ಗೌರಿಬಿದನೂರು: ಪಟ್ಟಣದ ಹೊರವಲಯದಲ್ಲಿರುವ ಚನ್ನಭೈರೇನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ರೈಲ್ವೆ ಇಲಾಖೆಯವರು ಕಲ್ಲುಗಳನ್ನು ನೆಟ್ಟು, ವಾಹನಗಳು ಹಾಗೂ ಜನರು ಸಂಚರಿಸದಂತೆ ಬಂದ್ ಮಾಡಿದ್ದಾರೆ.
ಕಲ್ಲೂಡಿ ಗ್ರಾಮದ ಹಿಂದೂಪುರ ಮಾರ್ಗವಾಗಿ ಈ ಗ್ರಾಮಕ್ಕೆ ಬರುವವರು ರೈಲ್ವೆ ಸೇತುವೆ ಕೆಳಗಿನ ರಸ್ತೆಯಲ್ಲಿ ಸಂಚರಿಸುತ್ತಿದ್ದರು. ಆದರೆ ವಾಹನಗಳು ಸಂಚರಿಸುವುದರಿಂದ ಸೇತುವೆಗೆ ಅಪಾಯವಾಗುತ್ತದೆ ಎಂಬ ಕಾರಣ ನೀಡಿ ರೈಲ್ವೆ ಇಲಾಖೆಯವರು ರಸ್ತೆಗೆ ಅಡ್ಡಲಾಗಿ ಕಲ್ಲುಗಳನ್ನು ನೆಟ್ಟಿದ್ದಾರೆ.
ಪತ್ರಿನಿತ್ಯ ಇದೇ ದಾರಿಯಲ್ಲಿ ಪಟ್ಟಣಕ್ಕೆ ಹೋಗಿಬರುವವರಿಗೆ, ಕಲ್ಲೂಡಿ ಗ್ರಾಮಕ್ಕೆ ಹಾಲು ತೆಗೆದುಕೊಂಡು ಹೋಗುವ ರೈತರಿಗೆ, ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗಿದೆ. ರೈಲ್ವೆ ಸೇತುವೆ ಕೆಳಗಿನ ರಸ್ತೆ ಮಾರ್ಗ ಉತ್ತಮವಾಗಿದೆ. ಆದರೆ ಇದ್ದಕ್ಕಿದಂತೆ ರೈಲ್ವೆ ಇಲಾಖೆಯವರು ರಸ್ತೆ ಮುಚ್ಚಿರುವುದರಿಂದ ಗ್ರಾಮಸ್ಥರಿಗೆ ದಿಕ್ಕು ಕಾಣದಂತಾಗಿದೆ.
ಈಗಾಗಲೇ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಶೀಘ್ರವಾಗಿ ಸಮಸ್ಯೆ ಬಗೆಹರಿಸಿ ಗ್ರಾಮಕ್ಕೆ ಪರ್ಯಾಯ ದಾರಿಯನ್ನು ಕಲ್ಪಿಸಬೇಕು ಇಲ್ಲದಿದ್ದಲ್ಲಿ ಹೋರಾಟ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.