ಮಂಡ್ಯ: ನಗರ ಮತ್ತು ತಾಲ್ಲೂಕಿನ ಬೇವಿನಹಳ್ಳಿ, ಕೊತ್ತತ್ತಿ ಗ್ರಾಮಗಳಿಗ ಸಂಪರ್ಕ ಕಲ್ಪಿಸುವ, ತೀರಾ ಹದಗೆಟ್ಟ ಸ್ಥಿತಿಯಲ್ಲಿರುವ ರಸ್ತೆ ದುರಸ್ಥಿತಿಗೆ ಆಗ್ರಹಿಸಿ ಆ ಭಾಗದ ನೂರಾರು ಗ್ರಾಮಸ್ಥರು ಸೋಮವಾರ ಪ್ರತಿಭಟಿಸಿದರು.
ಜಯಕರ್ನಾಟಕ ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಯವರೆಗೂ ಆಗಮಿಸಿ ರಸ್ತೆ ದುರಸ್ತಿಗೆ ಒತ್ತಾಯಿಸಿ ಧರಣಿ ನಡೆಸಿದರು.
ಬೇವಿನಹಳ್ಳಿ ಗ್ರಾಮದ ಬಳಿ ಸೇರಿದ ಗ್ರಾಮಸ್ಥರು, ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ದುರಸ್ತಿ ಪಡಿಸಬೇಕು ಎಂಬ ಬೇಡಿಕೆ ಕುರಿತು ಗಮನಹರಿಸದ ಅಧಿಕಾರಿಗಳ ಕಾರ್ಯವೈಖರಿಯನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು.
ರಸ್ತೆ ದುರಸ್ಥಿಗೆ ಆಗ್ರಹಪಡಿಸಿ ಸಾಕಷ್ಟು ಬಾರಿ ಮನವಿ ಸಲ್ಲಿಸಿದರು ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದು, ಕಡೆಗಣಿಸಿದ್ದಾರೆ ಎಂದು ಖಂಡಿಸಿ, ರಸ್ತೆಯ್ಲ್ಲಲಿಯೇ ಮಣ್ಣಿನಲ್ಲಿ ಅಣಕು ಸಮಾಧಿ ನಿರ್ಮಿಸುವ ಮೂಲಕ ಅಧಿಕಾರಿಗಳ ಕಾರ್ಯವೈಖರಿ ಕುರಿತು ವ್ಯಂಗ್ಯವಾಡಿದರು.
ಜಿಲ್ಲಾಡಳಿತ ಇನ್ನಾದರೂ ಈ ರಸ್ತೆ ಅಭಿವೃದ್ಧಿಗೆ ಗಮನಹರಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆಯನ್ನು ಇನ್ನಷ್ಟು ಚುರುಕುಗೊಳಿಸಲಾಗುವುದು ಎಂದು ಈ ಕುರಿತ ಮನವಿಯಲ್ಲಿಯೂ ಎಚ್ಚರಿಸಿದ್ದಾರೆ.
ಪ್ರತಿಭಟನೆಯಲ್ಲಿ ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ಕೆ.ಟಿ.ಶಂಕರೇಗೌಡ, ರಾಜ್ಯ ಉಪಾಧ್ಯಕ್ಷ ಎಸ್. ನಾರಾಯಣ್, ಕಾರ್ಯಾಧ್ಯಕ್ಷ ತುಳಸೀದಾಸ್, ಕಾಮ ಧೇನು ರಮೇಶ್, ಎಂ.ಎನ್.ಶಂಕರ್, ಜೆ. ನಾರಾಯಣ್, ಸೇರಿ ಕೊತ್ತತ್ತಿ, ಬೇವಿನಹಳ್ಳಿಯ ಮುಖಂಡರು ಇದ್ದರು.