ಕನಕಗಿರಿ: ಪ್ರಸಕ್ತ ದಿನಮಾನದಲ್ಲಿ ರಾಜಕೀಯ ಕ್ಷೇತ್ರ ಹೊಲಸಿನಿಂದ ಕೂಡಿದ್ದು, ರಾಜಕೀಯ ಬಿಟ್ಟು ಮನೆಯಲ್ಲಿ ಕೂಡಬೇಕೆನಿಸಿದೆ ಎಂದು ಶಾಸಕ ಹಾಗೂ ಮಾಜಿ ಸಚಿವ ಶಿವರಾಜ ತಂಗಡಗಿ ಇಲ್ಲಿ ವಿಷಾದಿಸಿದರು. ಸಮೀಪದ ಮುಸಲಾಪುರ ಗ್ರಾಮದ ಶ್ರೀ ಮಹರ್ಷಿ ವಾಲ್ಮೀಕಿ ಕ್ಷೇಮಾಭಿವೃದ್ದಿ ಸಂಘದ ಆಶ್ರಯದಲ್ಲಿ ಮಂಗಳವಾರ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ಹಾಗೂ ಸಂಘಟನೆಯಿಂದ ರಾಜಕಾರಣಿಗಳನ್ನು ತಿದ್ದುವ ಕೆಲಸವನ್ನು ಜನತೆ ಮಾಡಬೇಕೆಂದು ಕೋರಿದರು.ಶಿಕ್ಷಣದಿಂದ ಮಾತ್ರ ದೇಶದ ಪ್ರಗತಿ ಸಾಧ್ಯವಿದ್ದು ಕೋಟೆ, ಕೊತ್ತಲುಗಳನ್ನು ಕಟ್ಟಿ ನಾಡಿನ ಜನತೆಯ ರಕ್ಷಣೆ ಮಾಡಿದ ನಾಯಕ ಜನಾಂಗ ಮೊದಲು ಶಿಕ್ಷಣವಂತರಾಗಬೇಕೆಂದು ತಿಳಿಸಿದರು.
ಜಿಪಂ ಮಾಜಿ ಸದಸ್ಯ ಹನುಮೇಶ ನಾಯಕ ಮಾತನಾಡಿ ಜಯಂತಿ ಆಚರಣೆ ಮಾಡಿದರೆ, ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸವಾಲುಗಳನ್ನು ಎದುರಿಸಬೇಕಾಗಿದೆ ಎಂದು ತಿಳಿಸಿದರು.
ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೋಗದ ನಾರಾಯಣಪ್ಪ ನಾಯಕ ಮಾತನಾಡಿ ರಾಜ್ಯದಲ್ಲಿ 19ಮಂದಿ ನಾಯಕ ಜನಾಂಗದ ಶಾಸಕರು ಇದ್ದರೂ ಮಂತ್ರಿ ಸ್ಥಾನಕ್ಕಾಗಿ ಕೈಚಾಚುವ ಕೆಲಸ ತಪ್ಪಿಲ್ಲ,ವಿಧಾನಸಭಾ ಸಾಮಾನ್ಯ ಕ್ಷೇತ್ರದಲ್ಲಿಯೂ ಗೆಲ್ಲುವ ಅರ್ಹತೆಯುನ್ನು ನಾಯಕರು ಪಡೆದುಕೊಳ್ಳಬೇಕೆಂದು ತಿಳಿಸಿದರು.ಎಪಿಎಂಸಿ ಉಪಾಧ್ಯಕ್ಷ ರಾಜಾ ಚಚ್ಚಪ್ಪ ನಾಯಕ, ಶಿವಲಿಂಗನಗೌಡ ಪಾಟೀಲ ಮಾತನಾಡಿದರು.
ಜಿಪಂ ಸದಸ್ಯ ಗಂಗಣ್ಣ ಸಮಗಂಡಿ, ತಾಪಂ ಅಧ್ಯಕ್ಷ ಹೊನ್ನೂರುಸಾಬ, ಗ್ರಾಪಂ ಅಧ್ಯಕ್ಷೆ ರೇಣುಕಮ್ಮ ಬೋವಿ, ಪ್ರಮುಖರಾದ ರಮೇಶ ನಾಯಕ ಚೌಡ್ಕಿ, ರಮೇಶ ನಾಯಕ ಜೋಗಿನ್, ರಂಗಪ್ಪ ಕೊರಗಟಗಿ, ಸಂಗಪ್ಪ ಸಜ್ಜನ್, ಹೊಳೆಯಪ್ಪ, ವಿರೂಪಾಕ್ಷಿ ಬೊಮ್ಮನಾಳ, ವೀರಬಸವನಗೌಡ ಪಾಟೀಲ, ಶರಣೆಗೌಡ ಪರಾಪುರ, ಸಿದ್ದನಗೌಡ, ಕರಿಬಸಯ್ಯ ಇತರರು ಹಾಜರಿದ್ದರು.ಲಿಂಗರಾಜ ತಳವಾರ ಸ್ವಾಗತಿಸಿದರು. ಶಿಕ್ಷಕಿ ಬಸಮ್ಮ ತಳವಾರ ನಿರೂಪಿಸಿದರು