ಹಿರೇಕೆರೂರ: ರಾಜ್ಯ ಹೆದ್ದಾರಿ ತಾಲ್ಲೂಕಿನ ಲಿಂಗಾಪುರ- ಹಂಸಭಾವಿ- ಚಿಕ್ಕೇರೂರ ರಸ್ತೆ ದುರಸ್ತಿ ಮಾಡುವಂತೆ ಒತ್ತಾಯಿಸಿ ಹಂಸಭಾವಿ ಮತ್ತು ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಸೋಮವಾರ ಗ್ರಾಮದ ಬೆಂಗಳೂರು ವೃತ್ತದಲ್ಲಿ ರಸ್ತೆತಡೆ ನಡೆಸಿದರು.
ಕಳೆದ ತಿಂಗಳು ಇದೇ ರಸ್ತೆ ದುರಸ್ತಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ನೀಡಿದ ಭರವಸೆಯನ್ನು ಅಧಿಕಾರಿಗಳು ಈಡೇರಿಸಿಲ್ಲ ಆದ್ದರಿಂದ ದುರಸ್ತಿ ಕಾಮಗಾರಿ ಆರಂಭಿಸಲು ಖಚಿತವಾದ ಭರವಸೆ ನೀಡಿದ ನಂತರವೇ ಪ್ರತಿಭಟನೆಯನ್ನು ಕೈ ಬಿಡಲಾಗುವುದು ಎಂದ ಪ್ರತಿಭಟನಾಕಾರರು, ರಸ್ತೆಯ ಮಧ್ಯದಲ್ಲಿಯೇ ಅಡುಗೆ ಮಾಡಿಕೊಂಡು ಊಟ ಮಾಡಿದರು.
`ಲಿಂಗಾಪುರ- ಹಂಸಭಾವಿ- ಚಿಕ್ಕೇರೂರ ರಸ್ತೆಯು ಕಳೆದ 30 ವರ್ಷಗಳಿಂದ ಮರು ಡಾಂಬರೀಕರಣವಾಗಿಲ್ಲ, ಈ ರಸ್ತೆ ಸಂಪೂರ್ಣ ಹಾಳಾಗಿರುವುದರಿಂದ ಓಡಾಡಲು ಬಾರ ದಂತಾಗಿದೆ. ರಸ್ತೆಯ ಮಧ್ಯದಲ್ಲಿ ಆಳವಾದ ತಗ್ಗು ಗುಂಡಿಗಳಿರುವುದರಿಂದ ಜನತೆ, ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ. ಸಬಂಧಪಟ್ಟವರು ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ~ ಎಂದು ರಸ್ತೆ ಸುಧಾರಣಾ ಹೋರಾಟ ಸಮಿತಿಯ ಅಧ್ಯಕ್ಷ ಎಂ.ಎಸ್. ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.
`ರಸ್ತೆಯ ಎರಡೂ ಬದಿಯ ಕಾಲುವೆಗಳು ಮಾಯವಾಗಿವೆ. ಮಳೆ ನೀರು ರಸ್ತೆಯಲ್ಲಿಯೇ ನಿಲ್ಲುತ್ತಿರುವುದರಿಂದ ರಸ್ತೆ ಮತ್ತಷ್ಟು ಹಾಳಾಗುತ್ತಿದೆ. ನಿತ್ಯ ಸಾವಿರಾರು ವಿದ್ಯಾರ್ಥಿಗಳು, ನೂರಾರು ವೃದ್ಧರು, ರೋಗಿಗಳು ಗ್ರಾಮಕ್ಕೆ ಬರುತ್ತಿದ್ದು ರಸ್ತೆಯ ಕಾರಣದಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆ ದುರಸ್ತಿಯ ಬಗ್ಗೆ ಅನೇಕ ಬಾರಿ ಮನವಿ ಮಾಡಿಕೊಂಡರೂ ಸಂಬಂಧಪಟ್ಟವರು ಸ್ಪಂದಿಸಿಲ್ಲ, ರಾಜ್ಯ ಸರ್ಕಾರ ತಾಲ್ಲೂಕಿನ ಅಭಿವೃದ್ಧಿಯ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ~ ಎಂದು ರಮೇಶ ಮಡಿವಾಳರ ದೂರಿದರು.ಮುಖಂಡರಾದ ಶಿವಯೋಗಿ ಬಸಪ್ಪನವರ, ಉಳಿವೆಪ್ಪ ಹುಚಗೊಂಡರ, ಬಸವರಾಜ ಚಕ್ರಸಾಲಿ, ಮಂಜುನಾಥ ಮುರಡಕ್ಕನವರ ಮೊದಲಾದವರು ಮಾತನಾಡಿ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ರಸ್ತೆಯನ್ನು ಅಭಿವೃದ್ಧಿ ಮಾಡುವ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಪಂ ಮಾಜಿ ಅಧ್ಯಕ್ಷರಾದ ಬಸವರಾಜ ಎಲ್ಲಕ್ಕನವರ, ಗ್ರಾಪಂ ಉಪಾಧ್ಯಕ್ಷ ಶಮ್ಮೀರ್ ಪ್ಯಾಟಿ, ಗ್ರಾಪಂ ಸದಸ್ಯರಾದ ರಾಜು ಹುಚಗೊಂಡರ, ಭರಮಪ್ಪ ವಾಲ್ಮೀಕಿ, ಶಿವಯೋಗಿ ಹುಚಗೊಂಡರ, ಶಾಂತಪ್ಪ ಈಳಿಗೇರ, ಮುರಿಗೆಪ್ಪ ಭರಮಣ್ಣನವರ, ಸಂದೀಪ ಬಾಸೂರ, ಮುತ್ತಪ್ಪ ಬಾಸೂರ, ಸಿದ್ದು ಕೋಟೇನಹಳ್ಳಿ, ರಾಜು ಪುರದ, ಹಜರತ್ಅಲಿ ಮುಲ್ಲಾ, ರವಿ ಪಾಟೀಲ, ಖಲೀಲ್ ಕೊತ್ವಾಲ, ಮಂಜುನಾಥ ಹುಚಗೊಂಡರ, ಹಜರತ್ಅಲಿ ಮತ್ತೂರ, ಅಮೀರ್ಹಂಜಾ ಪ್ಯಾಟಿ, ಶಿವಯೋಗಿ ಬೆಲ್ಲದ, ಪ್ರಕಾಶ ಬಣಕಾರ, ಸುರೇಂದ್ರ ಬಣಕಾರ, ಎಂ.ಆರ್.ದೀವಿಗಿಹಳ್ಳಿ, ಗಿರೀಶ ಪಾಟೀಲ, ಲೋಕಪ್ಪ ಹಂಸಭಾವಿ, ಉಜ್ಜಪ್ಪ ಕೊಪ್ಪದ, ಅಬ್ಬು ಕರ್ಜಗಿ, ಗೌಸ್ ಹಂಜಿ, ಅಶೋಕ ಪೂಜಾರ, ಸಿ.ಎಂ.ಬತ್ತಿಕೊಪ್ಪ, ಶಿವಯೋಗೆಪ್ಪ ಸಣ್ಣರಾಗಿಕೊಪ್ಪ, ಎಂ.ಟಿ.ಬತ್ತಿಕೊಪ್ಪ, ಪರಸಪ್ಪ ಎಲದಳ್ಳಿ ಸೇರಿದಂತೆ ಹಂಸಭಾವಿ, ಲಿಂಗಾಪುರ, ಯೋಗಿಕೊಪ್ಪ, ಮತ್ತೀಹಳ್ಳಿ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.