ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಗಿ ಖರೀದಿ ಕೇಂದ್ರವೇ ಭಣ..ಭಣ..

ಕೋಲಾರ ಜಿಲ್ಲೆ: ಫೋಕಸ್
Last Updated 17 ಡಿಸೆಂಬರ್ 2013, 6:10 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ ಐದೂ ತಾಲ್ಲೂಕುಗಳಲ್ಲಿ ಡಿ.3ರಿಂದ ಬಾಗಿಲು ತೆರೆದ ರಾಗಿ ಖರೀದಿ ಕೇಂದ್ರಗಳು ರೈತರಿಗಾಗಿ ಕಾಯುವಂಥ ಸನ್ನಿವೇಶ ನಿರ್ಮಾಣವಾಗಿದೆ.

ತಮಗೆ ಅಗತ್ಯವಿರುವಷ್ಟು ರಾಗಿಯನ್ನು ಬೆಳೆದುಕೊಂಡರೆ ಸಾಕು ಎಂಬ ಸನ್ನಿವೇಶದಲ್ಲಿ ಬಹುತೇಕ ರೈತರಿದ್ದಾರೆ. ಹಲವು ರೈತರು ಬೇರೆ ಹಳ್ಳಿ, ಊರುಗಳಿಂದ, ದಿನಸಿ ಅಂಗಡಿಗಳಿಂದ ರಾಗಿ ಖರೀದಿಸಿ ಬಳಸುತ್ತಿದ್ದಾರೆ. ಹೆಚ್ಚು ಬೆಳೆಯುವ ರೈತರು ಸ್ವಲ್ಪ ಪ್ರಮಾಣವನ್ನು ಮಾತ್ರ ಪರಿಚಿತರಿಗೆ ಮಾರುತ್ತಿದ್ದಾರೆ. ಅವರ ಪೈಕಿ ಕೆಲವರಷ್ಟೇ ಖರೀದಿ ಕೇಂದ್ರಕ್ಕೆ ಕೊಂಚ ರಾಗಿಯನ್ನು ತರುತ್ತಿದ್ದಾರೆ. ಹೀಗಾಗಿ ಖರೀದಿ ಕೇಂದ್ರಗಳು ರಾಗಿ ತರುವ ರೈತರಿಗಾಗಿ ಬಾಗಿಲು ತೆಗೆದು ಕಾಯುತ್ತಲೇ ಇವೆ.

ತಾಲ್ಲೂಕಿನ ಎಪಿಎಂಸಿ ಆವರಣದಲ್ಲಿ ಡಿ.4ರಿಂದ ಕಾರ್ಯ ನಿರ್ವಹಿಸುತ್ತಿರುವ ಖರೀದಿ ಕೇಂದ್ರದಲ್ಲಿ ಸೋಮವಾರದವರೆಗೂ ಯಾವೊಬ್ಬ ರೈತರೂ ರಾಗಿಯನ್ನು ತಂದಿರಲಿಲ್ಲ. ಏಳೆಂಟು ರೈತರು ಮಾತ್ರ ತಾವು ಬೆಳೆದ ರಾಗಿ ಮಾದರಿಯನ್ನು ಗುಣಮಟ್ಟ ಪರೀಕ್ಷೆ ಸಲುವಾಗಿ ನೀಡಿ ಹೋಗಿದ್ದಾರೆ. ಅವರ ಪೈಕಿ ಸುಗಟೂರಿನ ರೈತ ಕೂಟೇರಿ ಅಶ್ವಥ್‍ ತಾವು ಬೆಳೆದ ಸುಮಾರು 30 ಕ್ವಿಂಟಲ್ ರಾಗಿ ಪೈಕಿ ಮನೆ ಬಳಕೆಗೆ ಮೀಸಲಿರಿಸಿ ಉಳಿದ 8 ಕ್ವಿಂಟಲ್ ರಾಗಿ ಮಾತ್ರ ಕೇಂದ್ರಕ್ಕೆ ಸೋಮವಾರ ತಂದು ನೀಡಿದರು.

