ಬಂಗಾರಪೇಟೆ: ತಾಲ್ಲೂಕಿನ ಗಡಿ ಭಾಗದಲ್ಲಿ ಕಳೆದ 29 ದಿನಗಳಿಂದ ಹೊಲ–ಗದ್ದೆಗಳಿಗೆ ಲಗ್ಗೆಯಿಟ್ಟು ಬೆಳೆ ನಾಶಮಾಡುತ್ತಿರುವ ಆನೆ ಹಿಂಡು ಗುರುವಾರ ರಾತ್ರಿ ಕಾಮಸಮುದ್ರ 6ನೇ ಬ್ಲಾಕ್ ಬಳಿ ಕಂಡುಬಂದಿದೆ.
ಕಳೆದ ಎರಡು ದಿನದಿಂದ ಯರಗೋಳು, ಬಲಮಂದೆ ಕಾಡಿನಲ್ಲಿದ್ದ ಆನೆ ಹಿಂಡು ಸುಮಾರು ಐದಾರು ಕಿಲೋ ಮೀಟರ್ ಸಂಚರಿಸಿ ಆಂಧ್ರ ಗಡಿ ಭಾಗದತ್ತ ಮುಖ ಮಾಡಿವೆ. ಬುಧವಾರ ರಾತ್ರಿ ಹಾದಿಯಲ್ಲಿ ಸಿಕ್ಕ ಬೋಡೇನಹಳ್ಳಿ, ಕೊಂಗರಹಳ್ಳಿ, ನಡಂಪಲ್ಲಿ, ಹಾರ್ಮಾನಹಳ್ಳಿ, ಬಾದಗುಟ್ಲಹಳ್ಳಿ ಗ್ರಾಮಗಳ ಬೆಳೆಗಳಿಗೆ ದಾಳಿ ಮಾಡಿ ಅಪಾರ ನಷ್ಟ ಮಾಡಿವೆ.
ಹಾರ್ಮಾನಹಳ್ಳಿ ಗ್ರಾಮದ ಚಲ್ಲಪ್ಪ ಎಂಬುವರ ಬತ್ತ ತುಳಿದು ತಿಂದಿವೆ. ಕುಚ್ಚಪ್ಪ ಅವರ ರಾಗಿ ಅಡ್ಡೆಗಳನ್ನು ಕೆಡವಿ ಚೆಲ್ಲಾಪಿಲ್ಲಿಗೊಳಿಸಿವೆ. ಮುನಿರತ್ನಂ ಎನ್ನುವರ ಆಲೂಗಡ್ಡೆ ರಾಶಿಯನ್ನು ತಿಂದಿವೆ. ವೆಂಕಟೇಶಪ್ಪ ಅವರ ಟೊಮೆಟೊ ತೋಟ ತುಳಿದು ನಾಶಪಡಿಸಿವೆ.
ಅಲ್ಲದೆ ಸಮಾಧಿಗೆ ಕಟ್ಟಲಾಗಿದ್ದ ಬೃಂದಾವನ ಕೆಡವಿ ನೆಲಕ್ಕೆ ಉರುಳಿಸಿವೆ ಎಂದು ಹಾರ್ಮಾನಹಳ್ಳಿ ಗ್ರಾಮಸ್ಥ ಬಳ್ಳಾರಿ ವೆಂಕಟೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
ಬೋಡೇನಹಳ್ಳಿ ಗ್ರಾಮದ ರಾಮರೆಡ್ಡಿ ಎಂಬುವರ ಟೊಮೆಟೊ ಬೆಳೆ ಸಂಪೂರ್ಣವಾಗಿ ತುಳಿದಿವೆ. ರಾಮಚಂದ್ರ, ಶ್ರೀರಾಮರೆಡ್ಡಿ ಅವರ ರಾಗಿ ಬೆಳೆ ತಿಂದಿವೆ ಎಂದು ಬೋಡೇನಹಳ್ಳಿ ಗ್ರಾಮದ ಪಂಚಾಯಿತಿ ಮಾಜಿ ಸದಸ್ಯ ಲಕ್ಷ್ಮಿನಾರಾಯಣ ತಿಳಿಸಿದರು.
ಮೂರು ಗುಂಪುಗಳಾಗಿದ್ದ ಆನೆಗಳನ್ನು ಒಂದು ಗೂಡಿಸಲಾಗಿದೆ.
ಬನ್ನೇರಘಟ್ಟ-ದಿಂದ ಕರೆಸಿರುವ 12 ಮಂದಿ ವಿಶೇಷ ಪರಿಣಿತ ತಂಡ ಸೇರಿದಂತೆ 120 ಮಂದಿ ಆನೆ ನಿಯಂತ್ರಿಸುವಲ್ಲಿ ಹರಸಾಹಸ ಪಡುತ್ತಿದ್ದೇವೆ. ಹಗಲು ಕಾಡಿನಲ್ಲಿ ವಿಶ್ರಮಿಸುತ್ತಿದ್ದು, ರಾತ್ರಿ ವೇಳೆ ಮಾತ್ರ ಹೊರಗಡೆ ಬರುತ್ತಿರುವುದರಿಂದ ಕಾರ್ಯಾಚರಣೆ ಕುಂಠಿತಗೊಂಡಿದೆ ಎಂದು ಬಂಗಾರಪೇಟೆ ವಲಯ ಅರಣ್ಯ ಅಧಿಕಾರಿ ಚಂದ್ರಶೇಖರ ರೆಡ್ಡಿ ತಿಳಿಸಿದರು.