ಬೆಂಗಳೂರು: `ನಾಡಿನ ವಿಶ್ವವಿದ್ಯಾಲಯಗಳು ಜಾತಿ ರಾಜಕಾರಣದ ಕೇಂದ್ರಗಳಾಗುತ್ತಿವೆ. ವಿ.ವಿ.ಗಳ ಕೆಲವು ಪ್ರಾಧ್ಯಾಪಕರು ಯುವಕರನ್ನು ತಪ್ಪು ದಾರಿಗೆಳೆಯುವ ಕೆಲಸವನ್ನೂ ಮಾಡುತ್ತಿದ್ದಾರೆ~ ಎಂದು ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಎನ್. ಅಶ್ವತ್ಥ ನಾರಾಯಣ ಬೇಸರ ವ್ಯಕ್ತಪಡಿಸಿದರು.
ಇಲ್ಲಿನ ಬಿಜೆಪಿ ಕಚೇರಿ `ಜಗನ್ನಾಥ ಭವನ~ದಲ್ಲಿ ಯುವ ಮೋರ್ಚಾ ಆಯೋಜಿಸಿದ್ದ `ರಾಜ್ಯ ಯುವನೀತಿ~ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
`ಆರೋಗ್ಯ, ಶಿಕ್ಷಣ, ಕ್ರೀಡೆ ಮುಂತಾದ ಕ್ಷೇತ್ರಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಇದರ ಕುರಿತು ಇನ್ನೊಬ್ಬರನ್ನು ದೂಷಿಸಿ ಪ್ರಯೋಜನ ಇಲ್ಲ. ಆದರೆ, ಈ ಕ್ಷೇತ್ರಗಳ ಬಗ್ಗೆ ಆದ್ಯತೆ ನೀಡುವ ಸಮಗ್ರ ಯುವನೀತಿಯ ಅಗತ್ಯ ರಾಜ್ಯಕ್ಕಿದೆ~ ಎಂದು ಹೇಳಿದರು.
`ನಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗಳಿಗೆ ಕಳುಹಿಸುವುದನ್ನು ಮರೆತಿದ್ದೇವೆ. ಆದರೆ ಜಪಾನ್, ಜರ್ಮನಿಯಂಥ ದೇಶಗಳು ಮಾತೃಭಾಷೆಯಲ್ಲೇ ಶಿಕ್ಷಣ ನೀಡುತ್ತಿವೆ. ಆರ್ಥಿಕವಾಗಿಯೂ ಬೆಳವಣಿಗೆ ಸಾಧಿಸಿವೆ. ಯುವನೀತಿಯ ಮೂಲಕ ಈ ವಿಚಾರದ ಕುರಿತೂ ಗಮನಹರಿಸಬೇಕು~ ಎಂದರು.
ರಾಷ್ಟ್ರೀಯ ಯುವ ಮೋರ್ಚಾ ಕಾರ್ಯದರ್ಶಿ ಎಚ್.ಎಸ್. ಗೋಪಿನಾಥ ರೆಡ್ಡಿ ಮಾತನಾಡಿ, `ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಯುವಕರನ್ನು ತೊಡಗಿಸಿಕೊಳ್ಳಲು ಸ್ಪಷ್ಟ ಯುವನೀತಿಯ ಅವಶ್ಯಕತೆ ಇದೆ~ ಎಂದು ಅಭಿಪ್ರಾಯಪಟ್ಟರು.
ಮಾಜಿ ಶಾಸಕ ನಿರ್ಮಲ್ಕುಮಾರ್ ಸುರಾನಾ, ಬಿಜೆಪಿ ನಗರ ಜಿಲ್ಲಾ ಘಟಕದ ಅಧ್ಯಕ್ಷ ಸಚ್ಚಿದಾನಂದಮೂರ್ತಿ, ಯುವ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ಜಗದೀಶ ಹಿರೇಮನಿ ಮತ್ತಿತರರು ಉಪಸ್ಥಿತರಿದ್ದರು.