ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯದ ಭಾಷಾ ನಿಕಾಯದ ಡೀನ್ ಡಾ.ರಹಮತ್ ತರೀಕೆರೆ ಅವರ ‘ಕತ್ತಿಯಂಚಿನ ದಾರಿ’ ಕೃತಿಗೆ ಪ್ರಸಕ್ತ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
‘ಈ ಕೃತಿಯನ್ನು 2006ರಲ್ಲಿಯೇ ರಚಿಸಿದ್ದು, ಈ ಪ್ರಶಸ್ತಿಯಿಂದ ನನಗೆ ಅತೀವ ಸಂತೋಷವಾಗಿದೆ. ನನ್ನ ಬೌದ್ಧಿಕ ಬೆಳವಣಿಗೆಗೆ ಕಾರಣವಾದ ಹಂಪಿ ಕನ್ನಡ ವಿ.ವಿ.ಯು 19ನೇ ನುಡಿಹಬ್ಬದ ಸಂಭ್ರಮದಲ್ಲಿರುವಾಗ ಈ ಪ್ರಶಸ್ತಿ ಘೋಷಣೆಯಾಗಿರುವುದರಿಂದ ಸಂತಸ ಉತ್ತುಂಗಕ್ಕೇರಿದೆ. ಈ ಎರಡೂ ಸಮ್ಮಿಲನಗಳ ಸಂದರ್ಭದಲ್ಲಿ ಈ ಪ್ರಶಸ್ತಿಯನ್ನು ಕನ್ನಡ ವಿ.ವಿ.ಗೆ ಸಮರ್ಪಿಸುತ್ತೇನೆ‘ ಎಂದು ಅವರು ಪ್ರತಿಕ್ರಿಯಿಸಿದರು.
22 ಮಂದಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ನವದೆಹಲಿ (ಪಿಟಿಐ): ಕನ್ನಡದ ರಹಮತ್ ತರೀಕೆರೆಯವರೂ ಸೇರಿದಂತೆ ಒಟ್ಟು 22 ಭಾರತೀಯ ಭಾಷೆಗಳ ಸಾಹಿತಿಗಳಿಗೆ ಪ್ರಸಕ್ತ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.
ಇದರಲ್ಲಿ ಎಂಟು ಕವನ ಸಂಕಲನಗಳು, ನಾಲ್ಕು ಕಾದಂಬರಿಗಳು, ಮೂರು ಕಥಾ ಸಂಕಲನಗಳು ಮತ್ತು ಒಂದು ಪ್ರವಾಸ ಕಥನವೂ ಸೇರಿದೆ.
ಕೇರಳದ ‘ಮಾತೃಭೂಮಿ’ ಪತ್ರಿಕಾ ಗುಂಪಿನ ಆಡಳಿತ ನಿರ್ದೇಶಕ ವೀರೇಂದ್ರ ಕುಮಾರ್ (74) ಅವರು ರಚಿಸಿರುವ ಪ್ರವಾಸ ಕಥೆ ‘ಹೇಮಾವತಾಭುವಿಲ್’ ಈ ಸಲದ ಪ್ರಶಸ್ತಿಗೆ ಆಯ್ಕೆಯಾಗಿರುವುದೊಂದು ವಿಶೇಷ. ಮಲೆಯಾಳಂ ಭಾಷೆಯಲ್ಲಿ ಈಗಾಗಲೇ 12 ಕೃತಿಗಳನ್ನು ರಚಿಸಿರುವ ವೀರೇಂದ್ರ ಕುಮಾರ್ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಇವರು 1997ರಲ್ಲಿ ಕೇಂದ್ರ ಸರ್ಕಾರದ ಕಾರ್ಮಿಕ ಖಾತೆ ರಾಜ್ಯ ಸಚಿವರಾಗಿದ್ದರು.
ಅರುಣ್ ಸಖಾರ್ದಂದೆ (ಕೊಂಕಣಿ), ನಂಜಿ ನಾಡನ್ (ತಮಿಳು), ಉದಯ್ ಪ್ರಕಾಶ್ (ಹಿಂದಿ), ಅಶೋಕ್ ಕೇಲ್ಕರ್ (ಮರಾಠಿ), ಪಥಾನಿ ಪಟ್ನಾಯಕ್ (ಒರಿಯಾ), ಬಾನಿ ಬಸು (ಬಂಗಾಳಿ), ಅರವಿಂದೊ ಉಜಿರ್ (ಬೋಡೊ), ಶೀನ್ ಕಾಫ್ ನಿಜಾಮ್ (ಉರ್ದು), ಧೀರೇಂದ್ರ ಮೆಹ್ತಾ (ಗುಜರಾತಿ), ವನಿತಾ (ಪಂಜಾಬಿ), ಮಂಗತ್ ಬಾದಲ್ (ರಾಜಸ್ತಾನಿ), ಮಿಥಿಲಾ ಪ್ರಸಾದ್ ತ್ರಿಪಾಠಿ (ಸಂಸ್ಕೃತ), ಲಕ್ಷ್ಮಣ್ ದುಬೆ (ಸಿಂಧಿ), ಬಾಶೆರ್ ಬಶೀರ್ (ಕಾಶ್ಮೀರಿ), ಬೊರ್ಕಾನ್ಯಾ (ಮಣಿಪುರಿ) ಅವರುಗಳೂ ಪ್ರಶಸ್ತಿಯ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.