ಗುಣಮಟ್ಟ ಪರೀಕ್ಷೆ: ರಾಗಿಯ ತೇವಾಂಶ ಅಳೆಯಲು ಕೇಂದ್ರದಲ್ಲಿ ಡಿಜಿಟಲ್ ಮಾಪಕ ಅಳವಡಿಸಲಾಗಿದೆ. ತೇವಾಂಶ ಶೇ 12ರಷ್ಟು ಇದ್ದರೆ ಮಾತ್ರ ರಾಗಿ ಖರೀದಿಸಲಾಗುವುದು. ಅದಕ್ಕಿಂತಲೂ ಹೆಚ್ಚು ತೇವಾಂಶವಿದ್ದರೆ ರಾಗಿ ಗುಣಮಟ್ಟ ಉತ್ತಮವಾಗಿರುವುದಿಲ್ಲ ಎನ್ನುತ್ತಾರೆ ಕೇಂದ್ರದ ಅಧಿಕಾರಿ ಜೆ.ವಿ.ರಾಜಪ್ಪ.

ಕೇಂದ್ರಕ್ಕೆ ಸೋಮವಾರ ಭೇಟಿ ನೀಡಿದ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ಇದುವರೆಗೂ ಒಬ್ಬ ರೈತರು ಮಾತ್ರ ರಾಗಿಯನ್ನು ತಂದಿದ್ದಾರೆ ಅಷ್ಟೆ. ದಿನವೂ ರೈತರಿಗಾಗಿ ಕಾಯುತ್ತಲೇ ಇದ್ದೇವೆ ಎಂದು ನುಡಿದರು.

ರೈತ  ಅಶ್ವಥ್ ಅವರು ತಂದ ಪ್ಲಾಸ್ಟಿಕ್ ಚೀಲಗಳನ್ನು ನಿರಾಕರಿಸಿದ ಅವರು, ಪರಿಸರ ಸ್ನೇಹಿಯಾದ ಗೋಣಿಚೀಲಗಳನ್ನು ತರಲು ಸೂಚಿಸಿದ್ದರು. ಗೋಣಿ ಚೀಲಗಳನ್ನು ತಂದ ಬಳಿಕ ಅವುಗಳಿಗೆ ರಾಗಿಯನ್ನು ತುಂಬಿ ತೂಕ ಮಾಡಲಾಯಿತು.

ವಾರದೊಳಗೆ ಹಣ: ರಾಗಿಯನ್ನು ನೀಡಿದ ರೈತರ ಬ್ಯಾಂಕ್ ಖಾತೆಗೆ ನೇರವಾಗಿ  ಹಣ ಪಾವತಿಯಾಗುವ ವ್ಯವಸ್ಥೆ ಇದೆ. ಪ್ರತಿ ಕ್ವಿಂಟಲ್ ರಾಗಿಗೆ ₨ 1800 ನಿಗದಿ ಮಾಡಲಾಗಿದೆ. ದಲ್ಲಾಳಿಗಳ ಮೂಲಕ ರಾಗಿ ಮಾರಿದರೆ ರೈತರಿಗೆ ನಷ್ಟವಾಗುತ್ತದೆ ಎಂಬ ಕಾರಣಕ್ಕಾಗಿ ಕೇಂದ್ರವನ್ನು ತೆರೆಯಲಾಗಿದೆ ಎಂದು ಅವರು ಹೇಳಿದರು. ಅವರ ಮಾತಿಗೆ ರೈತ ಅಶ್ವಥ್ ಸಹಮತ ವ್ಯಕ್ತಪಡಿಸಿದರು.

ಖಾಸಗಿಯಾಗಿ ರಾಗಿ ಮಾರಿದರೆ ಪ್ರತಿ ಕ್ವಿಂಟಲ್‌ಗೆ ₨ 1400 ದೊರಕುತ್ತದೆ. ಅದು ಕಡಿಮೆ ಬಾಬತ್ತು. ಕೇಂದ್ರದಲ್ಲಿ ಮಾರುತ್ತಿರುವುದರಿಂದ ಹೆಚ್ಚಿನ ಹಣ ದೊರಕುತ್ತದೆ. ಎಲ್ಲ ರೈತರೂ ಕೇಂದ್ರಕ್ಕೆ ಬಂದು ರಾಗಿ ಮಾರಲು ಮನಸು ಮಾಡಬೇಕಷ್ಟೇ ಎಂದು ಅವರು ಅಭಿಪ್ರಾಯಪಟ್ಟರು.

33 ಸಾವಿರ ಟನ್: ಈ ವರ್ಷ ಜಿಲ್ಲೆಯಲ್ಲಿ 33 ಸಾವಿರ ಟನ್ ರಾಗಿ ಇಳುವರಿ ನಿರೀಕ್ಷಿಸಲಾಗಿದೆ. ಆದರೆ ಆ ಪೈಕಿ ಕೇಂದ್ರಕ್ಕೆ ಬರುವ ರಾಗಿ ಪ್ರಮಾಣ ಅತಿ ಕಡಿಮೆಯಾಗಿರುತ್ತದೆ. ಇದುವರೆಗೂ ಜಿಲ್ಲೆಯಲ್ಲಿ ರಾಗಿ ಖರೀದಿ ಕೇಂದ್ರಗಳನ್ನು ಆರಂಭಿಸಿದ್ದ ನಿದರ್ಶನಗಳಿರಲಿಲ್ಲ.

ಇದು ಹೊಸ ಬಗೆ. ಕೊಟ್ಟಷ್ಟು ಹಣ ಪಡೆದು ಪರಿಚಿತರಿಗೆ, ಸಂಬಂಧಿಕರಿಗಷ್ಟೇ ರಾಗಿ ಮಾರಿ ಸುಮ್ಮನಾಗುತ್ತಿದ್ದ ರೈತರು, ಈ ಹೊಸ ಪದ್ಧತಿಗೆ ತೆರೆದುಕೊಂಡರೆ ಮಾತ್ರ ಹೆಚ್ಚಿನ ಲಾಭವನ್ನು ಪಡೆಯಬಹುದು ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಯೊಬ್ಬರು.

ರಾಗಿ ಮಾರಲು ಆಸಕ್ತಿ ಇಲ್ಲ..
ಬಂಗಾರಪೇಟೆ: ಪಟ್ಟಣದಲ್ಲಿ ತೆರೆಯಲಾಗಿರುವ ರಾಗಿ ಖರೀದಿ ಕೇಂದ್ರಕ್ಕೆ ಯಾವೊಬ್ಬ ರಾಗಿಯನ್ನು ತಂದು ಮಾರುವ ಆಸಕ್ತಿ ತೋರಿಲ್ಲ. ಕೆಲ ರೈತರು ಮಾತ್ರ ಮಾಹಿತಿ ಪಡೆದು ಸುಮ್ಮನಾಗಿದ್ದಾರೆ.

ರೈತರು ತಾವು ಬೆಳೆದ ರಾಗಿ ಮಾರಾಟ ಮಾಡಲು  ಹಲವು ದಾಖಲೆಗಳನ್ನು ನೀಡಬೇಕಾಗುತ್ತದೆ. ರಾಗಿ ಬೆಳೆದಿರುವ ಬಗ್ಗೆ ಗ್ರಾಮ ಲೆಕ್ಕಾಧಿಕಾರಿಯಿಂದ ದೃಢೀಕರಣ ಪ್ರತ ಪಡೆಯಬೇಕು. ಆ ಜಮೀನಿನ ಪಹಣಿ ಹೊಂದಿರಬೇಕು. ನಂತರ ತಾಲ್ಲೂಕು ಕೃಷಿ ಅಧಿಕಾರಿಯಿಂದ ರಾಗಿ ಗುಣಮಟ್ಟ ಪರಿಶೀಲಿಸಿ ಮಾರಾಟ ಮಾಡಬೇಕಿದೆ.

