ಲೋಕೋಪಯೋಗಿ ಇಲಾಖೆ ರಾಜ್ಯದಲ್ಲಿರುವ ಹೆದ್ದಾರಿ, ಜಿಲ್ಲಾ ರಸ್ತೆ ಮತ್ತು ಇತರ ರಸ್ತೆಗಳ ಹಾಗೂ ಸೇತುವೆಗಳ ಅಭಿವೃದ್ಧಿ, ದುರಸ್ತಿ ಮತ್ತು ನಿರ್ವಹಣೆಗೆ ಪ್ರತಿವರ್ಷ ನಿರ್ದಿಷ್ಟ ಮೊತ್ತದ ಹಣವನ್ನು ಖರ್ಚು ಮಾಡುತ್ತದೆ.
ಆದರೆ ದಕ್ಷಿಣ ವಲಯದಲ್ಲಿ ಬರುವ ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ವಿಶೇಷ ವಿಭಾಗ ಹಾಗೂ ರಾಮನಗರ ಉಪ ವಿಭಾಗಗಳಲ್ಲಿ ರಸ್ತೆಗಳು ಹದಗೆಟ್ಟಿದ್ದು ಕಾಮಗಾರಿ ನಡೆದ ಯಾವ ಕುರುಹು ಕಾಣುತ್ತಿಲ್ಲ.
ಶಾಸಕರು ಹಾಗೂ ಪ್ರಭಾವಿ ಗುತ್ತಿಗೆದಾರರು ಶಾಮೀಲಾಗಿ ಕಾಮಗಾರಿಗಳ ಟೆಂಡರ್ ಕರೆಯದೆ ಗೌಪ್ಯ ಟೆಂಡರ್ಗಳನ್ನು ಸಲ್ಲಿಸಿ ಮಂಜೂರು ಮಾಡಲಾಗಿದೆ ಎಂಬ ದೂರುಗಳು ಕೇಳಿ ಬಂದಿವೆ. ಕಾಮಗಾರಿಗಳನ್ನು ನಿಯಮಗಳ ಪ್ರಕಾರ ನಿರ್ವಹಿಸದೆ ಕೇವಲ ಶೇ 40 ರಷ್ಟನ್ನು ನಿರ್ವಹಿಸಿ ಪೂರ್ಣ ಬಿಲ್ ಹಣ ಪಡೆದಿದ್ದಾರೆ. ಇದರಿಂದಾಗಿ ರಸ್ತೆಗಳ ವಾರ್ಷಿಕ ನಿರ್ವಹಣಾ ಕಾಮಗಾರಿಗಳು ಸರಿಯಾಗಿ ನಡೆದಿಲ್ಲ. ಈ ಕುರಿತು ತನಿಖೆ ನಡೆಸಬೇಕು.
ಉನ್ನತ ಮಟ್ಟದ ತನಿಖೆ ನಡೆದರೆ ಅವ್ಯವಹಾರಗಳು ಬೆಳಕಿಗೆ ಬರುತ್ತವೆ. ಕಾಮಗಾರಿ ನಿರ್ವಹಿಸದೇ ಹಣ ಪಡೆದ ಗುತ್ತಿಗೆದಾರರ ಮೇಲೆ ನ್ಯಾಯಾಲಯಗಳಲ್ಲಿ ಮೊಕದ್ದಮೆ ಹೂಡಬೇಕು.