಬಿಡುಗಡೆ ಮಾಡಲಾಗಿದ್ದು ಈ ಅನುದಾನದಲ್ಲಿ ಬಡಾವಣೆಯ ನಾಲ್ಕು ಅಡ್ಡರಸ್ತೆಗಳ ಅಭಿವೃದ್ಧಿ ಹಾಗೂ ಚರಂಡಿ ಕಾಮಗಾರಿ ಮಾಡಿಕೊಡಲಾಗುವುದು ಎಂದು ಬೈರೇಗೌಡ ಅವರು ಹೇಳಿದರು.
ಬಡಾವಣೆಯ ಮುಖ್ಯರಸ್ತೆಗೆ ಡಾಂಬರು ಹಾಕಿಸಿಕೊಟ್ಟದ್ದಲ್ಲದೆ, ಕುಡಿಯುವ ನೀರು ಒದಗಿಸುವ ಸಲುವಾಗಿ ಈ ಮೊದಲೇ ಕೊಳವೆ ಬಾವಿ ಒದಗಿಸಿಕೊಟ್ಟಿರುವ ಶಾಸಕರು, ರಾಮಕೃಷ್ಣ ಹೆಗಡೆ ನಗರದಿಂದ ವಿವಿಧ ಕಡೆಗಳಿಗೆ ತೆರಳುವ ಜನರ ಅನುಕೂಲಕ್ಕಾಗಿ ಬಸ್ ಸಂಪರ್ಕ ವ್ಯವಸ್ಥೆ ಕಲ್ಪಿಸುವುದು, ಬಡಾವಣೆಯ ಒಳಚರಂಡಿಗೆ ಹೊರಹರಿವಿನ ಸಂಪರ್ಕ ಕಲ್ಪಿಸುವ ಮತ್ತಿತರ ಕಾಮಗಾರಿಗಳಿಗೆ ಬೆಂಬಲ ನೀಡುವುದಾಗಿಯೂ ಭರವಸೆ ನೀಡಿದರು.
ಯುವ ಕಾಂಗ್ರೆಸ್ ಬೆಂಗಳೂರು ಉತ್ತರ ಘಟಕದ ಅಧ್ಯಕ್ಷ ಎಚ್.ಎ.ಶಿವಕುಮಾರ್, ಪಾಲಿಕೆ ಸದಸ್ಯ ಗುರುಪ್ರಸಾದ್ ಹಾಜರಿದ್ದರು.