ಬ್ರಹ್ಮಾವರ: ದೂಪದಕಟ್ಟೆ ಹೊನ್ನಾಳ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ದುರಸ್ತಿಗೆ ಆಗ್ರಹಿಸಿ ಹೊನ್ನಾಳ ಮತ್ತು ಆಸುಪಾಸಿನ ನಾಗರಿಕರು ಮಂಗಳವಾರ ಕರೆ ನೀಡಿದ್ದ ಒಂದು ದಿನದ ಬಂದ್ ಉತ್ತಮ ಬೆಂಬಲ ವ್ಯಕ್ತವಾಯಿತು.
ಬೆಳಿಗ್ಗೆಯಿಂದಲೇ ಹೊನ್ನಾಳ, ಕುಕ್ಕುಡೆ, ಗಾಂಧಿನಗರ, ಬೈಕಾಡಿ, ದೂಪದಕಟ್ಟೆ ನಾಗರಿಕರು ಸ್ವಯಂ ಪ್ರೇರಿತರಾಗಿ ಬಂದ್ ನಡೆಸಿದರು. ಅಂಗಡಿಮುಂಗಟ್ಟುಗಳು ಮುಚ್ಚಿದ್ದರೆ, ಪರಿಸರದ ಶಾಲೆಗಳಿಗೆ ರಜೆ ಸಾರಲಾಯಿತು. ಸಂಜೆ ಹಾರಾಡಿ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನಾಕಾರರು ಸಭೆ ನಡೆಸಿದರು.
ಸುಮಾರು 25 ವರ್ಷಗಳ ಹಿಂದೆ ಉಪ್ಪಿನ ಕೋಟೆಯಿಂದ ಹೊನ್ನಾಳ ಸಂಪರ್ಕಿಸುವ ರಸ್ತೆ ನಿರ್ಮಾಣಗೊಂಡಿದ್ದರೂ ಕೆಲವೆಡೆ ಮಾತ್ರ ದುರಸ್ತಿ ಕಂಡಿತ್ತು. ಇನ್ನುಳಿದ ಸುಮಾರು 4.5 ಕಿ.ಮೀ ಉದ್ದದ ರಸ್ತೆ ಯಾವುದೇ ಅಭಿವೃದ್ಧಿ ಕಾಣದೆ ಸಂಪೂರ್ಣ ಹೊಂಡಮಯವಾಗಿ ವಾಹನ ಸಂಚಾರಕ್ಕೆ ಅಯೋಗ್ಯವಾಗಿತ್ತು.
ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿಗೆ ಸಮೀಪವಿರುವ ಹೊನ್ನಾಳದಲ್ಲಿ ಶಾಲಾ ಕಾಲೇಜು, ಆಸ್ಪತ್ರೆ, ದೇವಸ್ಥಾನ, ವ್ಯಾಪಾರಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಈ ರಸ್ತೆಯ ಅವಸ್ಥೆಯಿಂದ ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಹೊನ್ನಾಳ ರಸ್ತೆ ದುರಸ್ತಿಗೆ ಇಟ್ಟ ಹಣ ದುರುಪಯೋಗವಾಗಿದೆ ಎಂದು ಪ್ರತಿಭಟನಾಕಾರರು ಈ ಸಂದರ್ಭದಲ್ಲಿ ತಿಳಿಸಿದರು. ಶೀಘ್ರವೇ ರಸ್ತೆಯ ದುರಸ್ತಿ ಕಾರ್ಯ ನಡೆಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.