ರಾಗಿ ಉತ್ತಮ ಗುಣಮಟ್ಟ ಇದ್ದಲ್ಲಿ ಮಾತ್ರ ಖರೀದಿಗೆ ಶಿಪಾರಸ್ಸು ಮಾಡಲಾಗುತ್ತದೆ. ಅದಕ್ಕಾಗಿ ಅಲೆದಾಡುವುದೂ ಅನಿವಾರ್ಯ. ಅಲ್ಲದೆ ಕೆಲವೆಡೆ ರಾಗಿ ಒಕ್ಕಣೆ ನಡೆಯುತ್ತಿದ್ದು, ಜನವರಿ ತಿಂಗಳಲ್ಲಿ ರೈತರು ರಾಗಿ ಮಾರಾಟಕ್ಕೆ ಮುಂದಾಗಬಹುದು ಎನ್ನುತ್ತಾರೆ ರಾಗಿ ಕೇಂದ್ರದ ಅಧಿಕಾರಿ ಮಲ್ಲಣ್ಣ.

ಸರ್ಕಾರ ರಾಗಿ ಖರೀದಿ ಕೇಂದ್ರ ತೆರದಿರುವ ಬಗ್ಗೆ ಬಹುತೇಕ ರೈತರಿಗೆ ತಿಳಿದಿಲ್ಲ. ಈ ವಿಚಾರದ ಬಗ್ಗೆ ಮತ್ತಷ್ಟು ಪ್ರಚಾರ ನಡೆಸಬೇಕಿದೆ ಎಂಬುದು ಬತ್ತಲಹಳ್ಳಿ ರೈತ ವೆಂಕಟೇಶಪ್ಪ ಅಭಿಪ್ರಾಯ.

ಮಾಲೂರಿನ ಕೇಂದ್ರವೂ ಕಾಯುತ್ತಿದೆ
ಮಾಲೂರು : ಪಟ್ಟಣದ ಹೊರವಲಯದಲ್ಲಿರುವ ಕೈಗಾರಿಕಾ ಪ್ರಾಂಗಣದಲ್ಲಿ ತೆರೆಯಲಾಗಿರುವ ರಾಗಿ ಖರೀದಿ ಕೇಂದ್ರಕ್ಕೆ ಇದುವರೆಗೆ ಒಬ್ಬ ರೈತರೂ ಭೇಟಿ ನೀಡಿಲ್ಲ.

ವಿಪರ್ಯಾಸ ಎಂದರೆ ಖರೀದಿ ಕೇಂದ್ರ ಎಲ್ಲಿದೆ ಎಂಬ ಬಗ್ಗೆ ಸೂಚನಾ ಫಲಕವಾಗಲೀ, ಮಾಹಿತಿ ನೀಡುವವರಾಗಲೀ ಇಲ್ಲಿ ಕಂಡುಬರುವುದಿಲ್ಲ. ರೈತರು ಅವರಿವರನ್ನು ಕೇಳಿಕೊಂಡು ಕೇಂದ್ರವಿರುವ ಸ್ಥಳವನ್ನು ಪತ್ತೆ ಮಾಡುವ ಸನ್ನಿವೇಶವಿದೆ.

ಕೇಂದ್ರವನ್ನು ಪ್ರಾರಂಭಿಸಿ 10 ದಿನಕ್ಕೂ ಹೆಚ್ಚು ಕಾಲವಾಗಿದ್ದರೂ ಇಲ್ಲಿಯ ತನಕ ಯಾವುದೇ ರೈತರು ರಾಗಿ ಮಾರಾಟ ಮಾಡಲು ಬಂದಿಲ್ಲ. ಸರ್ಕಾರದ ಈ ಯೋಜನೆ ಫಲಕಾರಿಯಾಗುವುದು ಸಂದೇಹವಾಗಿದೆ ಎಂಬುದು ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧಿಕಾರಿಯೊಬ್ಬರ ಅನಿಸಿಕೆ.

ಸರ್ಕಾರ ಖರೀದಿ ಕೇಂದ್ರ ಆರಂಭಿಸಿರುವ ಕುರಿತು ರೈತರಲ್ಲಿ ಜಾಗೃತಿ ಮೂಡಿಸ ಬೇಕು. ಖರೀದಿ ಮಾಡುತ್ತಿರುವುದರ ಬಗ್ಗೆ ಕೇಂದ್ರದ ಬಳಿ ಫಲಕ ಹಾಕಬೇಕು. ಆದರೆ ಅಂಥ ಚಟುವಟಿಕೆಗಳು ನಡೆದಿಲ್ಲ ಎಬುಂದು ದೊಮ್ಮಲೂರು ಗ್ರಾಮದ ರೈತ ಮುನಿರಾಜು ಅವರ ಆರೋಪ.

ಖರೀದಿ ಕೇಂದ್ರಕ್ಕೆ ಬೀಗ
ಮುಳಬಾಗಲು: ಪಟ್ಟಣದ ಆರ್‌ಎಂಸಿ ಮಾರುಕಟ್ಟೆ ಯಾರ್ಡ್ ನಲ್ಲಿ 13 ದಿನದ ಹಿಂದೆ ಶುರುವಾಗಿರುವ ರಾಗಿ ಖರೀದಿ ಕೇಂದ್ರಕ್ಕೆ ರೈತರು ಬಾರದೇ ಇರುವ ಹಿನ್ನೆಲೆಯಲ್ಲಿ ಬೀಗ ಹಾಕಲಾಗಿದೆ.

ತಾಲ್ಲೂಕಿನ ಯಾವ ರೈತರೂ ಇತ್ತ ತಲೆ ಹಾಕಿಲ್ಲ. ರಾಗಿ ಕೊಯಿಲು ಇನ್ನು ಸಂಪೂರ್ಣವಾಗದಿರುವುದು ಹಾಗೂ ಈಗಾಗಲೇ ಕೊಯಿಲು ಆಗಿರುವ ರಾಗಿಗೆ ಹೊರಗಡೆ ಹೆಚ್ಚಿನ ದರ ಸಿಗುತ್ತಿರುವುದು ಕಾರಣವಾಗಿದೆ ಎನ್ನುತ್ತಾರೆ ದೊಡ್ಡಗುರ್ಕಿ ಗ್ರಾಮದ ರೈತ ಪಾಲಯ್ಯ.ರಾಗಿ ಖರೀದಿ ಕೇಂದ್ರ ಪ್ರಾರಂಭವಾಗಿ ಹಲವು ದಿನಗಳಾದರೂ ರೈತರು ಬಂದಿಲ್ಲ. ಆದರೆ ಹಲವು ರೈತರು ತಮ್ಮನ್ನು ಸಂಪರ್ಕಿಸಿ ಮಾಹಿತಿ ಪಡೆದಿದ್ದಾರೆ ಎನ್ನುತ್ತಾರೆ ಕೇಂದ್ರದ ಅಧಿಕಾರಿ ತೀರ್ಥಶಂಕರ್.  ತಾಲ್ಲೂಕಿನಲ್ಲಿ ಇನ್ನು ಸಂಪೂರ್ಣವಾಗಿಲ್ಲ.

ಒಮ್ಮೆ ಕೊಯಿಲು ಪೂರ್ಣವಾದರೆ ಹೆಚ್ಚಿನ ರಾಗಿ ಮಾರುಕಟ್ಟೆಗೆ ಬರುತ್ತದೆ, ಅಂತಹ ಸನ್ನಿವೇಶದಲ್ಲಿ  ಸರ್ಕಾರದ ಖರೀದಿ ಬೆಲೆಗಿಂತಲೂ ಹೆಚ್ಚಿನ ದರವನ್ನು ಖಾಸಗಿಯವರು ನೀಡುವುದಿಲ್ಲ, ಖರೀದಿ ಕೇಂದ್ರದ ಸಂರ್ಪೂರ್ಣ ಪ್ರಯೋಜನ ಜನವರಿ ಬಳಿಕ ರೈತರಿಗೆ ದೊರಕುತ್ತದೆ ಎಂಬುದು ಅವರ ಅಭಿಪ್ರಾಯ.

ನಮಗೇ ತಿನ್ನಲು ರಾಗಿ ಇಲ್ಲ...
ಶ್ರೀನಿವಾಸಪುರ:  ನನಗೇ ಇಲ್ಲದೆ ತೌಡ ತಿಂತಿದ್ರೆ, ಕಟ್ಟೆ ಮೇಲಿನ ದುರ್ಗೆ ಗೊಟ್ಟಿಗಡ್ಡೆ ಬೇಕೂಂತ ಅತ್ಲಂತೆ. ತಿನ್ನಲು ರಾಗಿ ಇಲ್ದೆ ಪರಿತಪಿಸುತ್ತಿದ್ದೇವೆ. ಜಾನುವಾರಿಗೆ ಒಣ ಹುಲ್ಲು ಇಲ್ಲ. ಇಂಥ ಪರಿಸ್ಥಿತಿಯಲ್ಲಿ ರಾಗಿ ಖರೀದಿ ಕೇಂದ್ರ ತೆರೆದರೆ ನಡೆಯುತ್ತದೆಯೇ?

ತಾಲ್ಲೂಕಿನ ಪನಸಮಾಕನಹಳ್ಳಿ ಗ್ರಾಮದ ರೈತ ರಾಮಪ್ಪ ಅವರ ಪ್ರಶ್ನೆ. ಅವರ ಪ್ರಶ್ನೆಗೆ ತಕ್ಕಂತೆಯೇ ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ರಾಗಿ ಖರೀದಿ ಕೇಂದ್ರವು ರಾಗಿ ಮಾರುವ ರೈತರ ಬರುವಿಗಾಗಿ ಕಾಯುತ್ತಲೇ ಇದೆ.

  ಈ ಕಡೆ ಯಾರೂ ದೊಡ್ಡ ಪ್ರಮಾಣದಲ್ಲಿ ರಾಗಿ ಬೆಳೆಯುವುದಿಲ್ಲ. ಮನೆ ಖರ್ಚಿಗೆ ಸಾಕಾಗುವಷ್ಟು ಮಾತ್ರ ಬೆಳೆಯುತ್ತಾರೆ.
ಸ್ವಲ್ಪ ಉಳಿದರೂ ಮುಂದೆ ಎಂಥ ಕಾಲ ಬರುತ್ತೊ ಏನೋ, ಈಗ ಮಾರಿ ಆಗ ಕೊಳ್ಳಲು ಆಗುತ್ತದೆಯೇ ಎನ್ನುತ್ತಾರೆ ಮುದಿಮಡಗು ಸಮೀಪದ ಕಡಪಲರೆಡ್ಡಿಹಳ್ಳಿ ಗ್ರಾಮದ ರೈತ ಶಂಕರರೆಡ್ಡಿ.

ರಾಗಿ ಬೆಳೆಯುವ ವೆಚ್ಚ ಹೆಚ್ಚಿದೆ. ಉಳುಮೆ ಮಾಡಲು ಟ್ರ್ಯಾಕ್ಟರ್‌ ಬಾಡಿಗೆ, ಬಿತ್ತನೆ, ಗೊಬ್ಬರ, ತೆನೆ ಕೊಯಿಲು, ಒಕ್ಕಣೆ, ತಾಳು ಕಟಾವಿಗೆ ತಗಲುವ ವೆಚ್ಚ ಗಣನೆಗೆ ತೆಗೆದುಕೊಂಡರೆ ಅದರಿಂದ ಬರುವ ಆದಾಯ ಏನೂ ಇರುವುದಿಲ್ಲ. ರಾಗಿ ಬೆಳೆದು ಕೈಸುಟ್ಟುಕೊಳ್ಳುವುದೇ ಆಗಿದೆ ಎನ್ನುತ್ತಿದ್ದಾರೆ ಹಲವು ರೈತರು.

ತಾಲ್ಲೂಕಿನ ಮಟ್ಟಿಗೆ ಹೇಳುವುದಾದರೆ, ಈ ಬಾರಿ ಮಳೆ  ಮತ್ತು ಅಂತರ್ಜಲದ ಕೊರತೆಯಿಂದಾಗಿ ರಾಗಿ ಬೆಳೆ ಕೈಕೊಟ್ಟಿದೆ. ಕೆಲವು ಕಡೆ ರಾಗಿ ಬಿತ್ತನೆ ನಡೆದೇ ಇಲ್ಲ. ಬಿತ್ತನೆ ಆಗಿದ್ದರೂ ತೆನೆ ಕಾಳು ಕಟ್ಟುವ ಸಂದರ್ಭದಲ್ಲಿ ಮಳೆಯಿಲ್ಲದೆ ಒಣಗಿ ಹಾಳಾಯಿತು. ಇಂಥ ಪರಿಸ್ಥಿತಿಯಲ್ಲಿ ರೈತರು ರಾಗಿ ಮಾರುವ ಪ್ರಶ್ನೆಯೇ ಬರುವುದಿಲ್ಲ ಎಂಬುದು ಸಾಮಾನ್ಯ ಅಭಿಪ್ರಾಯವಾಗಿದೆ.

  ವಿಚಿತ್ರವೆಂದರೆ ತಾಲ್ಲೂಕಿನ ರೈತರು ಮನೆ ಬಳಕೆಗೆ ಚಿಂತಾಮಣಿ ಮಾರುಕಟ್ಟೆಯಿಂದ ರಾಗಿ ಖರೀದಿಸಿ ಕೊಂಡೊಯ್ಯುತ್ತಿದ್ದಾರೆ. ಕೊಳವೆ ಬಾವಿಗಳ ಆಶ್ರಯದಲ್ಲಿ ರಾಗಿ ಬೆಳೆದಿರುವ ರೈತರು ಭವಿಷ್ಯದ ದೃಷ್ಟಿಯಿಂದ ಮಾರಲು ಹೋಗದೆ ಮನೆ ಬಳಕೆಗೆ ಉಳಿಸಿಕೊಂಡಿದ್ದಾರೆ. ಕಷ್ಟಕ್ಕೆ ಮಾರಲು ಇಚ್ಛಿಸುವ ರೈತರು ನೇರವಾಗಿ ಚಿಂತಾಮಣಿ ಸಂತೆಗೆ ಕೊಂಡೊಯ್ದು ಮಾರುತ್ತಿದ್ದಾರೆ. ಇದರಿಂದಾಗಿ ಶ್ರೀನಿವಾಸಪುರ ಎಪಿಎಂಸಿ ಮಾರುಕಟ್ಟೆಗೆ ರಾಗಿ ಬರುತ್ತಿಲ್ಲ.

   ಜಿಲ್ಲೆಯ ಬರಪೀಡಿತ ತಾಲ್ಲೂಕುಗಳಲ್ಲಿ ಒಂದಾದ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಒಟ್ಟಾರೆ ಮಳೆ ಕೊರತೆಯಿಂದಾಗಿ ಮಳೆ ಆಶ್ರಿತ ಮುಂಗಾರು ಬೆಳೆ ಕೈಗೆ ಸಿಕ್ಕಿಲ್ಲ. ಇಲ್ಲಿನ ಜನರ ಮುಖ್ಯ ಆಹಾರವಾದ ರಾಗಿಗೆ ರೈತರಿಂದಲೇ ಬೇಡಿಕೆ ಇದೆ. ಈ ಕಾರಣದಿಂದಲೇ ಖರೀದಿ ಕೇಂದ್ರಕ್ಕೆ ರಾಗಿ ಹೋಗುತ್ತಿಲ್ಲ ಎನ್ನುತ್ತಾರೆ ರೈತರು.

ರಾಗಿ ಖರೀದಿಗೆ ಅಗತ್ಯವಾದ ವ್ಯವಸ್ಥೆ ಮಾಡಲಾಗಿದೆ. ಆದರೆ ಈವರೆಗೆ ರಾಗಿ ಬಂದಿಲ್ಲ ಎಂಬುದು ಎಪಿಎಂಸಿ ಕಾರ್ಯದರ್ಶಿ ಕುಮಾರ್‌ ಅವರ ನುಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT