ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ-ಸ್ವಚ್ಛತೆಗೆ ಆದ್ಯತೆ : ಸಿದ್ದೇಶ್ವರ ಸೂಚನೆ

Last Updated 2 ಅಕ್ಟೋಬರ್ 2012, 8:00 IST
ಅಕ್ಷರ ಗಾತ್ರ

ಜನ ಸಂಪರ್ಕ ಸಭೆಯಲ್ಲಿ ಹರಿದು ಬಂದ ಸಾರ್ವಜನಿಕರ ಅಹವಾಲು
ದಾವಣಗೆರೆ:
ನಗರ ಪಾಲಿಕೆ ಮುಂದಿನ ರಸ್ತೆ ಕೆಸರು ಗದ್ದೆಯಾಗಿದೆ. ನಗರದ ಸ್ವಚ್ಛತೆ ಕಾಪಾಡುವ ಪಾಲಿಕೆ ಕಚೇರಿಯ ಮುಂಭಾಗವೇ ಹೀಗಾದರೆ ಹೇಗೆ? ಕೂಡಲೇ, ಅವ್ಯವಸ್ಥೆ ಸರಿಪಡಿಸಿ ಎಂದು ಸಂಸತ್ ಸದಸ್ಯ ಜಿ.ಎಂ. ಸಿದ್ದೇಶ್ವರ ಪಾಲಿಕೆ ಮೇಯರ್ ಹಾಗೂ ಆಯುಕ್ತರಿಗೆ ಸೂಚಿಸಿದರು.

ನಗರದ ಪಿ.ಬಿ. ರಸ್ತೆಯ ತಮ್ಮ ಕಚೇರಿಯಲ್ಲಿ ಸೋಮವಾರ ನಡೆದ ಜನ ಸಂಪರ್ಕಸಭೆಯಲ್ಲಿ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಿ ಅವರು ಮಾತನಾಡಿದರು.

ಕುಂದುವಾಡದಿಂದ ಹೊಸ ಜಿಲ್ಲಾಧಿಕಾರಿ ಕಚೇರಿ ಸಂಪರ್ಕಿಸುವ ಪ್ರಮುಖ ರಸ್ತೆಯನ್ನು ಡಾಂಬರೀಕರಣಗೊಳಿಸಿ, ರಸ್ತೆಗಳು ಸುಸ್ಥಿತಿಯಲ್ಲಿ ಇರುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತ ಬಿ. ಭೀಮಪ್ಪ, ಪಾಲಿಕೆ ಮುಂಭಾಗದ ರಸ್ತೆ ಲೋಕೋಪಯೋಗಿ ಇಲಾಖೆ ಅಧೀನದಲ್ಲಿದೆ. ಇಲಾಖೆ ಎಂಜಿನಿಯರ್ ಜತೆ ಚರ್ಚಿಸಿ ವಾರದ ಒಳಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಬನ್ನಿಕೋಡು ಗ್ರಾಮದಲ್ಲಿ ಸ್ಮಶಾನ ಜಾಗದ ಸಮಸ್ಯೆ ಇದೆ. ಹಿಂದೆ ಸ್ಮಶಾನ ಎಂದು ಪಾಣಿಯಲ್ಲಿ ನಮೂದಾಗಿದ್ದರೂ, ಕಾಲಾಂತರದಲ್ಲಿ ಅದನ್ನು ಕೈಬಿಡಲಾಗಿದೆ. ಜಾಗದ ಸಮೀಕ್ಷೆ ನಡೆಸಿ ಗ್ರಾಮಸ್ಥರು ಶವಸಂಸ್ಕಾರ ನಡೆಸಲು ಅನುಕೂಲ ಮಾಡಿಕೊಡಬೇಕು ಎಂದು ಬನ್ನಿಕೋಡು ಗ್ರಾಮದ ಹನುಮಂತಪ್ಪ, ಬೀರಪ್ಪ, ರುದ್ರಪ್ಪ, ಸಿದ್ದಪ್ಪ, ಸಣ್ಣಪ್ಪ, ನಂದ್ಯಪ್ಪ, ಸೋಮಶೇಖರಯ್ಯ ಕೋರಿದರು.

ಇದೇ ಸಂದರ್ಭದಲ್ಲಿ ಸಂಸತ್ ಸದಸ್ಯರು ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನ ನಿರ್ಮಾಣಕ್ಕೆ ವೈಯಕ್ತಿಕವಾಗಿ ್ಙ 25 ಸಾವಿರ ದೇಣಿಗೆ ನೀಡಿದರು.

ನಲ್ಕುದುರೆ ಗೋಮಾಳದಲ್ಲಿ ನಿರ್ಮಿಸುತ್ತಿರುವ ಪರಿಶಿಷ್ಟರ ಕಾಲೊನಿಯ ಸಮುದಾಯ ಭವನಕ್ಕೆ ಸಂಸತ್ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿಯಿಂದ ಅನುದಾನ ನೀಡುವಂತೆ ಗ್ರಾಮಸ್ಥರು ಕೋರಿದರು. ಕಟ್ಟಡ ಪೂರ್ಣಗೊಳಿಸಿ, ನಂತರ ್ಙ 2 ಲಕ್ಷ ನೀಡುತ್ತೇನೆ. ನಿಯಮದ ಪ್ರಕಾರ ಪೂರ್ಣಗೊಳ್ಳದೇ ಇರುವ ಕಟ್ಟಡಕ್ಕೆ ಅನುದಾನ ನೀಡುವಂತಿಲ್ಲ ಎಂದು ಸಿದ್ದೇಶ್ವರ ತಿಳಿಸಿದರು.

ಕಳೆದ ಕೆಲ ತಿಂಗಳಿಂದ ನನ್ನ ಬಡ್ತಿ ತಡೆಹಿಡಿಯಲಾಗಿದೆ. ಶಿಕ್ಷಣ ಸಚಿವರಿಗೆ ಹೇಳಿ ಬಡ್ತಿ ಹಾದಿ ಸುಗಮಗೊಳಿಸಿ ಎಂದು ಹರಪನಹಳ್ಳಿ ಬಿಇಒ ವೀರಣ್ಣ ಎಸ್. ಜತ್ತಿ ಕೋರಿದರು.

ಹರಪನಹಳ್ಳಿ ತಾಲ್ಲೂಕು ನಾರಾಯಣಪುರದಲ್ಲಿ 6 ತಿಂಗಳ ಹಿಂದೆ ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಕಳೆದುಕೊಂಡವರಿಗೆ ತಾತ್ಕಾಲಿಕವಾಗಿ ಆಸರೆ ಯೋಜನೆಯ ಮನೆಗಳಲ್ಲಿ ಆಶ್ರಯ ನೀಡಲಾಗಿತ್ತು. ಈಗ ಬಲವಂತದಿಂದ ತೆರವು ಮಾಡಿಸುತ್ತಿದ್ದಾರೆ ಎಂದು ಸಂತ್ರಸ್ಥರು ದೂರಿದರು. ಅವರಿಗೆ ಬದಲಿ ವ್ಯವಸ್ಥೆ ಮಾಡಿ ನಂತರ ತೆರವುಗೊಳಿಸಲು ಸಂಸತ್ ಸದಸ್ಯರು ತಾಕೀತು ಮಾಡಿದರು.

ಈಡೇರಿದ ಜನರ ಭರವಸೆ
ಪ್ರತಿ ವಾರ ಜನಸಂಪರ್ಕ ಸಭೆ ನಡೆಸುತ್ತಿದ್ದು, ಜನರ ಸಣ್ಣಪುಟ್ಟ ಸಮಸ್ಯೆಗಳಿಗೂ ಪರಿಹಾರ ದೊರೆಯುತ್ತಿದೆ. ವಿಧವಾ ವೇತನ, ವೃದ್ಧಾಪ್ಯ ವೇತನದಂತಹ ಸಮಸ್ಯೆಗಳಿಗೂ ಕೆಲವರು ಇಲ್ಲೇ ಪರಿಹಾರ ಕಂಡುಕೊಳ್ಳುತ್ತಾರೆ. ಕೆಲವರು ಕಾನೂನು ಬಿಟ್ಟು ಸಹಕಾರ ಕೇಳುತ್ತಾರೆ. ಆದರೆ, ಕಾನೂನು ಮೀರಿ ಯಾರಿಗೂ ಶಿಫಾರಸು ಮಾಡುವುದಿಲ್ಲ ಎನ್ನುತ್ತಾರೆ ಸಿದ್ದೇಶ್ವರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT