ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಯ್ಲ್ಲಲೇ ಅಡುಗೆ, ಊಟ, ಕ್ರಿಕೆಟ್, ಕಬಡ್ಡಿ...!

Last Updated 7 ಅಕ್ಟೋಬರ್ 2012, 5:00 IST
ಅಕ್ಷರ ಗಾತ್ರ

ದಾವಣಗೆರೆ: ತಮಿಳುನಾಡಿಗೆ ಕಾವೇರಿ ನೀರು ಬಿಡುವುದರ ವಿರುದ್ಧ ಭುಗಿಲೆದ್ದ ಆಕ್ರೋಶ. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಮೊಳಗಿದ ಧಿಕ್ಕಾರ. ಬೈಕ್, ಆಟೋರಿಕ್ಷಾ ರ‌್ಯಾಲಿ. ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ. ರಸ್ತೆಯಲ್ಲಿಯೇ ಕ್ರಿಕೆಟ್; ಕಬಡ್ಡಿ. ವೃತ್ತದಲ್ಲಿಯೇ ಅಡುಗೆ; ಸಹಭೋಜನ. ರಾರಾಜಿಸಿದ ಕನ್ನಡ ಬಾವುಟಗಳು. ಹಳೆಯ ಟೈಯರ್‌ಗಳಿಗೆ ಬೆಂಕಿ. ದೀಡ್ ನಮಸ್ಕಾರ.

- ಸಮರ್ಪಕವಾಗಿ ಮಳೆಯಾಗದಿರುವ ಇಂದಿನ ಸಂಕಷ್ಟದ ದಿನಗಳಲ್ಲಿಯೂ ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುವುದನ್ನು ವಿರೋಧಿಸಿ ಕನ್ನಡ ಒಕ್ಕೂಟ ಕರೆ ನೀಡಿದ್ದ ಬಂದ್ ಹಿನ್ನೆಲೆಯಲ್ಲಿ  ಶನಿವಾರ ನಗರದಲ್ಲಿ ಕಂಡುಬಂದ ದೃಶ್ಯಗಳಿವು.

ನಗರದಲ್ಲಿ ಬೆಳಿಗ್ಗೆಯಿಂದಲೇ ವಿವಿಧ ರೀತಿಯಲ್ಲಿ ಪ್ರತಿಭಟನೆಗಳು ನಡೆದವು. ವ್ಯಾಪಾರಸ್ಥರು, ಸ್ವಯಂಪ್ರೇರಿತರಾಗಿ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿದ್ದರಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಅಘೋಷಿತ `ಕರ್ಪ್ಯೂ ವಾತಾವರಣ~ ಕಂಡುಬಂದಿತು.

ಗಾಂಧಿ ವೃತ್ತ, ಜಯದೇವ ವೃತ್ತ, ಅರುಣ ಚಿತ್ರಮಂದಿರದ ವೃತ್ತ, ಹಗೆದಿಬ್ಬ ವೃತ್ತ ಮೊದಲಾದ ಕಡೆಗಳಲ್ಲಿ ವಿವಿಧ ಸಂಘಟನೆಗಳ ವತಿಯಿಂದ ಹಳೆಯ ಟೈರ್‌ಗಳನ್ನು ಸುಟ್ಟು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.
ಕಚೇರಿಗಳಿಗೆ ಮುತ್ತಿಗೆ, ದೀಡ್ ನಮಸ್ಕಾರ

ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್‌ಶೆಟ್ಟ ಬಣ) ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ. ಯಲ್ಲಪ್ಪ ನೇತೃತ್ವದಲ್ಲಿ `ಅರುಣ~ ಚಿತ್ರಮಂದಿರ ವೃತ್ತದಲ್ಲಿ ಟೈಯರ್ ಸುಟ್ಟು ಪ್ರತಿಭಟಿಸಲಾಯಿತು. ಕೆ.ಬಿ. ಬಡಾವಣೆಯ ಬಿಎಸ್‌ಎನ್‌ಎನ್ ಕಚೇರಿಯಲ್ಲಿ ನೌಕರರು ಕಾರ್ಯ ನಿರ್ವಹಿಸುತ್ತಿದ್ದುದ್ದನ್ನು ವಿರೋಧಿಸಿ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು. ನೌಕರರನ್ನು ಹೊರ ಕಳುಹಿಸಲಾಯಿತು. ನಂತರ, ವೇದಿಕೆ ಕಾರ್ಯಕರ್ತರು ಹೊಂಡದ ವೃತ್ತಕ್ಕೆ ತೆರಳಿ, ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಂಚೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಹೊಂಡದ ವೃತ್ತದಿಂದ ದುರ್ಗಾಂಬಿಕಾ ದೇವಸ್ಥಾನದವರೆಗೆ ಅರೆಬೆತ್ತಲಾಗಿ `ದೀಡ್ ನಮಸ್ಕಾರ~ ಹಾಕುವ ಮೂಲಕ ಕರವೇ ಕಾರ್ಯಕರ್ತರು ವಿನೂತನ ರೀತಿಯಲ್ಲಿ ಪ್ರತಿಭಟನೆ ದಾಖಲಿಸಿದರು.ಕರವೇ ಮುಖಂಡರಾದ ಕೆ.ಜಿ. ಯಲ್ಲಪ್ಪ, ಕೆ.ಜಿ. ಶ್ರೀನಿವಾಸ್, ಪ್ರಭಾವ್ ಎಸ್. ಕಾಮತ್, ಎ.ಪಿ. ಹೇಮಂತ, ಅಮ್ಜದ್‌ಖಾನ್, ಮೆಹಬೂಬ್, ಗಂಗಾಧರ್, ರುದ್ರೇಶ್, ಆರೀಫ್, ಕಲೀಲ್, ಮಾರುತಿ ಪಾಲ್ಗೊಂಡಿದ್ದರು.

ಬೈಕ್, ಆಟೋ ರಿಕ್ಷಾ ರ‌್ಯಾಲಿ

ಕನ್ನಡ ಸೇನೆ ವತಿಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ‌್ಯಾಲಿ ನಡೆಯಿತು. ಮೆರವಣಿಗೆಯಲ್ಲಿ ಪಾಲ್ಗೊಂಡ ಜನಪದ ಗಾಯಕ ಜಿ. ಮಹಾಂತೇಶ್, ಹಾಡಿನ ಮೂಲಕ ಪ್ರತಿಭಟನಾಕಾರರನ್ನು  ಹುರಿದುಂಬಿಸಿದರು. ಸೇನೆ ವತಿಯಿಂದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಮುದ್ರಣ ಕೆಲಸಗಾರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು, ಮೆರವಣಿಗೆಯಲ್ಲಿ ಆಗಮಿಸಿ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ರಸ್ತೆಯಲ್ಲಿ ಕುಳಿತು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಬಲ್ಲೂರು ರವಿಕುಮಾರ್ ನೇತೃತ್ವದಲ್ಲಿ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಡಾ.ರಾಜ್ ಅಭಿಮಾನಿಗಳ ಸಂಘದ ವತಿಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ‌್ಯಾಲಿ ನಡೆಯಿತು. ನಗರಪಾಲಿಕೆ ಸದಸ್ಯ ಕೆ.ಜಿ. ಶಿವಕುಮಾರ್, ನಾಗೇಂದ್ರ ಬಂಡೀಕರ್ ಮೊದಲಾದವರು ರ‌್ಯಾಲಿಯ ನೇತೃತ್ವ ವಹಿಸಿದ್ದರು.

ಗಮನಸೆಳೆದ ವೇಷಧಾರಿ...
ಜೆಡಿಎಸ್ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಬಿ.ಎಂ. ಸತೀಶ್ ಅವರ ನೇತೃತ್ವದಲ್ಲಿ ಕಾರ್ಯಕರ್ತರು ಬೈಕ್ ರ‌್ಯಾಲಿ ನಡೆಸಿ, ನಂತರ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.ಕನ್ನಡಪರ ಸಂಘಟನೆಯೊಂದು ನಡೆಸಿದ ಬೈಕ್ ರ‌್ಯಾಲಿಯಲ್ಲಿ, ವ್ಯಕ್ತಿಯೊಬ್ಬ ಕಾವೇರಿ ಮಾತೆಯ ವೇಷಧಾರಿಯಾಗಿ ಕಾಣಿಸಿಕೊಂಡಿದ್ದು ಗಮನಸೆಳೆಯಿತು.

