ಭಾಲ್ಕಿ: ಸುರಕ್ಷಿತ ಸಂಚಾರಕ್ಕಾಗಿ ರಸ್ತೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಎಆರ್ಟಿಓ ಮನೋಹರ ಕಾಳೆ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಬುಧವಾರ ಹಲಬರ್ಗಾದ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಹಮ್ಮಿಕೊಂಡ 22ನೇ ರಸ್ತೆ ಸುರಕ್ಷತಾ ಸಪ್ತಾಹದಲ್ಲಿ ಮಾತನಾಡಿದರು.
ಸಪ್ತಾಹದ ನಿಮಿತ್ತ ಎಲ್ಲೆಡೆ ವಾಹನ ತಪಾಸಣೆ ಜೊತೆಗೆ ರಸ್ತೆ ಸುರಕ್ಷತಾ ಕ್ರಮಗಳ ಬಗ್ಗೆ ಜನ ಜಾಗೃತಿ ಮೂಡಿಸಲಾಗುತ್ತಿದೆ ಎಂದು ನುಡಿದರು. ವಾಹನ ನಿರೀಕ್ಷಕ ಬಿ.ಪಿ. ನಾಗರಾಜ್ ಮಾತನಾಡಿ, ದ್ವೀಚಕ್ರ ಸವಾರರು ತಮ್ಮ ಜೀವದ ಸುರಕ್ಷತೆಗಾಗಿ ಹೆಲ್ಮೆಟ್ ಧರಿಸಬೇಕು. ಬೈಕ್ನಲ್ಲಿ ಇಬ್ಬರು ಮಾತ್ರ ಸವಾರಿ ಮಾಡಬೇಕು. ಟ್ರ್ಯಾಕ್ಟರ್ ಟ್ರ್ಯಾಲಿಯಲ್ಲಿ ಜನರನ್ನು ಕರೆದೊಯ್ಯಬಾರದು. ವಾಹನಗಳಿಗೆ ಕಡ್ಡಾಯ ವಿಮೆ ಅಗತ್ಯವಾಗಿದೆ ಎಂದು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಅರವಿಂದ ಹೇಡೆ ಮಾತನಾಡಿ, ಅತಿ ವೇಗ ಮತ್ತು ಮಧ್ಯ ಕುಡಿದು ವಾಹನ ಚಾಲನೆ ಮಾಡುವದು ಸರಿಯಲ್ಲ ಎಂದರು. ಎಎಸ್ಐ ಜ್ಞಾನಚಂದ್ ಚಲವಾ, ಮಾರುತಿ ರೆಡ್ಡಿ ಮುಂತಾದವರು ಇದ್ದರು. ಧನರಾಜ ಮಂಗಣೆ ನಿರ್ವಹಿಸಿದರು. ಸುಭಾಷ ಗೋಬರೆ ವಂದಿಸಿದರು.