ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಯಲ್ಲಿ ಪೆಟ್ಟಿಗೆ ಅಂಗಡಿ ಕಾರುಬಾರು

Last Updated 18 ಡಿಸೆಂಬರ್ 2013, 10:09 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಪಟ್ಟಣದ ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ಮತ್ತೆ ಪೆಟ್ಟಿಗೆ ಅಂಗಡಿಗಳು ತಲೆ ಎತ್ತಿದ್ದು, ಸಂಚಾರ ದಟ್ಟಣೆಯಿಂದ ವಾಹನ ಸವಾರರು ಪರದಾಡುವಂತಾಗಿದೆ.

ಟಿ.ಬಿ.ಕ್ರಾಸ್‌ನಿಂದ ನ್ಯಾಷನಲ್ ಕಾಲೇಜ್‌­ವರೆಗಿನ ಮುಖ್ಯರಸ್ತೆಯ ಬದಿಯಲ್ಲಿ, ಪಾದಚಾರಿ ಮಾರ್ಗದಲ್ಲಿ ತರಕಾರಿ, ಹಣ್ಣು, ಹೂವು, ಬಟ್ಟೆ, ದಿನಸಿ ವಸ್ತುಗಳನ್ನು ತಳ್ಳುವ ಗಾಡಿ­ಗಳಲ್ಲಿ ಇರಿಸಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ.

ಕೆಲ ಸಣ್ಣ ಪೆಟ್ಟಿಗೆ ಅಂಗಡಿಗಳನ್ನೂ ನಿರ್ಮಿಸಿ­ಕೊಂಡಿದ್ದಾರೆ. ವ್ಯಾಪಾರದ ಸಾಮಗ್ರಿ­ಗಳನ್ನು ಮುಖ್ಯ­ರಸ್ತೆಯ ಪಾದ­ಚಾರಿ ಮಾರ್ಗದಲ್ಲಿ ಜೋಡಿಸಿ­ಟ್ಟಿ­ದ್ದಾರೆ. ಇದರಿಂದ ಪಾದಚಾರಿಗಳು ಅಪಘಾತದ ಭೀತಿಯಲ್ಲಿಯೇ ನಡು ರಸ್ತೆಯಲ್ಲಿ ಸಂಚರಿಸಬೇಕಾಗಿದೆ.

‘ಮುಖ್ಯರಸ್ತೆಯಲ್ಲಿ ಪ್ರತಿದಿನ ಪೊಲೀಸ್– ನಗರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಂಚರಿ­ಸುತ್ತಾರೆ. ಆದರೆ ಯಾರೊಬ್ಬರೂ ಟ್ರಾಫಿಕ್ ಸಮಸ್ಯೆ ಪರಿಹರಿಸಲು ಗಮನ ಹರಿಸು­ತ್ತಿಲ್ಲ’ ಎಂದು ಪಟ್ಟಣದ ನಿವಾಸಿ ಗೊರ್ತಪಲ್ಲಿ ಶ್ರೀನಿವಾಸುಲು ಹೇಳಿದರು.

ಪಟ್ಟಣದ ಕೆಎಸ್ಆರ್‌ಟಿಸಿ ಬಸ್‌ ನಿಲ್ದಾಣ­ದಿಂದ ಬಾಲಕಿಯರ ಸರ್ಕಾರಿ ಶಾಲೆಯ ಇಕ್ಕೆಲ­ಗಳಲ್ಲಿ ವಾಹನಗಳು ಅಡ್ಡಾದಿಡ್ಡಿ ನಿಂತಿರುತ್ತವೆ. ಎಲ್ಲೆಂದರಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಕಾರಣ ಸುಗಮ ಸಂಚಾರಕ್ಕೂ ತೊಂದರೆಯಾಗಿದೆ ಎಂದು ದ್ವಿಚಕ್ರ ವಾಹನ ಸವಾರರು ದೂರುತ್ತಾರೆ.

‘ಪಟ್ಟಣದ ಮುಖ್ಯರಸ್ತೆಯ ಪಾದಚಾರಿ ಮಾರ್ಗವನ್ನು 15 ದಿನಗಳೊಳಗೆ ತೆರವುಗೊಳಿಸ­ಲಾಗುವುದು’ ಎಂದು ಒಂದು ತಿಂಗಳ ಹಿಂದೆ ಜಿಲ್ಲಾ ಯೋಜನಾ ನಿರ್ದೇಶಕ ನಾಗರಾಜಶೆಟ್ಟಿ ಭರವಸೆ ನೀಡಿದ್ದರು. ಆದರೆ ಅನುಷ್ಠಾನವಂತೂ ಕನಸಿನ ಮಾತಾಗಿದೆ ಎಂದು ಪುರಸಭೆಯ ಮಾಜಿ ಸದಸ್ಯ ಅಬ್ದುಲ್ ಮಜೀದ್ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT