ಗದಗ: ಎಲ್ಪಿಜಿ ಸಿಲಿಂಡರ್ ಮಿತಿಗೊಳಿಸಿರುವುದನ್ನು ಖಂಡಿಸಿ ಗದಗ-ಬೆಟಗೇರಿ ಅವಳಿ ನಗರದ ರಕ್ಷಾ ಸ್ತ್ರೀ ಶಕ್ತಿ ಸಂಘದ ಸದಸ್ಯರು ಮಹಿಳೆಯರು ಗುರುವಾರ ರಸ್ತೆಯಲ್ಲಿ ಅಡುಗೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.
ನಗರದ ಗಾಂಧಿ ವೃತ್ತದಲ್ಲಿ ಸೇರಿದ ಮಹಿಳೆಯರು ಕೇಂದ್ರದ ಯುಪಿಎ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ರಸ್ತೆ ಮಧ್ಯೆದಲ್ಲಿ ಕಟ್ಟಿಗೆ ಇಟ್ಟು ಅಡುಗೆ ಮಾಡಿದರು.
ಎಲ್ಪಿಜಿ ಸಿಲಿಂಡರ್ ಅನ್ನು ವರ್ಷದಲ್ಲಿ 6ಕ್ಕೆ ಕಡಿತಗೊಳಿಸಿದ್ದರಿಂದ ಸಾಕಷ್ಟು ತೊಂದರೆಯಾಗಲಿದೆ. ತಿಂಗಳಿಗೆ ಕನಿಷ್ಠ ಒಂದು ಸಿಲಿಂಡರ್ ನೀಡಬೇಕು. ಮನೆಯಲ್ಲಿ 5-6 ಮಂದಿ ಇರುತ್ತಾರೆ. ಕೇವಲ ಒಂದು ಸಿಲಿಂಡರ್ನಿಂದ ಎರಡು ತಿಂಗಳು ಅಡುಗೆ ಮಾಡಲು ಆಗುವುದಿಲ್ಲ. ಈ ನಡುವೆ ಹಬ್ಬ ಹಾಗೂ ಇತರೆ ಕಾರ್ಯಗಳು ನಡೆಯುವುದರಿಂದ ಹಿಂದಿನಂತೆ ಪೂರೈಸಬೇಕು ಎಂದು ಆಗ್ರಹಿಸಿದರು.
ಕೂಡಲೇ ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಮುಖಂಡರಾದ ಅನಿತಾ, ಮೇರಿ, ಮಾಲಾ, ಮಮ್ತಾಜ್ ಸೇರಿದಂತೆ ಹಲವರು ಭಾಗವಹಿಸಿದ್ದರು.