ಶೃಂಗೇರಿ: ಶಿವಮೊಗ್ಗದಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 13ರ ತಾಲ್ಲೂಕಿನ ನೆಮ್ಮಾರು, ತನಿಕೋಡು, ಕೆರೆಕಟ್ಟೆ, ಎಸ್.ಕೆ. ಬಾರ್ಡರ್ ರಸ್ತೆ ಹೆದ್ದಾರಿ ಇಲಾಖೆ ಮತ್ತು ಕುದುರೆಮುಖ ರಾಷ್ಟ್ರೀಯ ಉದ್ಯಾನ ಯೋಜನೆಯ ತಿಕ್ಕಾಟದಲ್ಲಿ ಅಭಿವೃದ್ಧಿ ಕಾಣದೆ ಮೃತ್ಯುಕೂಪವಾಗಿ ಪರಿಣಮಿಸಿದೆ.
ಈ ರಸ್ತೆ ಹೆಸರಿಗೆ ರಾಷ್ಟ್ರೀಯ ಹೆದ್ದಾರಿ ಯಾದರೂ ಇಲ್ಲಿನ ತಿರುವುಗಳಿಂದ ಕೂಡಿದ ಇಕ್ಕಟ್ಟಾದ ರಸ್ತೆಯಲ್ಲಿ ಏಕಮುಖ ಸಂಚಾರ ಮಾತ್ರ ಸಾಧ್ಯ. ರಸ್ತೆ ವಿಸ್ತರಣೆಗೆ ರಾಷ್ಟ್ರೀಯ ಉದ್ಯಾನದ ವಿರೋಧ ಇರುವ ಕಾರಣ ಹಿಂದಿನ ಕಿರಿದಾದ ರಸ್ತೆಗೆ ಹಲವು ಬಾರಿ ಮರು ಡಾಂಬರೀಕರಣ ಮಾತ್ರ ಮಾಡಿದ್ದು, ರಸ್ತೆಯ ಅಂಚು ಎತ್ತರವಾಗಿದೆ.
ಅಂಚಿನ ಪಕ್ಕದಲ್ಲಿ ಮಣ್ಣು ಹಾಕಿ ಏರಿಸಲಾಗಿದೆಯಾದರೂ ಎದುರಿನ ವಾಹನಕ್ಕೆ ದಾರಿ ಮಾಡಿಕೊಡಲು ರಸ್ತೆಯಿಂದ ಕೆಳಗಿಳಿಸಿದಲ್ಲಿ ವಾಹನಗಳು ಕೆಸರಿನಲ್ಲಿ ಹುಗಿದು ಕೊಂಡು ಮೇಲೆತ್ತಲು ಪರದಾಡುವಂತಾ ಗುತ್ತದೆ.
ಇದೇ ಕಾರಣಕ್ಕಾಗಿ ಎದುರುಬದುರಾದ ವಾಹನಗಳಲ್ಲಿ ಯಾರೊಬ್ಬರೂ ರಸ್ತೆಯಿಂದ ಕೆಳಗಿಳಿಸದ ಕಾರಣ ಮತ್ತು ಇಲ್ಲಿನ ರಸ್ತೆ ಇಕ್ಕಟ್ಟಾಗಿದ್ದು, ತಿರುವುಗಳಿಂದ ಕೂಡಿರುವುದ ರಿಂದ ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ರಸ್ತೆಯ ತಗ್ಗಿನಲ್ಲೇ ಹಲವು ದೂರ ತುಂಗಾ ನದಿಯೂ ಹರಿಯುತ್ತದೆಯಾದರೂ ರಸ್ತೆಯ ಪಕ್ಕದಲ್ಲಿ ತಡೆ ಕಲ್ಲುಗಳನ್ನು ಅಳವಡಿಸಿಲ್ಲ ಮತ್ತು ರಸ್ತೆಗೆ ಅಡ್ಡಲಾಗಿ ಹರಿಯುವ ಹಲವು ಹಳ್ಳಗಳಿಗೆ ಸೇತುವೆ ನಿರ್ಮಿಸಿದ್ದು ಜಖಂಗೊಂಡಿರುವ ಅವುಗಳ ಕೈಪಿಡಿಯನ್ನು ದುರಸ್ತಿ ಮಾಡದಿರುವುದು ಅಪಘಾತಕ್ಕೆ ಆಹ್ವಾನ ನೀಡುತ್ತಿವೆ.