ಸಿಐಟಿಯು (ಎಆರ್‌ಡಿಯು) ಆಟೋರಿಕ್ಷಾ ಘಟಕದ ವತಿಯಿಂದ ಆಟೋರಿಕ್ಷಾ ರ‌್ಯಾಲಿ ನಡೆಸಲಾಯಿತು. ಆಟೋರಿಕ್ಷಾ ಮೇಲೆ ಖಾಲಿ ಕೊಡಗಳನ್ನು ಕಟ್ಟಿಕೊಂಡು ಮೆರವಣಿಗೆ ನಡೆಸಿದ್ದು, ಕೆಲ ಸಂಘಟನೆಗಳವರು, ಬಲೂನಿನಲ್ಲಿ `ಕಾವೇರಿ ಉಳಿಸಿ~ ಎಂದು ಹಾರಿಬಿಡುತ್ತಿದ್ದುದು ವಿಶೇಷವಾಗಿತ್ತು. ಹೀಗೆ ರ‌್ಯಾಲಿ ವೇಳೆ, ಕದ್ದುಮುಚ್ಚಿ ತೆರೆದಿದ್ದ ಅಂಗಡಿಗಳನ್ನು ಮುಚ್ಚಿಸುತ್ತಿದ್ದುದು ಕಂಡುಬಂದಿತು.ರೈತ ಸಂಘದ ಹುಚ್ಚವ್ವನಹಳ್ಳಿ ಮಂಜುನಾಥ್ ನೇತೃತ್ವದಲ್ಲಿ ಜಯದೇವ ವೃತ್ತದಲ್ಲಿ ಬೈಕ್‌ಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸಲಾಯಿತು.

ಬಹಿರಂಗ ಸಭೆ
ಕನ್ನಡ ಚಳವಳಿ ಕೇಂದ್ರ ಸಮಿತಿ ಜಿಲ್ಲಾ ಘಟಕ, ಡಾ.ರಾಜ್ ಅಭಿಮಾನಿಗಳ ಬಳಗದ ವತಿಯಿಂದ ಜಯದೇವ ವೃತ್ತದಲ್ಲಿ ಬಹಿರಂಗ ಸಭೆ ನಡೆಯಿತು. ಕಾವೇರಿ ನದಿಯಿಂದ ತಮಿಳುನಾಡಿಗೆ ನಿತ್ಯ 9 ಸಾವಿರ ಕ್ಯೂಸೆಕ್ ನೀರು ಬಿಡಬೇಕು ಎಂಬ ನದಿ ನೀರು ಪ್ರಾಧಿಕಾರದ ಆದೇಶದ ವಿರುದ್ಧ ಆಕ್ರೋಶ ವ್ಯಕ್ತವಾಯಿತು.

ಪಾಲಿಕೆ ಸದಸ್ಯ ಕೆ.ಜಿ. ಶಿವಕುಮಾರ್, ನಾಗೇಂದ್ರ ಬಂಡೀಕರ್, ಹುಚ್ಚವ್ವನಹಳ್ಳಿ ಮಂಜುನಾಥ್, ಸೈಯದ್ ಸೈಫುಲ್ಲಾ, ಕರವೇ ಜಿಲ್ಲಾ ಘಟಕದ ಅಧ್ಯಕ್ಷ ರಾಮೇಗೌಡ, ತ್ಯಾವಣಿಗೆ ಜಯದೇವಪ್ಪ, ಬಲ್ಲೂರು ರವಿಕುಮಾರ್ ಪಾಲ್ಗೊಂಡಿದ್ದರು.

ಇದೇ ಸಂದರ್ಭ, ವೃತ್ತದಲ್ಲಿ ಮುಖಂಡರು ಕೆಲ ಕಾಲ ಕಬಡ್ಡಿ ಆಡುವ ಮೂಲಕ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.ಫೋಟೋಗ್ರಾಫರ್ಸ್‌ ಯೂತ್ಸ್ ವೆಲ್‌ಫೇರ್ ಅಸೋಸಿಯೇಷನ್ ವತಿಯಿಂದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಕೆಲ ಕಾಲ ಕ್ರಿಕೆಟ್ ಆಡಲಾಯಿತು. ಗಾಂಧಿ ವೃತ್ತದವರೆಗೆ ಮೆರವಣಿಗೆ ನಡೆಸಲಾಯಿತು.

ಕನ್ನಡ ಸಮರ ಸೇನೆ ವತಿಯಿಂದ ಸರ್ಕಾರದ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಲಾಯಿತು. ಅತ್ತಿಗೆರೆ ಮಂಜುನಾಥ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ರಸ್ತೆಯಲ್ಲಿಯೇ ಅಡುಗೆ, ಭೋಜನ!

ಪಿ.ಬಿ. ರಸ್ತೆಯ ಗೋಶಾಲೆ ಬಳಿ, ರಸ್ತೆಯಲ್ಲಿ ಟೈರ್‌ಗಳನ್ನು ಸುಟ್ಟು ಸ್ಥಳೀಯರು `ಕರ್ನಾಟಕ ಬಂದ್~ ಬೆಂಬಲಿಸಿದರು.
ಕರ್ನಾಟಕ ಜನಶಕ್ತಿ ವೇದಿಕೆ ವತಿಯಿಂದ ಅಂಬೇಡ್ಕರ್ ವೃತ್ತದಿಂದ ಜಯದೇವ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. `ಕಾವೇರಿ ಉಳಿಸಿ~ ಎಂದು ಬರೆದಿದ್ದ ಬಲೂನುಗಳನ್ನು ಹಿಡಿದು, ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡರು.

ನಗರದ ಶಿವಪ್ಪ ವೃತ್ತದಲ್ಲಿ ಸ್ಥಳೀಯರು, ಆಟೋರಿಕ್ಷಾ ಚಾಲಕರು ಹಾಗೂ ಕನ್ನಡಪರ ಹೋರಾಟಗಾರರು ರಸ್ತೆಯಲ್ಲಿಯೇ ಅಡುಗೆ ಮಾಡಿ (ಅನ್ನ ಸಾಂಬಾರ್) ಊಟ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಅಖಿಲ ಕರ್ನಾಟಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅಭಿಮಾನಿಗಳ ಯುವಸೇನೆ (ಎಚ್.ಎಸ್. ದೊಡ್ಡೇಶ್ ಬಣ)ಯ ವತಿಯಿಂದ ನಗರಪಾಲಿಕೆಯ ಮಹಾತ್ಮಗಾಂಧಿ ಪ್ರತಿಮೆ ಎದುರು ಉಪವಾಸ ಸತ್ಯಾಗ್ರಹ ನಡೆಸಲಾಯಿತು.

ಮೂರರ ನಂತರ `ಬಂದ್~ಗೆ ಬ್ರೇಕ್!

 ಮಧ್ಯಾಹ್ನ 3ರ ನಂತರ ವಿವಿಧೆಡೆ ನಿಧಾನವಾಗಿ ಒಂದೊಂದೇ ಅಂಗಡಿಗಳು ತೆರೆದು ವ್ಯಾಪಾರ ನಡೆಸಿದವು. ಆಟೋರಿಕ್ಷಾಗಳು ಮಧ್ಯಾಹ್ನದ ನಂತರ ಎಂದಿನಂತೆ ಸಂಚರಿಸಿದವು.ನಗರದ ಚಿಗಟೇರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಎಂದಿನಂತೆ ಹೆಚ್ಚಿನ ರೋಗಿಗಳು ಅಷ್ಟಾಗಿ ಕಂಡುಬರಲಿಲ್ಲ. ನಗರದ ರೈಲು ನಿಲ್ದಾಣದಲ್ಲಿ ಸೇವೆ ಎಂದಿನಂತೆ ಇತ್ತು. ಕೆಎಸ್‌ಆರ್‌ಟಿ ಬಸ್‌ನಿಲ್ದಾಣದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಲಾಗಿತ್ತು. ಸಂಜೆ ನಂತರ ಕೆಲವೆಡೆ ಸಣ್ಣ-ಪುಟ್ಟ ಹೋಟೆಲ್‌ಗಳು, ಚಹಾದಂಗಡಿಗಳು ತೆರೆದು ಗ್ರಾಹಕರಿಗೆ ಸೇವೆ ನೀಡಿದವು.  

  ಹರಿಹರ
ತಾಲ್ಲೂಕು ರೈತ ಸಂಘ ಮತ್ತು ಹಸಿರು ಸೇನೆ, ಆಂಜನೇಯ ಸಣ್ಣ ವರ್ತಕರ ಸಂಘ, ಕರುನಾಡ ರಕ್ಷಣಾ ವೇದಿಕೆ, ತಾಲ್ಲೂಕು ವಕೀಲರ ಸಂಘ, ಕಾವೇರಿ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆ, ಜಯ ಕರ್ನಾಟಕ ತಾಲ್ಲೂಕು ಘಟಕ ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳು ಬಂದ್ ಹಾಗೂ ಪ್ರತಿಭಟನೆಯ ನೇತೃತ್ವ ವಹಿಸಿದ್ದವು.

ಮಹಾತ್ಮ ಗಾಂಧಿ ಹಾಗೂ ರಾಣಿ ಚೆನ್ನಮ್ಮ ವೃತ್ತದಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.  ತಹಶೀಲ್ದಾರ್ ಜಿ. ನಜ್ಮಾ, ಮಹಾತ್ಮ ಗಾಂಧಿ ವೃತ್ತಕ್ಕೆ ಆಗಮಿಸಿ ಪ್ರತಿಭಟನಾಕಾರರಿಂದ ಮನವಿ ಪಡೆದುಕೊಂಡರು.

ರೈತ ಮುಖಂಡರಾದ ಓಂಕಾರಪ್ಪ, ಶಂಭುಲಿಂಗಪ್ಪ, ಶಾವಿಗೆ ಬಸಣ್ಣ, ದೊಗ್ಗಳ್ಳಿ ಸಿದ್ದಣ್ಣ, ಗುತ್ತೂರು ಬಸಣ್ಣ, ಬೇವಿನಹಳ್ಳಿ ಮಹೇಶ್, ಪಿ. ಗೋಪಾಲ್, ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರಾದ ಪುಟ್ಟ, ವೆಂಕಟೇಶ್, ರುದ್ರೇಶ್, ನಾಗರಾಜ, ರಮೇಶ ಮಾನೆ ಭಾಗವಹಿಸಿದ್ದರು.

ಹರಪನಹಳ್ಳಿ

`ಕರ್ನಾಟಕ ಬಂದ್~ ಪ್ರತಿಭಟನೆಗೆ ಪಟ್ಟಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಕೀಲರ ಸಂಘದ ಪದಾಧಿಕಾರಿಗಳು  ನ್ಯಾಯಾಲಯದ ಕಲಾಪಗಳಿಂದ ದೂರ ಉಳಿದರು.ಪಟ್ಟಣದ ವಾರದ ಸಂತೆಗೆ ಬಂದ್ ಬಿಸಿ ತಾಗಲಿಲ್ಲವಾದರೂ, ಬಂದ್ ಹಿನ್ನೆಲೆಯಲ್ಲಿ ಸಂತೆಯೂ ಸ್ಥಗಿತವಾಗಿರಬಹುದು ಎಂದು ಕೆಲವರು ಸಂತೆಗೆ ಬಂದಿರಲಿಲ್ಲ.
 
ಪಂಚಾಯ್ತಿರಾಜ್ ಎಂಜಿನಿಯರಿಂಗ್ ಉಪವಿಭಾಗೀಯ ಕಚೇರಿ ಹೊರತುಪಡಿಸಿದರೆ, ಬಹುತೇಕ ಸರ್ಕಾರಿ ಕಚೇರಿಗಳು ಎಂದಿನಂತೆ ದೈನಂದಿನ ವ್ಯವಹಾರ ನಡೆಸಿದವು. ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ಬಣಗಾರಪೇಟೆಯ ವಾಣಿಜ್ಯ ವಹಿವಾಟು ಬಿಕೋ ಎನ್ನುತ್ತಿತ್ತು.

ವಕೀಲರ ಸಂಘದ ಅಧ್ಯಕ್ಷ ಪಿ. ಜಗದೀಶಗೌಡ ಅಧ್ಯಕ್ಷತೆಯಲ್ಲಿ, ಪದಾಧಿಕಾರಿಗಳು ತುರ್ತುಸಭೆ ನಡೆಸಿದರು. ಉಪವಿಭಾಗಾಧಿಕಾರಿ ಇಬ್ರಾಹಿಂ ಮೈಗೂರು ಅವರಿಗೆ ಮನವಿ ಸಲ್ಲಿಸಿದರು.ಹಿರಿಯ ವಕೀಲರಾದ ಗಂಗಾಧರ ಗುರುಮಠ್, ಎಸ್.ಎಂ. ರುದ್ರಮುನಿಸ್ವಾಮಿ, ಇದ್ಲಿ ರಾಮಪ್ಪ, ಕೆ. ಬಸವರಾಜ, ಸಂಘದ ಕಾರ್ಯದರ್ಶಿ ಟಿ. ವೆಂಕಟೇಶ್, ಗೋಣಿಬಸಪ್ಪ, ಮಂಜುನಾಥ, ಹೂಲೆಪ್ಪ, ಮೃತ್ಯುಂಜಯ, ಕಿರಣ್, ಆನಂದ್, ಗುಡಿ ಬಿಂದುಮಾಧವ, ಮಂಜನಾಯ್ಕ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬಿಎಸ್‌ಆರ್ ಕಾಂಗ್ರೆಸ್ ಪಕ್ಷ:  ಬಿಎಸ್‌ಆರ್ ಪಕ್ಷದ ಕಾರ್ಯಕರ್ತರು ಬಸ್‌ನಿಲ್ದಾಣ ಸಮೀಪದ ಇಜಾರಿ ಸಿರಸಪ್ಪ ವೃತ್ತದಲ್ಲಿ ಟೈರ್‌ಗೆ ಬೆಂಕಿಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಮುಖಂಡರಾದ ಎಚ್.ಟಿ. ಗಿರೀಶಪ್ಪ, ಕಡಕೋಳ ನೂರುದ್ದೀನ್, ಸೋಗಿ ಇಬ್ರಾಹಿಂ, ಅಜ್ಜನಗೌಡ, ವೆಂಕಟೇಶ, ಕರಡಿದುರ್ಗ ಚೌಡಪ್ಪ, ಶಶಿಭೂಷಣ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರಾದ ಬಸವರಾಜ, ಅಂಜಿನಪ್ಪ, ಮೂಗಪ್ಪ, ಆಲೂರು ಶ್ರೀನಿವಾಸ, ಹನುಮಂತಪ್ಪ, ಉಚ್ಚಂಗೆಪ್ಪ, ಮೈಲಪ್ಪ, ಅಶೋಕ, ಪ್ರಕಾಶ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಚನ್ನಗಿರಿ
ಕನ್ನಡಪರ ಸಂಘಟನೆಗಳು ಪಾಂಡೋಮಟ್ಟಿ ಗುರುಬಸವ ಸ್ವಾಮೀಜಿ ನೇತೃತ್ವದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು. ಹೋರಾಟಕ್ಕೆ ಎಲ್ಲಾ ಸಂಸತ್ ಸದಸ್ಯರು, ಶಾಸಕರು ಬೆಂಬಲ ನೀಡಬೇಕು ಎಂದು ಪಾಂಡೋಮಟ್ಟಿ ವಿರಕ್ತಮಠದ ಗುರುಬಸವ ಸ್ವಾಮೀಜಿ ಒತ್ತಾಯಿಸಿದರು.

ಚನ್ನಗಿರಿ ವಿರಕ್ತಮಠದ ಜಯದೇವ ಸ್ವಾಮೀಜಿ, ರೈತ ಸಂಘದ ಅಧ್ಯಕ್ಷ ತಿಪ್ಪೇಶಪ್ಪ, ಪ್ರಹ್ಲಾದ್, ಸಿದ್ದಪ್ಪ, ಚಂದ್ರಪ್ಪ ಸರ್ದಾರ್ ಸಾಬ್, ಕರುನಾಡ ಕನ್ನಡ ಸೇನೆ, ಟಿಪ್ಪು ಸುಲ್ತಾನ್ ಸಂಘ, ಏಕ್ರಾನ್ ಚಾರಿಟಬಲ್ ಟ್ರಸ್ಟ್ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ನ್ಯಾಮತಿ
ಸಮೀಪದ ಚೀಲೂರು ಗ್ರಾಮದಲ್ಲಿ ಶನಿವಾರ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ) ಪದಾಧಿಕಾರಿಗಳು ಕರ್ನಾಟಕ ಬಂದ್ ಬೆಂಬಲಿಸಿ ರಸ್ತೆತಡೆ ನಡೆಸಿದರು.

 ಪ್ರತಿಭಟನೆಯಲ್ಲಿ  ವೇದಿಕೆ ಅಧ್ಯಕ್ಷ ಇ. ಲೋಕೇಶ, ಎಂ. ರಾಜು, ಆರ್. ಬಾಬು, ಟಿ. ಫಾಲಾಕ್ಷ, ರಿಜ್ಞಾನ್‌ಭಾಷಾ, ಎ.ಕೆ. ಸೋಮು, ರಘು, ರುದ್ರೇಶ, ಅಕ್ಬರ್‌ಭಾಷಾ, ಎಜಾಜು, ಆಟೋಸ್ವಾಮಿ,  ಕರ್ನಾಟಕ ರಾಜ್ಯ ಮಹಿಳಾ ಸಂಘಟನೆಗಳ ಮುಖಂಡ ಪುರುವಂತರ ಪರಮೇಶ್ವರಪ್ಪ ಪಾಲ್ಗೊಂಡಿದ್ದರು.

 ನ್ಯಾಮತಿ ಗ್ರಾಮದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಗ್ರಾಮದ ಅಂಗಡಿ-ಮುಂಗಟ್ಟುಗಳು, ಹೋಟೆಲ್‌ಗಳು ಎಂದಿನಂತೆ ದೈನಂದಿನ ವ್ಯಾಪಾರ ನಡೆಸಿದರು

ಬಸವಾಪಟ್ಟಣ

ಕಾವೇರಿ ನದಿ ನೀರನ್ನು ತಮಿಳು ನಾಡಿಗೆ ಹರಿಸಿರುವುದರ ವಿರುದ್ಧ ಶನಿವಾರ ರಾಜ್ಯಾದ್ಯಾಂತ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿ ಇಲ್ಲಿನ ಕನ್ನಡಪರ ಸಂಘಟನೆಗಳ ಸದಸ್ಯರು ತಮಿಳು ನಾಡಿನ ವಿರುದ್ಧ ಘೋಷಣೆ ಮಾಡಿ ಪ್ರತಿಭಟನೆ ನಡೆಸಿದರು.

ಕನ್ನಡ ಜಾಗೃತಿ ವೇದಿಕೆ ಅಧ್ಯಕ್ಷ ಎಜಾಜ್ ಅಹಮದ್, ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಎಲ್.ಜಿ. ಮಧುಕುಮಾರ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಹೊನ್ನಾಳಿ
ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಎಂ.ಆರ್. ಮಹೇಶ್ ನೇತೃತ್ವದಲ್ಲಿ  ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಜೆಡಿಎಸ್ ಯುವ ಘಟಕದ ಅಧ್ಯಕ್ಷ ಬಿ.ಎಸ್. ಆನಂದ್, ಮುಖಂಡರಾದ ಬಿಸಾಟಿ ಸುರೇಶ್, ವನಜಾಕ್ಷಮ್ಮ ರುದ್ರಪ್ಪ, ತುಮ್ಮಿನಕಟ್ಟಿ ನಾಗರಾಜ್, ಕುಬೇರನಾಯ್ಕ ಇದ್ದರು.

ಜಯ ಕರ್ನಾಟಕ ಸಂಘಟನೆ ತಾಲ್ಲೂಕು ಘಟಕ ಮತ್ತು ತಾಲ್ಲೂಕು ಯುವಶಕ್ತಿ ಒಕ್ಕೂಟದ ಸದಸ್ಯರು ಪ್ರತಿಭಟನೆ ನಡೆಸಿದರು.  ತಾಲ್ಲೂಕು ರೈತ ಸಂಘದ ಅಧ್ಯಕ್ಷ ದೊಡ್ಡೆರೇಹಳ್ಳಿ ಎಚ್. ನಾಗರಾಜಪ್ಪ, ಆರುಂಡಿ ನಾಗರಾಜ್, ನ್ಯಾಮತಿ ಮಲ್ಲಿಕಾರ್ಜುನ್, ಸಹದೇವಪ್ಪರೆಡ್ಡಿ, ಪಟೇಲ್ ಬಸವರಾಜಪ್ಪಗೌಡ, ಬಂಜಾರ ರಕ್ಷಣಾ ವೇದಿಕೆ ಅಧ್ಯಕ್ಷ ಅಂಜುನಾಯ್ಕ, ಕಾರ್ಯದರ್ಶಿ ಅನಂತ ನಾಯ್ಕ ಇದ್ದರು. 

 ಮಲೇಬೆನ್ನೂರು
`ಕರ್ನಾಟಕ ಬಂದ್‌ಗೆ~ ಇಲ್ಲಿನ ಜನತೆ ಹಾಗೂ ಸಂಘಟನೆಗಳಿಂದ ನೀರಸ ಪ್ರತಿಕ್ರಿಯೆ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸರ್ಕಾರಿ ಕಚೇರಿ, ಬ್ಯಾಂಕ್, ಅಂಚೆ ಕಚೇರಿ, ಅಂಗಡಿ, ಹೋಟೆಲ್ ಎಂದಿನಂತೆ  ಕಾರ್ಯ ನಿರ್ವಹಿಸಿದವು. ಶಾಲೆ ಕಾಲೇಜುಗಳು ತೆರೆದಿರಲಿಲ್ಲ.

ಜಗಳೂರು: ಬಂದ್ ಸಂಪೂರ್ಣ ಯಶಸ್ವಿ
ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ ಮಾಡುತ್ತಿರುವುದನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳು ಶನಿವಾರ ನೀಡಿದ್ದ ಬಂದ್ ಕರೆ ಪಟ್ಟಣದಲ್ಲಿ ಸಂಪೂರ್ಣ ಯಶಸ್ವಿಯಾಯಿತು. ಅಂಗಡಿ ಮುಂಗಟ್ಟುಗಳು, ಶಾಲಾ ಕಾಲೇಜುಗಳು ಮುಚ್ಚಿದ್ದವು. ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ಬ್ಯಾಂಕ್, ಸರ್ಕಾರಿ ಕಚೇರಿಗಳು ಕಾರ್ಯ ನಿರ್ವಹಿಸಲಿಲ್ಲ. ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಗ್ರಾಮಸ್ಥರು ಬಸ್ ಸೌಲಭ್ಯ ಇಲ್ಲದೆ ಪರದಾಡಬೇಕಾಯಿತು. 

 ತಾಲ್ಲೂಕು ವಕೀಲರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಅಖಿಲ ಭಾರತ ವಿದ್ಯಾರ್ಥಿ ಫೆಡೇರಷನ್ ಸೇರಿದಂತೆ ವಿವಿಧ ಸಂಘಟನೆಗಳ ಕಾಯಕರ್ತರು ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
 
ಎಐಎಸ್‌ಎಫ್ ಕಾರ್ಯಕರ್ತರು ತಮಿಳುನಾಡಿಗೆ ನೀರು ಬಿಟ್ಟಿರುವುದನ್ನು ವಿರೋಧಿಸಿ ಪಟ್ಟಣದಲ್ಲಿ ಕ್ಯಾಂಡಲ್ ಮೆರವಣಿಗೆ ನಡೆಸಿದರು.ಎಐಎಸ್‌ಎಫ್ ಸಂಘಟನೆಯ ದೊಣೆಹಳ್ಳಿ ಗುರುಮೂರ್ತಿ, ಎಲ್.ಪಿ. ಸುಭಾಷ್ ಚಂದ್ರಬೋಸ್ ವಕೀಲರ ಸಂಘದ ಅಧ್ಯಕ್ಷ ಎಸ್. ಹಾಲಪ್ಪ, ಕಾರ್ಯದರ್ಶಿ ಎಸ್. ರುದ್ರಮುನಿ, ಕರವೇ ಸಂಘದ ಜಿ.ಎಚ್. ಶಂಭುಲಿಂಗಪ್ಪ, ಸುನೀಲ್,ಡಿ.ಟಿ. ಆದಂ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT