ಬೆಂಗಳೂರು: ಗುರಪ್ಪನಪಾಳ್ಯದ ನಿವಾಸಿ ನೌಷಾದ್ ಪಾಷಾ (48) ಎಂಬುವರು ಶೇಷಾದ್ರಿಪುರದ ರಿಸಿಲ್ದಾರ್ ರಸ್ತೆಯಲ್ಲಿ ಬುಧವಾರ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.
ಅವರು, ರಿಸಿಲ್ದಾರ್ ರಸ್ತೆಯಲ್ಲಿ ವಾಸವಿರುವ ಶಾಹಿದ್ ಎಂಬ ಸ್ನೇಹಿತನ ಮನೆಗೆ ಬಂದಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ನೌಷಾದ್, ಶಾಹಿದ್ ಅವರ ಮನೆಯ ಕಟ್ಟಡದ ಮೂರನೇ ಮಹಡಿಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಶೇಷಾದ್ರಿಪುರ ಪೊಲೀಸರು ತಿಳಿಸಿದ್ದಾರೆ.
ನೌಷಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಅಥವಾ ಅವರನ್ನು ಕಟ್ಟಡದಿಂದ ಕೆಳಗೆ ತಳ್ಳಿ ಕೊಲೆ ಮಾಡಲಾಗಿದೆಯೇ ಎಂಬುದು ಗೊತ್ತಾಗಿಲ್ಲ. `ಪತಿ ಆತ್ಮಹತ್ಯೆ ಮಾಡಿಕೊಂಡಿಲ್ಲ. ಬದಲಿಗೆ ಅವರನ್ನು ಕೊಲೆ ಮಾಡಲಾಗಿದೆ' ಎಂದು ನೌಷಾದ್ ಅವರ ಪತ್ನಿ ಮುಜ್ಬಿನ್ ತಾಜ್ ದೂರು ಕೊಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಟೈಲರ್ ಆಗಿದ್ದ ನೌಷಾದ್, ಫೈನಾನ್ಸ್ ವ್ಯವಹಾರ ಮಾಡುತ್ತಿದ್ದರು. ಶಾಹಿದ್, ಮಂಗಳವಾರ ಮಧ್ಯಾಹ್ನ ನೌಷಾದ್ ಅವರನ್ನು ಮನೆಗೆ ಕರೆದುಕೊಂಡು ಹೋಗಿದ್ದ. ಘಟನೆ ನಂತರ ಆತ ತಲೆಮರೆಸಿಕೊಂಡಿದ್ದಾನೆ.
ಹೀಗಾಗಿ ಆತನೇ ಕೊಲೆ ಮಾಡಿರಬಹುದು ಎಂಬ ಶಂಕೆ ಮೂಡಿದೆ. ಕೊಲೆ ಪ್ರಕರಣ ದಾಖಲಿಸಿಕೊಂಡು ಆತನ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.