ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾರಣಕ್ಕೆ ಧರ್ಮ-ತತ್ವ ಬುನಾದಿಯಾಗಲಿ

Last Updated 1 ಫೆಬ್ರುವರಿ 2012, 10:35 IST
ಅಕ್ಷರ ಗಾತ್ರ

ದಾವಣಗೆರೆ: `ಜನತೆಗೆ ಮೂಲ ಸೌಲಭ್ಯ ಕಲ್ಪಿಸುವುದು ಪ್ರತಿ ಸರ್ಕಾರದ ಕರ್ತವ್ಯ. ಅದು ಜನಸಾಮಾನ್ಯನಿಗೆ ನೀಡುವ ಕೊಡುಗೆ ಅಲ್ಲ~ ಎಂದು ಸಂಸತ್ ಸದಸ್ಯ ಜನಾರ್ದನ ಸ್ವಾಮಿ ಪ್ರತಿಪಾದಿಸಿದರು.ನಗರದ  ಶಿವಯೋಗಾಶ್ರಮದಲ್ಲಿ ಮಂಗಳವಾರ ಜಯದೇವ ಗುರುಗಳ 55ನೇ ಸ್ಮರಣೋತ್ಸವದ ಪ್ರಯುಕ್ತ ಏರ್ಪಡಿಸಲಾದ `ಜನಪ್ರತಿನಿಧಿಗಳ ಚಿತ್ತ; ಕುಂದುಕೊರತೆಗಳತ್ತ~ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜನರಿಗೆ ಕುಡಿಯುವ ನೀರು, ವಿದ್ಯುತ್, ರಸ್ತೆ, ಶಿಕ್ಷಣ ಇತ್ಯಾದಿ ಮೂಲ ಆವಶ್ಯಕತೆಗಳನ್ನು ಪೂರೈಸಿದರೆ ಸಾಕು. ಅವರು ಸುಖವಾಗಿ ಬದುಕುತ್ತಾರೆ. ಸರ್ಕಾರಗಳು ಬದಲಾಗುತ್ತವೆ. ಸೌಲಭ್ಯಗಳು ಕೊಟ್ಟ ಕೀರ್ತಿ ಇನ್ನೊಬ್ಬರಿಗೆ ಹೋಗುತ್ತದೆ ಎಂಬ ಮನೋಭಾವ ಸಲ್ಲದು. ಯಾರೇ ಬಂದರೂ ಏಕಪ್ರಕಾರವಾಗಿ ಮೂಲಸೌಲಭ್ಯ ಸಿಗಬೇಕು ಎಂದು ಹೇಳಿದರು.

ತಮ್ಮ ವಿದೇಶ ಅನುಭವ ಹೇಳಿದ ಅವರು ಕ್ಯಾಲಿಫೋರ್ನಿಯಾದಲ್ಲಿ ಮಗುವಿನ ಜನನವಾದ ತಕ್ಷಣ ಆಸ್ಪತ್ರೆಯಲ್ಲೇ ಜನನ ಪ್ರಮಾಣ ಸಿಗುತ್ತದೆ. ಅಲ್ಲಿಂದ ಮನೆಗೆ ವಾಪಸಾಗುವಾಗ ಪಾಸ್‌ಪೋರ್ಟ್ ಕೂಡಾ ಸಿಗುತ್ತದೆ. ಇಂಥ ಸರಳವಾದ ಕ್ರಮಗಳು ಇಲ್ಲಿಯೂ ಬರಬೇಕು. ಶುದ್ಧವಾದ ನೀರು, ನಿರಂತರ ವಿದ್ಯುತ್ ಅಲ್ಲಿ ಲಭ್ಯ. ಇಲ್ಲಿಯೂ ಅಂಥ ವ್ಯವಸ್ಥೆ ಬರಬೇಕು. ಮುಖ್ಯವಾಗಿ ಈ ಬಗ್ಗೆ ಚರ್ಚೆಗಳಾಗಬೇಕು ಎಂದು ನುಡಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಎಸ್. ಶಿವಶಂಕರ್ ಮಾತನಾಡಿ, ಇಂದು ಜನಪ್ರತಿನಿಧಿಗಳ ಚಿತ್ತ, ಕುಂದು-ಕೊರತೆಗಳ ಬದಲಾಗಿ ನಿಧಿಗಳತ್ತ ಆಗುತ್ತಿದೆ. ಮೊದಲು ಜನತೆಯತ್ತ ಚಿತ್ತ, ಬಳಿಕ ಅಧಿಕಾರದತ್ತ ಮಾತ್ರ ಇರುತ್ತದೆ. ಒಂದು ಕೋಮು ಅಥವಾ ಜಾತಿಗೆ ಸೀಮಿತವಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ನೇತೃತ್ವ ವಹಿಸಿದ್ದ ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ರಾಜಕಾರಣಕ್ಕೆ ಜಾತಿ, ದ್ವೇಷ, ಅಸೂಯೆ ತಳಹದಿಯಾಗಬಾರದು. ಧರ್ಮ- ತತ್ವಗಳು ಬುನಾದಿಯಾಗಬೇಕು. ಜನರ ಕುಂದು-ಕೊರತೆಗಳನ್ನು ನಿವಾರಿಸಲು ತಾನು ಇದ್ದೇನೆ ಎಂಬ ಅರಿವು ಇದ್ದರೆ ಆ ಜನಪ್ರತಿನಿಧಿ ಸಹಜವಾಗಿ ಗೆಲ್ಲುತ್ತಾನೆ. ರಾಜಕಾರಣಿಗಳಿಗೆ ಬುದ್ಧ, ಬಸವ, ಮಹಾತ್ಮ ಗಾಂಧೀಜಿ ಆದರ್ಶವಾಗಬೇಕು.
 
ಧರ್ಮವನ್ನು ಮೂಲವಾಗಿಸಿಕೊಂಡು ಅವರು ಉತ್ತಮ ರಾಜಕಾರಣ ಮಾಡಿದ್ದಾರೆ. ಮುರುಘಾಮಠವೂ ಸಹ ಭರಮಣ್ಣನಾಯಕನಿಂದ ಹಿಡಿದು ಮಹಾತ್ಮಾ ಗಾಂಧೀಜಿ ಹಾಗೂ ಅನೇಕ ಸಮಕಾಲೀನ ರಾಜಕಾರಣಿಗಳಿಗೆ ಮಾರ್ಗದರ್ಶನ ನೀಡಿತ್ತು ಎಂದು ಸ್ಮರಿಸಿದರು.

ಮಧುರೆ ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಬಸವಪ್ರಭು ಸ್ವಾಮೀಜಿ, ಪ್ರೊ.ಎಸ್.ಎಚ್. ಪಟೇಲ್, ಶಾಸಕ ಕಿಮ್ಮನೆ ರತ್ನಾಕರ ಇದ್ದರು. ಎಂ. ಜಯಕುಮಾರ್ ಇತರರು ಇದ್ದರು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಕೆ. ರಾಮೇಶ್ವರಪ್ಪ ಮತ್ತು ತಂಡ ಸುಗಮ ಸಂಗೀತ ಪ್ರಸ್ತುತಪಡಿಸಿದರು. ಆವರಗೆರೆ ಚಂದ್ರು ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT