ಭದ್ರಾವತಿ: ‘ರಾಜಕಾರಣ ಟೆಂಟ್ ಸಿನಿಮಾ ಇದ್ದಂತೆ. ಟೆಂಟ್ಗೆ ಬೆಂಕಿ ಬಿದ್ದಾಗ ಹಿಂದೆ ಕುಂತೋನು ಮುಂದಕ್ಕೆ, ಮುಂದೆ ಇದ್ದವನು ಹಿಂದಕ್ಕೆ ಹೇಗೆ ಓಟ ಕೀಳುತ್ತಾರೋ ಹಾಗೆ ನಡೆದಿದೆ ನಮ್ಮ ರಾಜಕಾರಣ’ ಎಂದು ತಮ್ಮದೇ ಧಾಟಿಯಲ್ಲಿ ಕೇಂದ್ರ ಮಾಜಿ ಸಚಿವ ಸಿ.ಎಂ. ಇಬ್ರಾಹಿಂಹೇಳಿದರು.
ಇಲ್ಲಿನ ಕನಕಮಂಟಪ ಮೈದಾನದಲ್ಲಿ ರಾಯಲ್ಹೆಲ್ತ್ ಕ್ಲಬ್ ಹಾಗೂ ಶಾಸಕ ಬಿ.ಕೆ. ಸಂಗಮೇಶ್ವರ ಆಯೋಜಿಸಿದ್ದ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ ಉದ್ಘಾಟನಾ ಸಮಾರಂಭದಲ್ಲಿ ಶನಿವಾರ ಮಾತನಾಡಿದರು.
‘ರಾಜ್ಯ ಆಳುವ ಜನರು ನಾವು ಆಡಿದ್ದೇ ಆಟ ಎಂದು ಸಾಗಿದ್ದಾರೆ. ಅದಕ್ಕೆ ಯಾರ ಲಂಗು ಲಗಾಮು ಇಲ್ಲ. ಹಿಡಿದು ನಿಲ್ಲಿಸುವ ತಾಕತ್ತು ಮಾತ್ರ ಯಾರಿಗೂ ಇಲ್ಲ’ ಎಂದು ತಿಳಿಸಿದರು.
‘ಇಲ್ಲಿ ನಡೆಯುತೀರೋ ದೇಹದಾರ್ಢ್ಯ ಸ್ಪರ್ಧೆ ನಮ್ಮ ಶಾಸಕರಿಗೂ ಒಂದಿಷ್ಟು ದೇಹವನ್ನು ಉಬ್ಬಿಸಲಿ, ಯಾಕೆಂದರೆ ಇನ್ನು ಮುಂದೆ ವಿಧಾನ ಸೌಧಕ್ಕೆ ಹೋಗುವ ಮಂದಿ ಇದೇ ತರಹ ಇರುವ ಸ್ಥಿತಿ ಇದೆ’ ಎಂದು ಹೇಳಿದರು.
ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಕೃಷ್ಣ ಭೈರೇಗೌಡ, ಸತೀಶ್ ಜಾರಕಿಹೊಳಿ, ಶಾಸಕ ಬಿ.ಕೆ. ಸಂಗಮೇಶ್ವರ, ಸಿ.ಎಂ. ಸಾದಿಕ್, ಕಣ್ಣಪ್ಪ, ಸಿರಿಲ್ ಡಿಕಾಸ್ಟಾ, ಜಿ.ಪಂ. ಸದಸ್ಯ ಎಚ್.ಎಲ್. ಷಡಾಕ್ಷರಿ, ತಾ.ಪಂ. ಉಪಾಧ್ಯಕ್ಷ ಶಾಂತಕುಮಾರ್, ಸದಸ್ಯ ಶ್ರೀನಿವಾಸ್ ಉಪಸ್ಥಿತರಿದ್ದರು.