ಕುಮಟಾ: ಇಲ್ಲಿಯ ತಹಶೀಲ್ದಾರ್ ಕಚೇರಿ ಎದುರಿನ ರಸ್ತೆಗೆ ಗಟಾರವೇ ಇಲ್ಲದಿರುವುದರಿಂದ ಮಳೆಯ ನೀರೆಲ್ಲ ಜನರು ಓಡಾಡುವ ಪುರಸಭೆಯ ಸಿಮೆಂಟ್ ಪೇವರ್ ರಸ್ತೆಯಲ್ಲಿ ಹರಿಯುತ್ತಿರುವುದರಿಂದ ರಸ್ತೆ ಪಾಚಿಗಟ್ಟಿ ಜನರು ಜಾರಿ ಬೀಳುತ್ತಿದ್ದಾರೆ.
ತಹಶೀಲ್ದಾರ್ ಕಚೇರಿ ಎದುರಿನಿಂದ ಪ್ರವಾಸಿಗೃಹ ಹಾಗೂ ಉಪವಿಭಾಗಾಧಿಕಾರಿಗಳ ಕಚೇರಿಗೆ ಹೋಗುವ ಲೋಕೋಪಯೋಗಿ ರಸ್ತೆಗೆ ಹಿಂದೆ ಇದ್ದ ಚರಂಡಿ ಸಂಪೂರ್ಣ ಮುಚ್ಚಿ ಹೋಗಿದೆ. ಜೋರು ಮಳೆಯಲ್ಲಿ ಇಳಿಜಾರು ರಸ್ತೆಯಿಂದ ರಭಸದಿಂದ ಹರಿದು ಬರುವ ನೀರಿನಲ್ಲಿ ಕಲ್ಲು, ಮಣ್ಣು ಕೊಚ್ಚಿಕೊಂಡು ಬಂದು ರಸ್ತೆಯ ಭಾಗವೂ ಮುಚ್ಚಿ ಹೋಗಿದೆ. ಇದರಿಂದ ತಹಶೀಲ್ದಾರ್ ಕಚೇರಿ ಎದುರು ಜನರ ಓಡಾಟಕ್ಕೆ ಅನುಕೂಲ ಆಗಲಿ ಎಂದು ಸಿಮೆಂಟ್ ಪೇವರ್ ಹಾಕಿ ನಿರ್ಮಿಸಿದ ರಸ್ತೆಯ ಮೇಲೆ ಸುತ್ತಿಲಿನ ಮಳೆಯ ನೀರೆಲ್ಲ ಹರಿದು ಕೆಳಗೆ ಬರುತ್ತದೆ.
ಇದರಿಂದ ಸಿಮೆಂಟ್ ಪೇವರ್ ರಸ್ತೆ ಪಾಚಿಗಟ್ಟಿದ್ದು ಪಡಿತರ ಚೀಟಿ ಹಾಗೂ ಇತರೆ ಉದ್ದೇಶಗಳಿಗೆ ತಾಲ್ಲೂಕು ಕಚೇರಿಗೆ ಬರುವ ಜನರು ಈ ರಸ್ತೆಯಲ್ಲಿ ಓಡಾಡುವಾಗ ಈಗಾಗಲೇ ಜಾರಿ ಬ್ದ್ದಿದಿದ್ದಾರೆ.
ಮಳೆಯ ನೀರು ರಭಸದಿಂದ ರಸ್ತೆಯ ಮೇಲೆ ಹರಿಯುವಾಗ ಇಳಿಜಾರು ರಸ್ತೆಯಲ್ಲಿ ವಯಸ್ಸಾದವರು ಓಡಾಡುವುದು ಕಷ್ಟಕರವಾಗಿರುವುದರಿಂದ ಮಳೆ ನೀರು ಸರಾಗ ಹರಿದು ಹರಿದು ಹೋಗುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಚರಂಡಿ ನಿರ್ಮಾಣಕ್ಕೆ ಕ್ರಮ ಕೈಕೊಳ್ಳಬೇಕಿರುವುದು ಅನಿವಾರ್ಯವಾಗಿದೆ.
ಕುಮಟಾದಲ್ಲಿ ಮಂಗಳವಾರ ಇಡೀ ದಿನ ಮಳೆ ಸುರಿದಿದ್ದು, ಓಡಾಡುವವರಿಗೆ ತೊಂದರೆ ಉಂಟಾಗಿದೆ. ಕುಮಟಾ ಅಷ್ಟೇ ಅಲ್ಲದೆ ಸಿದ್ದಾಪುರ ತಾಲ್ಲೂಕಿನಲ್ಲೂ ಸಾಕಷ್ಟು ಮಳೆಯಾಗಿದ್ದರಿಂದ ಪ್ರವಾಹದಿಂದ ಅಘನಾಶಿನಿ ನದಿ ಈ ವರ್ಷದಲ್ಲಿ ಮೊದಲ ಬಾರಿಗೆ ಉಕ್ಕಿ ಹರಿಯುತ್ತಿದೆ.