ಬಾಗೇಪಲ್ಲಿ: ಪಟ್ಟಣದ ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ಮತ್ತೆ ಪೆಟ್ಟಿಗೆ ಅಂಗಡಿಗಳು ತಲೆ ಎತ್ತಿದ್ದು, ಸಂಚಾರ ದಟ್ಟಣೆಯಿಂದ ವಾಹನ ಸವಾರರು ಪರದಾಡುವಂತಾಗಿದೆ.
ಟಿ.ಬಿ.ಕ್ರಾಸ್ನಿಂದ ನ್ಯಾಷನಲ್ ಕಾಲೇಜ್ವರೆಗಿನ ಮುಖ್ಯರಸ್ತೆಯ ಬದಿಯಲ್ಲಿ, ಪಾದಚಾರಿ ಮಾರ್ಗದಲ್ಲಿ ತರಕಾರಿ, ಹಣ್ಣು, ಹೂವು, ಬಟ್ಟೆ, ದಿನಸಿ ವಸ್ತುಗಳನ್ನು ತಳ್ಳುವ ಗಾಡಿಗಳಲ್ಲಿ ಇರಿಸಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ.
ಕೆಲ ಸಣ್ಣ ಪೆಟ್ಟಿಗೆ ಅಂಗಡಿಗಳನ್ನೂ ನಿರ್ಮಿಸಿಕೊಂಡಿದ್ದಾರೆ. ವ್ಯಾಪಾರದ ಸಾಮಗ್ರಿಗಳನ್ನು ಮುಖ್ಯರಸ್ತೆಯ ಪಾದಚಾರಿ ಮಾರ್ಗದಲ್ಲಿ ಜೋಡಿಸಿಟ್ಟಿದ್ದಾರೆ. ಇದರಿಂದ ಪಾದಚಾರಿಗಳು ಅಪಘಾತದ ಭೀತಿಯಲ್ಲಿಯೇ ನಡು ರಸ್ತೆಯಲ್ಲಿ ಸಂಚರಿಸಬೇಕಾಗಿದೆ.
‘ಮುಖ್ಯರಸ್ತೆಯಲ್ಲಿ ಪ್ರತಿದಿನ ಪೊಲೀಸ್– ನಗರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಂಚರಿಸುತ್ತಾರೆ. ಆದರೆ ಯಾರೊಬ್ಬರೂ ಟ್ರಾಫಿಕ್ ಸಮಸ್ಯೆ ಪರಿಹರಿಸಲು ಗಮನ ಹರಿಸುತ್ತಿಲ್ಲ’ ಎಂದು ಪಟ್ಟಣದ ನಿವಾಸಿ ಗೊರ್ತಪಲ್ಲಿ ಶ್ರೀನಿವಾಸುಲು ಹೇಳಿದರು.
ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಬಾಲಕಿಯರ ಸರ್ಕಾರಿ ಶಾಲೆಯ ಇಕ್ಕೆಲಗಳಲ್ಲಿ ವಾಹನಗಳು ಅಡ್ಡಾದಿಡ್ಡಿ ನಿಂತಿರುತ್ತವೆ. ಎಲ್ಲೆಂದರಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಕಾರಣ ಸುಗಮ ಸಂಚಾರಕ್ಕೂ ತೊಂದರೆಯಾಗಿದೆ ಎಂದು ದ್ವಿಚಕ್ರ ವಾಹನ ಸವಾರರು ದೂರುತ್ತಾರೆ.
‘ಪಟ್ಟಣದ ಮುಖ್ಯರಸ್ತೆಯ ಪಾದಚಾರಿ ಮಾರ್ಗವನ್ನು 15 ದಿನಗಳೊಳಗೆ ತೆರವುಗೊಳಿಸಲಾಗುವುದು’ ಎಂದು ಒಂದು ತಿಂಗಳ ಹಿಂದೆ ಜಿಲ್ಲಾ ಯೋಜನಾ ನಿರ್ದೇಶಕ ನಾಗರಾಜಶೆಟ್ಟಿ ಭರವಸೆ ನೀಡಿದ್ದರು. ಆದರೆ ಅನುಷ್ಠಾನವಂತೂ ಕನಸಿನ ಮಾತಾಗಿದೆ ಎಂದು ಪುರಸಭೆಯ ಮಾಜಿ ಸದಸ್ಯ ಅಬ್ದುಲ್ ಮಜೀದ್ ಬೇಸರ ವ್ಯಕ್ತಪಡಿಸಿದರು.