ಇಲ್ಲಿನ ಅಪಘಾತದ ಕೆಲವು ಪ್ರಕರಣಗಳು ಠಾಣೆಯಲ್ಲಿ ದಾಖಲಾದರೆ, ಇನ್ನು ಕೆಲವು ಪ್ರಕರಣಗಳಲ್ಲಿ ವಾಹನದ ಮಾಲೀಕರು ಈಗಾಗಿ ರುವುದೇ ಸಾಕು ಇನ್ನು ಪೊಲೀಸ್ ಮೊಕದ್ದಮೆಯ ಸಹವಾಸವೇ ಬೇಡ ಎಂದು ವಿಮೆಯ ಪರಿಹಾರಕ್ಕೂ ಪ್ರಯತ್ನಿಸದೆ ತಮ್ಮಷ್ಟಕ್ಕೆ ತಾವೇ ನಷ್ಟ ಅನುಭವಿಸುವಂತಾಗಿದೆ.
ಈ ರಸ್ತೆಯಲ್ಲಿ ಪ್ರವಾಸಿ ವಾಹನಗಳ ಸಂಚಾರ ಹೆಚ್ಚಾಗಿದ್ದು, ಒಂದೊಮ್ಮೆ ಅಪಘಾತ ಸಂಭವಿಸಿದರಂತೂ ಪ್ರವಾಸಿಗರ ಪ್ರಯಾಸ ಹೇಳತೀರದು. ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿ, ವಶಪಡಿಸಿಕೊಂಡ ವಾಹನ ಚಿಕ್ಕಮಗಳೂರು ಸಾರಿಗೆ ಕಚೇರಿಯ ವಾಹನ ನಿರೀಕ್ಷಕರಿಂದ ಪರಿಶೀಲನೆಯಾಗಿ, ಕಾನೂನು ಪ್ರಕ್ರಿಯೆಗಳನ್ನು ಮುಗಿಸಿಕೊಂಡು ಠಾಣೆಯಿಂದ ಹೊರತಂದು ಅಪಘಾತದಿಂದ ನುಜ್ಜುಗುಜ್ಜಾದ ವಾಹನವನ್ನು ದುರಸ್ತಿ ಮಾಡಿಸಿಕೊಂಡು ಊರು ಸೇರುವ ವೇಳೆಗೆ ಇತ್ತ ತಲೆಹಾಕಿ ಮಲಗುವುದೂ ಬೇಡ ಎಂಬ ಅನುಭವ ಪ್ರವಾಸಿಗರದ್ದಾಗಿರುತ್ತದೆ.
ಇದಲ್ಲದೆ ಅಪಘಾತದಿಂದ ಗಾಯಗೊಂಡ ರಂತೂ ದೂರದ ಮಂಗಳೂರು ಅಥವಾ ಮಣಿ ಪಾಲ ಆಸ್ಪತ್ರೆಗೇ ದಾಖಲಿಸುವ ಅನಿವಾರ್ಯತೆ ಇದ್ದು, ತುರ್ತು ಚಿಕಿತ್ಸೆ ದೊರಕದೆ ಹಲವು ಬಾರಿ ಪ್ರಾಣಾಪಾಯಗಳೂ ಸಂಭವಿಸಿವೆ.
ಆಗ್ರಹಿಸುವುದೇನೆಂದರೆ, ರಸ್ತೆಯ ದುರವಸ್ಥೆ ಯಿಂದಾಗಿ ಪ್ರತಿನಿತ್ಯ ಇದೇ ರಸ್ತೆಯಲ್ಲಿ ಸಂಚರಿ ಸುವ ನಮಗೆ ತೀವ್ರ ತೊಂದರೆ ಯುಂಟಾ ಗುತ್ತಿದೆ.
ಇಲ್ಲಿರುವ ರಸ್ತೆಯ ಅಂಚಿಗೆ ತುರ್ತಾಗಿ ಹೊಳೆಗೊಣೆ (ಗ್ರಾವೆಲ್) ಹಾಕಿ ವಾಹನಗಳನ್ನು ರಸ್ತೆಯ ಕೆಳಗಿಳಿಸಿದರೂ ಹುಗಿದುಕೊಳ್ಳದಂತೆ ಕ್ರಮಕೈಗೊಳ್ಳಬೇಕಿದೆ. ಮಳೆಗಾಲ ಆರಂಭವಾದ ಕಳೆದ ಒಂದು ತಿಂಗಳಲ್ಲಿ ಹಲವು ಅಪಘಾತಗಳು ಸಂಭವಿಸಿವೆ. ಇನ್ನಷ್ಟು ಅವಘಡಗಳು ಸಂಭವಿ ಸುವ ಮೊದಲು ಸೂಕ್ತ ಕ್ರಮಕೈಗೊಳ್ಳಬೇಕೆಂದು ನೆಮ್ಮಾರಿನ ಪುಟ್ಟಪ್ಪ, ತನಿಕೋಡು ಮಂಜುನಾಥ್ ಆಗ್ರಹಿಸುತ್ತಾರೆ.
ಎ.ಆರ್. ವಿಜಯಕುಮಾರ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.